ಬಿಜೆಪಿ-ಜೆಡಿಎಸ್ ಜಂಟಿಪ್ರಚಾರ ಕಾರ್ಯಕ್ಕೆ ಚಾಲನೆ
ಹುಣಸೂರು: ಮೈಸೂರು ಕೊಡಗು ಲೋಕಸಭಾಕ್ಷೇತ್ರದ ಎನ್ಡಿಎ ಅಭ್ಯರ್ಥಿ, ಬಿಜೆಪಿಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರ ಹುಣಸೂರಿನಲ್ಲಿ ಶಾಸಕ ಜಿ.ಡಿ.ಹರೀಶ್ಗೌಡರ ನೇತೃತ್ವದಲ್ಲಿ ಚುನಾವಣಾ ಪ್ರಚಾರ ಮತ್ತು ಮತಯಾಚನೆ ಕಾರ್ಯಕ್ಕೆ ಗುರುವಾರ ಚಾಲನೆ ನೀಡಲಾಯಿತು.
ನಗರದ ಅರಸು ಪುತ್ಥಳಿಗೆ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಜಿ.ಡಿ.ಹರೀಶ್ಗೌಡ ಸೇರಿದಂತೆ ಎರಡೂ ಪಕ್ಷಗಳ ಗಣ್ಯರು ಪುಷ್ಪನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಶಾಸಕ ಹರೀಶ್ಗೌಡ, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿರುವ ಯದುವಂಶದ ಕುಡಿಯಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ರ ಎನ್ಡಿಎ ಅಭ್ಯರ್ಥಿಯಾಗಿದ್ದಾರೆ. ರಾಜ್ಯಕ್ಕೆ ಮೈಸೂರು ಸಂಸ್ಥಾನದ ದೊರೆಗಳ ಕೊಡುಗೆಯ ಅಪಾರವಾದದು. ಶಿಕ್ಷಣ, ಪ್ರಜಾತಂತ್ರ ಸ್ಥಾಪನೆ, ಮಹಿಳಾ ಮೀಸಲಾತಿ, ಶೋಷಿತರಿಗೆ ಮೀಸಲಾತಿ, ದೂರದೃಷ್ಟಿಯುಳ್ಳ ನೀರಾವರಿ ಯೋಜನೆಗಳ ಜಾರಿ, ಜನರ ಅಭ್ಯುದಯಕ್ಕಾಗಿ ತಮ್ಮ ಆಸ್ತಿಪಾಸ್ತಿಗಳನ್ನೇ ಅಡವಿಟ್ಟು ದುಡಿದ ಮಹಾನ್ ಸಂಸ್ಥಾನ ಮೈಸೂರು ಸಂಸ್ಥಾನವಾಗಿದೆ. ಇದೀಗ ನಮ್ಮೆಲ್ಲರ ನೆಚ್ಚಿನ ಅಭ್ಯರ್ಥಿಯಾಗಿ ಯದುವೀರ್ ಸ್ಪರ್ಧಿಸಿದ್ದಾರೆ. ಈ ಹಿಂದೆ ಇದ್ದ ಸಂಸದ ಪ್ರತಾಪ್ಸಿಂಹ ಕ್ಷೇತ್ರದಲ್ಲಿ ಅಧ್ಬುತವಾದ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ಇದೀಗ ಯದುವೀರ್ರನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ವಿಶ್ವಮಾನ್ಯ ನಾಯಕ ನರೇಂದ್ರ ಮೋದೀಜಿಯವರನ್ನು ಪ್ರಧಾನಿಯನ್ನಾಗಿಸೋಣ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ಯಾರೊಬ್ಬರೂ ತಪ್ಪಿಸಲು ಸಾಧ್ಯವಿಲ್ಲ. ಮೋದಿಯವರ ಕೈ ಬಲಪಡಿಸಲು ಹುಣಸೂರು ತಾಲೂಕಿನಲ್ಲಿ ನಮ್ಮ ಅಭ್ಯರ್ಥಿಗೆ ಕನಿಷ್ಟ ೨೫ ಸಾವಿರ ಮತಗಳ ಲೀಡ್ ನೀಡಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ದುಡಿಯೋಣ. ಮನೆಮನೆಗೆ ತೆರಳಿ ಮತಯಾಚಿಸಿ ಗೆಲ್ಲಿಸೋಣವೆಂದರು.
ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಶ್ರೇಷ್ಠಭಾರತ ಮತ್ತು ವಿಕಸಿತ ಭಾರತಕ್ಕಾಗಿ ಮೋದಿ ಕೈ ಬಲಪಡಿಸುವ ಅಗತ್ಯವಿದೆ. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದರು. ಅರಸು ಪುತ್ಥಳಿಗೆ ಮಾಲಾರ್ಪಣೆ ಕೇವಲ ಸಾಂಕೇತಿಕವಲ್ಲ. ಅವರ ಸಾಮಾಜಿಕ ಕಳಕಳಿಯನ್ನು ಅಳವಡಿಸಿಕೊಳ್ಳುವತ್ತ ಮುಂದಡಿಯಿಡಲು ಸ್ಫೂರ್ತಿದಾಯಕ ಕಾರ್ಯವಾಗಿದೆ. ಮೋದಿ ಕಳೆದ ೧೦ ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನಮಾನಸದಲ್ಲಿ ಇದೆ. ಜೆಜೆಎಂ, ರಾಷ್ಟ್ರೀಯ ಹೆದ್ದಾರಿಗಳು, ಮೆಡಿಕಲ್ ಕಾಲೇಜುಗಳು, ವಿವಿಗಳು, ಉಜ್ವಲ ಯೋಜನೆ, ಜನಧನ್ ಹೀಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಮುಂದುವರೆಸಬೇಕಿದೆ. ತಾಲೂಕಿನಲ್ಲಿ ತಂಬಾಕು ಬೆಳೆಗಾರರ ಸಮಸ್ಯೆಗಳ ಕುರಿತು ಸೇರಿದಂತೆ ಯಾವುದೇ ಸಮಸ್ಯೆಯ ಪರಿಹಾರಕ್ಕೆ ನಾನು ಸಂಸತ್ತಿನಲ್ಲಿ ನಿಮ್ಮೆಲ್ಲರ ದನಿಯಾಗಲಿದ್ದೇನೆ. ನಾವೆಲ್ಲರೂ ಒಂದಾಗಿ ಸೇರಿ ಸಮಸ್ಯೆಗಳ ಪರಿಹಾರಕ್ಕೆ ಶ್ರಮವಹಿಸೋಣ. ಹುಣಸೂರಿನೊಂದಿಗೆ ನನ್ನ ವೈಯಕ್ತಿಕ ಸಂಬಂಧ ನನಗೆ ಅಪ್ಯಾಯಮಾನವಾದದು ಎಂದು ಸ್ಮರಿಸಿದರು.
ದೇವರಾಜ ಅರಸು ಮೊಮ್ಮಗ ಮಂಜುನಾಥ್ ಅರಸು ಮಾತನಾಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಕಾಂತರಾಜು, ನಗರಾಧ್ಯಕ್ಷ ನಾರಾಯಣ, ನಿಕಟಪೂರ್ವ ಅಧ್ಯಕ್ಷ ನಾಗಣ್ಣಗೌಡ, ಜೆಡಿಎಸ್ ಅಧ್ಯಕ್ಷ ದೇವರಾಜ ಒಡೆಯರ್, ಮುಖಂಡರಾದ ನಾಗರಾಜ ಮಲ್ಲಾಡಿ, ಅಸ್ವಾಳ್ ಕೆಂಪೇಗೌಡ, ಹರವೆ ಶ್ರೀಧರ್,. ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ ಮತ್ತು ಎರಡೂ ಪಕ್ಷಗಳ ಕಾರ್ಯಕರ್ತರು ಹಾಜರಿದ್ದರು.
ಹುಣಸೂರಿನ ಮೊಮ್ಮಗ: ಶಾಸಕ ಜಿ.ಡಿ.ಹರೀಶ್ಗೌಡ ಮಾತನಾಡುವ ವೇಳೆ ಎನ್ಡಿಎ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ರ ಹುಣಸೂರು ತಾಲೂಕಿನ ನಂಟಿನ ಗುಟ್ಟು ಬಿಚ್ಚಿಟ್ಟರು. ದೇವರಾಜ ಅರಸು ಹುಟ್ಟೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಯದುವೀರ್ರ ತಂದೆಯ ತಂದೆ ಬಸವರಾಜು ಅರಸು ವಾಸವಿದ್ದರು. ಹಾಗಾಗಿ ಅವರು ಈ ಊರಿನ ಮೊಮ್ಮಗ. ಅವರನ್ನು ಗೆಲ್ಲಿಸಿ ಕಳುಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
೧೧ಊUಓ೧: ಹುಣಸೂರು ನಗರದ ಅರಸು ಪುತ್ಥಳಿಗೆ ಶಾಸಕ ಜಿ.ಡಿ.ಹರೀಶ್ಗೌಡ ಮತ್ತು ಎನ್ಡಿಎ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪುಷ್ಪನಮನ ಸಲ್ಲಿಸಿ, ಇಬ್ಬರೂ ಹಸ್ತಲಾಘವ ನೀಡಿ ನೆರೆದ ಕಾರ್ಯಕರ್ತರಿಗೆ ಸ್ಪೂರ್ತಿ ತುಂಬಿದರು. ನಾಗರಾಜ ಮಲ್ಲಾಡಿ, ಮಂಜುನಾಥ್ ಅರಸ್, ನಾಗಣ್ಣಗೌಡ, ಕಾಂತರಾಜು, ನಾರಾಯಣ ಇತರರಿದ್ದಾರೆ.