ವರ್ಷಗಳೇ ಕಳೆದರು ಭರ್ತಿಯಾಗದ ಬಿಸಿಎಂ ತಾಲೂಕು ಕಲ್ಯಾಣಾಧಿಕಾರಿ ಹುದ್ಧೆ
ಚಿಕ್ಕಮಾಳಿಗೆ ಕೊಳ್ಳೇಗಾಲ
ವರ್ಷಗಳೇ ಉರುಳಿದರೂ ಪಟ್ಟಣದಲ್ಲಿರುವ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹುದ್ಧೆ ಖಾಲಿ ಇದ್ದು, ಕೇವಲ ಪ್ರಬಾರ ಅಧಿಕಾರಿಗಳ ಆಡಳಿತಕ್ಕೆ ಸೀಮಿತವಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ ಪಟ್ಟಣದ ವಾಸವಿ ಮಹಲ್ ಕಲ್ಯಾಣ ಮಂಟಪದ ಎದುರಿನಲ್ಲಿರುವ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನಿವೃತ್ತ ಇಂಜಿನಿಯರ್ ಗುರುಮಲ್ಲಪ್ಪ ಅವರಿಗೆ ಸೇರಿದ ಮನೆಯನ್ನು ಮಾಸಿಕ 12 ಸಾವಿರ ರೂ.ಗಳಿಗೆ ಬಾಡಿಗೆ ಪಡೆದು ಕಚೇರಿ ನಡೆಸಲಾಗುತ್ತಿದೆ.
ಹನೂರು ತಾಲೂಕಿನಲ್ಲಿ 3 ಹಾಗೂ ಕೊಳ್ಳೇಗಾಲ ತಾಲೂಕಿನಲ್ಲಿ 5 ಬಿಸಿಎಂ ಹಾಸ್ಟೆಲ್ಗಳ ಮೇಲ್ವಿಚಾರಣೆ ಹಾಗೂ ಬಿಸಿಎಂ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಮಂಜೂರು ಕಾರ್ಯಾಭಾರ ಸೇರಿದಂತೆ ಇತರ ಜವಾಬ್ದಾರಿಗಳು ಈ ಕಚೇರಿಗೊಳಪಡುತ್ತಿವೆ. ಅಂತೆಯೇ ಇವೆಲ್ಲದರ ಮುಖ್ಯಸ್ಥರಾಗಿ ಕಚೇರಿಯಲ್ಲಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕರ್ತವ್ಯ ನಿರ್ವಹಿಸಬೇಕು. ಆದರೆ, ಇಲ್ಲಿ ಹಾಗಾಗುತ್ತಿಲ್ಲ. ಬದಲಿಗೆ ಕಚೇರಿಯ ಎಫ್ಡಿಸಿ ಎಂ.ಶಿವರಾಜು ಅವರು 2 ವರ್ಷಗಳಿಂದಲೂ ಪ್ರಬಾರ ಜವಾಬ್ದಾರಿವಹಿಸಿಕೊಂಡಿದ್ದಾರೆ.
ಪರಿಸ್ಥಿತಿ ಹೀಗಿದ್ದರೂ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಖಾಲಿ ಇರುವ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹುದ್ಧೆಗೆ ಖಾಯಂ ಅಧಿಕಾರಿಗಳನ್ನು ನೇಮಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ.
ತಾಪಂ ಸಭಾಂಗಣದಲ್ಲಿ ಕಳೆದ ತಿಂಗಳು ನಡೆದ ಕೆಡಿಪಿ ಸಭೆಯಲ್ಲಿ ಈ ವಿಚಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಸಮ್ಮುಖದಲ್ಲಿ ಚರ್ಚೆಗೆ ಬಂದಿತು. ಸಭೆಗೆ ಆಗಮಿಸಿದ್ದ ಕಚೇರಿಯ ಪ್ರಬಾರ ಕಲ್ಯಾಣಾಧಿಕಾರಿ ಎಂ.ಶಿವರಾಜು ಅವರು ತಮ್ಮ ಕಚೇರಿಗೆ ಅಧಿಕಾರಿ ನೇಮಿಸುವ ಸಂಬಂಧ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಗಮನ ಸೆಳೆದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಶೀಘ್ರವೇ ಅಧಿಕಾರಿ ನೇಮಿಸುವ ಭರವಸೆ ನೀಡಿದರು. ಆದರೆ, ಆ ಕೆಲಸವಿನ್ನೂ ಆಗಿಲ್ಲ.
ಕಚೇರಿ ಉಸ್ತುವಾರಿ ಹಿಂದೆಲ್ಲ ವಿಸ್ತರಣಾಧಿಕಾರಿ ಎಂಬ ಹುದ್ಧೆಗೆ ಸೀಮಿತವಾಗಿತ್ತು. ಆ ವೇಳೆಗೆ ಸರ್ಕಾರ ವಿಸ್ತರಣಾಧಿಕಾರಿ ನೇಮಿಸುವಲ್ಲಿ ನಿರ್ಲಕ್ಷ ತೋರುತ್ತಿತ್ತು. ಅಂತೆಯೇ, ಇಲ್ಲಿಗೆ ಅಧಿಕಾರಿಗಳು ವರ್ಗ ಮಾಡಿಸಿಕೊಂಡು ಬರಲು ಆಸಕ್ತಿಯನ್ನು ತೋರುತ್ತಿರಲಿಲ್ಲ. ಈ ಕಾರಣಕ್ಕೆ ಹಿಂದೆಲ್ಲ, ಹಾಸ್ಟೆಲ್ ವಾರ್ಡನ್ ಆಗಿದ್ದ ಗುರುಸ್ವಾಮಿ ಅವರು 2021 ಆ.1 ರಿಂದ 2022 ಅ.31ರವರೆಗೆ ಪ್ರಬಾರ ವಿಸ್ತರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಉದಾಹರಣೆ ಇದೆ. ಅನಂತರಾಜು ಎಂಬುವರು ಪ್ರಬಾರ ಕಲ್ಯಾಣಾಧಿಕಾರಿಯಾಗಿ ಕೆಲಸ ನಿರ್ವಹಿಸಿ ಹೋಗಿದ್ದಾರೆ.
ಹಾಸ್ಟೆಲ್ ವಾರ್ಡನ್ ಹುದ್ದೆಗಳು ಖಾಲಿಖಾಲಿ: ಇದೀಗ ಕಚೇರಿ ಎಫ್ಡಿಸಿ ಎಂ.ಶಿವರಾಜು ಅವರ 2022 ನ.1 ರಿಂದ ಪ್ರಬಾರ ಕಲ್ಯಾಣಾಧಿಕಾರಿಯಾಗಿ ಕಾರ್ಯಾಭಾರ ನಡೆಸುತ್ತಿದ್ದಾರೆ. ಇದೇ ಪರಿಸ್ಥಿತಿ ಜಿಲ್ಲೆಯಲ್ಲಿರುವ ಬಿಸಿಎಂ ಇಲಾಖೆಯ ಇತರ ಕಚೇರಿಯಲ್ಲಿಯೂ ಇದೆ ಎನ್ನಲಾಗಿದೆ. ಮಾತ್ರವಲ್ಲದೇ, ಹನೂರು ಹಾಗೂ ಕೊಳ್ಳೇಗಾಲ ತಾಲೂಕಿನಲ್ಲಿರುವ ಒಟ್ಟು 8 ಬಿಸಿಎಂ ಹಾಸ್ಟೆಲ್ ಗಳಲ್ಲಿ 4 ವಾರ್ಡನ್ ಹುದ್ದೆಗಳು ಖಾಲಿ ಇದ್ದು, ಇದನ್ನು ಇತರ ನಾಲ್ವರು ವಾರ್ಡನ್ ಗಳು ಹೆಚ್ಚುವರಿ ಜವಾಬ್ದಾರಿವಹಿಸಿಕೊಂಡು ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಇಷ್ಟಾದರೂ ಮಾತ್ರ ಸಂಬಂಧಿಸಿದವರು ಸೂಕ್ತ ಕ್ರಮವಹಿಸದೆ ಜಾಣ ನಿದ್ರೆಗೆ ಜಾರಿದ್ದಾರೆ.
21ಕೆಜಿಎಲ್-3 ಫೋಟೋ ಶೀರ್ಷಿಕೆ: ಕೊಳ್ಳೇಗಾಲ ಪಟ್ಟಣದಲ್ಲಿರುವ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯ ಹೊರಗಿನ ಫೋಟೋ ಹಾಗೂ ಕಚೇರಿ ಒಳಗೆ ಅಧಿಕಾರಿಯ ಖಾಲಿ ಕುರ್ಚಿ ಫೋಟೋ ಇದೆ.