ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಮಾಹಿತಿ । ರೂ.7.91 ಕೋಟಿ ಲಾಭ, ಶೇ.10 ಡಿವಿಡೆಂಡ್ ಘೋಷಣೆ
ಡಿಸಿಸಿ ಬ್ಯಾಂಕ್ 99ನೇ ವಾರ್ಷಿಕ ಮಹಾಸಭೆ
ಪ್ರತಿನಿಧಿ ವರದಿ ಮಡಿಕೇರಿ
ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಎಲ್ಲ ಸಹಕಾರ ಬ್ಯಾಂಕ್ಗಳಲ್ಲಿ ಕೃಷಿಕರಿಗೆ ಸರ್ಕಾರದ ನಿರ್ದೇಶನದಂತೆ ಶೂನ್ಯ ಬಡ್ಡಿ ದರದಲ್ಲಿ 3 ರಿಂದ 5 ಲಕ್ಷ ರೂ.ವರೆಗೂ ಸಾಲ ನೀಡಲು ಮುಂದಾಗಲಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉನ್ನತಿ ಭವನದ ದಿ.ಪಂದ್ಯಂಡ ಐ. ಬೆಳ್ಯಪ್ಪ ಸ್ಮಾರಕ ಸಭಾಂಗಣದಲ್ಲಿ ಶನಿವಾರ ನಡೆದ ಬ್ಯಾಂಕಿನ 99ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂ. ವರೆಗೂ ಸಾಲವನ್ನು ಸಹಕಾರ ಬ್ಯಾಂಕ್ಗಳ ಮೂಲಕ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಸರ್ಕಾರದ ಕೃಷಿ ಅಲ್ವಾವಧಿ 5 ಲಕ್ಷ ರೂ.ಗೆ ಏರಿಸಿದೆ. ಹಾಗೆಯೇ ಮಧ್ಯಮಾವಧಿ ಬಡ್ಡಿ ರಿಯಾಯಿತಿ ಯೋಜನೆಯಡಿ ಗರಿಷ್ಠ ಮಿತಿ 15 ಲಕ್ಷ ರೂ.ಕ್ಕೆ ಹೆಚ್ಚಿಸಲಾಗಿದೆ. ಕೊಡಗು ಜಿಲ್ಲೆಯ ಖಾಯಂ ನಿವಾಸಿಗಳ ಮಕ್ಕಳು ದೇಶ ಮತ್ತು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಬ್ಯಾಂಕಿನಲ್ಲಿ ವಿದ್ಯಾ ಸಹಕಾರವೆಂಬ ವಿದ್ಯಾಭ್ಯಾಸ ಸಾಲದ ಯೋಜನೆಯನ್ನು ಗರಿಷ್ಠ 60 ಲಕ್ಷ ರೂ.ವರೆಗೆ ನೀಡಲಾಗುತ್ತಿದೆ ಎಂದರು.
ಸಹಕಾರ ಬ್ಯಾಂಕ್ಗಳು ಸರ್ಕಾರದ ಆದೇಶವನ್ನು ಕಡ್ಡಾಯವಾಗಿ ಪ್ರಥಮ ಆದ್ಯತೆಯಲ್ಲಿ ಪಾಲಿಸಬೇಕು. ಯಾವುದೇ ಕಾರಣಕ್ಕೂ ಲೆಕ್ಕ ಪರಿಶೋಧನೆಯನ್ನು ವಿಳಂಬ ಮಾಡಬಾರದು. ಜಿಲ್ಲೆಯಲ್ಲಿ 73 ವಿವಿಧ ರೀತಿಯ ಸಹಕಾರ ಸಂಘಗಳು ಇದ್ದು, ಆಯಾಯ ಆರ್ಥಿಕ ವರ್ಷದಲ್ಲಿ ಲೆಕ್ಕಪರಿಶೋಧನೆ ಮಾಡಿಸಿಕೊಳ್ಳಬೇಕು. ಈ ಸಂಬಂಧ ವರದಿಯನ್ನು ಪ್ರತೀ ವರ್ಷ ಡಿಸಿಸಿ ಬ್ಯಾಂಕ್ಗೆ ಸಲ್ಲಿಸುವಂತೆ ತಿಳಿಸಿದರು.
2023-24ನೇ ಸಾಲಿನ ಲೆಕ್ಕ ಪರಿಶೋಧನೆ(ಆಡಿಟ್)ನಲ್ಲಿ ಇದೇ ಮೊದಲ ಬಾರಿಗೆ ಶೇ.93 ರಷ್ಟು ಅಂಕ ಪಡೆದು. ಬ್ಯಾಂಕ್ ಕಳೆದ ಹಲವು ವರ್ಷಗಳಿಂದ ಆಡಿಟ್ನಲ್ಲಿ ಎ-ವರ್ಗೀಕರಣ ಇರುತ್ತದೆ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನಿಂದ, 2022-23 ನೇ ಸಾಲಿಗೆ ಅತ್ಯುತ್ತಮ ಕಾರ್ಯ ನಿರ್ವಹಣೆಗೆ ನಮ್ಮ ಬ್ಯಾಂಕಿಗೆ ಸೆ.13 ರಂದು ನಡೆದ ಅಪೆಕ್ಸ್ ಬ್ಯಾಂಕಿನ ವಾರ್ಷಿಕ ಮಹಾ ಸಭೆಯಲ್ಲಿ ಅತ್ಯುತ್ತಮ ಸಾಧನಾ ತೃತೀಯ ಪ್ರಶಸ್ತಿ ದೊರೆತಿದೆ ಎಂದು ಮಾಹಿತಿ ನೀಡಿದರು.
ಸದಸ್ಯತ್ವ ಮತ್ತು ಪಾಲು ಬಂಡವಾಳ ಮಾರ್ಚ್ ಅಂತ್ಯಕ್ಕೆ ಒಟ್ಟು 287 ಸಹಕಾರ ಸಂಘಗಳು ಬ್ಯಾಂಕ್ನ ಸದಸ್ಯತ್ವವನ್ನು ಪಡೆದಿದ್ದು, ಬಿ-ವರ್ಗದ ಸದಸ್ಯ ಸಂಘಗಳಿಂದ 31.44 ಕೋಟಿ ರೂ. ಪಾಲು ಬಂಡವಾಳ ಹಾಗೂ ದೊಡ್ಡ ಮೊತ್ತದ ಸಾಲ ಪಡೆಯುವ ಸಿ-ವರ್ಗದ ಸದಸ್ಯರಿಂದ 0.03 ಕೋಟಿ ರೂ. ಒಟ್ಟು 31.47 ಕೋಟಿ ರೂ. ಷೇರು ಬಂಡವಾಳ ಸಂಗ್ರಹಿಸಿದ್ದು, ಕಳೆದ ಸಾಲಿಗೆ ಹೋಲಿಸಿದಾಗ 3.04 ಕೋಟಿ ರೂ. ಪಾಲು ಬಂಡವಾಳದಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದರು.
ವಿವಿಧ ಸಹಕಾರ ಬ್ಯಾಂಕ್ಗಳ ಅಧ್ಯಕ್ಷ ನಂದ ಸುಬ್ಬಯ್ಯ, ಎಂ.ಬಿ.ದೇವಯ್ಯ, ರವಿಬಸಪ್ಪ, ನಾಗೇಶ್ ಕುಂದಲ್ಪಾಡಿ, ಕೃಷ್ಣ ಗಣಪತಿ ಇತರರು ಸಹಕಾರ ಸಂಘಗಳ ಬೆಳವಣಿಗೆ ಮತ್ತು ಅಭಿವೃದ್ಧಿ ಸಂಬಂಧಿಸಿದಂತೆ ಹಲವು ವಿಷಯ ಪ್ರಸ್ತಾಪಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಎಸ್.ಪೂವಯ್ಯ, ನಿರ್ದೇಶಕ ಹೊಟ್ಟೆಂಗಡ ಎಂ. ರಮೇಶ್, ಹೊಸೂರು ಜೆ. ಸತೀಶ್ ಕುಮಾರ್, ಕೆ.ಅರುಣ್ ಭೀಮಯ್ಯ, ಕಾಂಗೀರ ಎನ್. ಸತೀಶ್, ಪೂಳಂಡ ಪಿ.ಪೆಮ್ಮಯ್ಯ, ಎಚ್.ಕೆ.ಮಾದಪ್ಪ, ಎಸ್.ಸಿ.ಶರತ್ಶೇಖರ್, ಎನ್.ಎಂ.ಉತ್ತಪ್ಪ, ಟಿ.ಆರ್.ಶರವಣ ಕುಮಾರ್, ಗುಮ್ಮಟ್ಟೀರ ಎಸ್. ಕಿಲನ್ ಗಣಪತಿ, ಜಲಜಾ ಶೇಖರ್, ಎಂ.ಕೆ.ಬೆಳ್ಳಿಯಪ್ಪ, ವೃತ್ತಿಪರ ನಿರ್ದೇಶಕ ಎ.ಗೋಪಾಲಕೃಷ್ಣ, ಮುಂಡಂಡ ಸಿ.ನಾಣಯ್ಯ ಸಹಕಾರ ಸಂಘಗಳ ಉಪ ನಿಬಂಧಕರಾದ ಜಿ.ಆರ್.ವಿಜಯ್ ಕುಮಾರ್, ಸಿಇಒ ಪ್ರವೀಣ್ ಬಿ. ನಾಯಕ್, ಪ್ರಧಾನ ವ್ಯವಸ್ಥಾಪಕಿ ಜಿ.ಎಂ.ಬೋಜಮ್ಮ ಇತರರು ಇದ್ದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು 1921ರ ಜೂ.28 ರಂದು 4000 ರೂ. ಪಾಲು ಬಂಡವಾಳ, 10 ಸಾವಿರ ರೂ. ಠೇವಣಿ, 48 ಸಹಕಾರ ಸಂಘಗಳು ಮತ್ತು 16 ಬಿಡಿ ಸದಸ್ಯರಿಂದ ಸ್ಥಾಪನೆಗೊಂಡು, ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಸಾರ್ಥಕತೆಯ 103 ವರ್ಷಗಳನ್ನು ಪೂರ್ಣಗೊಳಿಸಿದರು.
ಸ್ವಂತ ಬಂಡವಾಳ: ಮಾ.31ರ ಅಂತ್ಯಕ್ಕೆ ಷೇರು ಬಂಡವಾಳ, ಶಾಸನಬದ್ಧ ಮೀಸಲು ನಿಧಿಗಳು ಹಾಗೂ ಬಟವಾಡೆಯಾಗದ ಲಾಭಾಂಶದ ಮೊತ್ತವನ್ನು ಒಳಗೊಂಡಂತೆ ಒಟ್ಟು 113.33 ಕೋಟಿ ರೂ. ಮೊತ್ತದ ಸ್ವಂತ ಬಂಡವಾಳವನ್ನು ಹೊಂದಿದ್ದು, ಬ್ಯಾಂಕಿನ ನೆಟ್ವರ್ತ್ ಪ್ರಮಾಣ 108.78 ಕೋಟಿ ರೂ. ಇದ್ದು ಶೇ.100ಕ್ಕಿಂತ ಮೇಲ್ಪಟ್ಟಿರುವುದರಿಂದ ಬ್ಯಾಂಕ್ ಆರ್ಥಿಕವಾಗಿ ಉತ್ತಮ ವಾಗಿರುತ್ತದೆ. 2023-24ನೇ ಸಾಲಿಗೆ ಬ್ಯಾಂಕ್ನ ಒಟ್ಟು ವ್ಯವಹಾರವು 2926.07 ಕೋಟಿ ರೂ.ಗಳಾಗಿದ್ದು, ಹಿಂದಿನ ಸಾಲಿಗಿಂತ 524.97 ಕೋಟಿ ರೂ. ಹೆಚ್ಚಳವಾಗಿರುತ್ತದೆ.
ಠೇವಣಾತಿಗಳು: ವರದಿ ಸಾಲಿನ ಮಾ.31ರ ಅಂತ್ಯಕ್ಕೆ 1612.03 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ 280.93 ಕೋಟಿ ರೂ. ಹೆಚ್ಚುವರಿ ಠೇವಣಿ ಸಂಗ್ರಹಿಸಲಾಗಿ ಶೇ.21.10ರ ಪ್ರಗತಿ ಸಾಧಿಸಲಾಗಿರುತ್ತದೆ. 2024-25ನೇ ಸಾಲಿಗೆ 1760.00ಕೋಟಿ ರೂ. ಠೇವಣಾತಿ ಸಂಗ್ರಹಣೆ ಗುರಿ ಹೊಂದಲಾಗಿದೆ.
ಬ್ಯಾಂಕಿನಿಂದ ವಿತರಿಸಿದ ಸಾಲಗಳು: ಬ್ಯಾಂಕು ಕೃಷಿ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತ ಬಂದಿದ್ದು, ಬ್ಯಾಂಕಿಗೆ ಸಂಯೋಜಿಸಲ್ಪಟ್ಟ ಸಹಕಾರಿ ಸಂಘಗಳ ಮುಖಾಂತರ ಅಲ್ಪಾವಧಿ ಬೆಳೆ ಸಾಲ, ಮಧ್ಯಮಾವಧಿ ಕೃಷಿ ಸಾಲ, ನಗದು ಸಾಲ ಮತ್ತು ಮಾರ್ಕೇಟಿಂಗ್ ಫೈನಾನ್ಸ್ ಸಾಲ ಎಂಎಸ್ಸಿ ಸಾಲ ನೀಡಲಾಗುತ್ತಿರುವುದಲ್ಲದೆ, ಬ್ಯಾಂಕಿನ ನಾಮ ಮಾತ್ರ ಸದಸ್ಯರಿಗೆ ನೇರವಾಗಿ ರಾಜ್ಯ ಸರ್ಕಾರದ ಬಡ್ಡಿ ರಿಯಾಯಿತಿ ಬದ್ಧತೆಯಡಿ ಕೃಷಿ ಸ್ಥಿರಾಸ್ತಿ ಆಧಾರಿತ ಎಕ್ರೆ ಒಂದಕ್ಕೆ ರೂ 1.50 ಲಕ್ಷಗಳವರೆಗೆ, ವಿವಿಧ ಮಧ್ಯಮಾವಧಿ ಕೃಷಿ ಸಾಲಗಳಾದ ತುಂತುರು ನೀರಾವರಿ, ಕೆರೆ ನಿರ್ಮಾಣ,ಕಾಫಿ ಕಣ/ಗೋದಾಮು ನಿರ್ಮಾಣ, ಪಲ್ಪರ್ ಯೂನಿಟ್, ಸೋಲಾರ್ಬೇಲಿ ಮತ್ತು ತಂತಿ ಬೇಲಿ ಅಳವಡಿಕೆಗೆ, ಟ್ರಾಕ್ಟರ್ ಟಿಲ್ಲರ್ ಖರೀದಿಗೆ ಮತ್ತು ವಿವಿಧ ಆಧುನಿಕ ಕೃಷಿ ಯಂತ್ರೋಪಕರಣಗಳ ಖರೀದಿ, ವಾಹನ ಸಾಲ,ಮನೆ ನಿರ್ಮಾಣ ಸಾಲ, ವೇತನ ಆಧಾರಿತ ಸಾಲ, ಪಿಗ್ಮಿ ಆಧಾರಿತ ಜಾಮೀನು ಸಾಲ, ವ್ಯಾಪಾರ ಮತ್ತು ವ್ಯವಹಾರ ನಡೆಸಲು ಓವರ್ಡ್ರಾಪ್ಟ್ ಸೌಲಭ್ಯ. ಪಟ್ಟಣ ಪ್ರದೇಶದಲ್ಲಿನ ನಾಗರೀಕರಿಗೆ/ವೇತನದಾರರಿಗೆ ಮನೆ/ಕಟ್ಟಡ/ನಿವೇಶನಗಳ ಅಡಮಾನ ಮತ್ತು ಖರೀದಿಗಾಗಿ ಸಾಲ ಹಾಗೂ ಸೋಲಾರ್ ಉಪಕರಣ ಖರೀದಿ ಸಾಲ ಹಾಗೂ ರೈತ ಗ್ರಾಹಕರಿಗೆ ಅನುಕೂಲವಾಗಲೆಂದು ರಿಯಾಯಿತಿ ಬಡ್ಡಿ ದರದಲ್ಲಿ ಆರ್.ಟಿ.ಸಿ. ಆಧಾರಿತ ಆಭರಣ ಈಡಿನ ಸಾಲ, ದೊಡ್ಡ ರೈತರಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರದ ಬಡ್ಡಿ ರಿಯಾಯಿತಿಯ ಮಿತಿಗೆ ಒಳಪಟ್ಟು ಗರಿಷ್ಠ ರೂ.60 ಲಕ್ಷಗಳವರೆಗಿನ ವ್ಯಕ್ತಿಗತ ಬೆಳೆ ಸಾಲವನ್ನು ನೀಡಲಾಗುತ್ತಿದೆ.
ಬ್ಯಾಂಕಿನಿAದ ಜಿಲ್ಲೆಯ ವಿವಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ 2023 ರಿಂದ 2026 ರ ಸಾಲಿಗೆ ಬೆಳೆ ಸಾಲದ ಎನ್.ಸಿ.ಎಲ್ ರೂ 1006.94 ಕೋಟಿ ಮಿತಿ ಮಂಜೂರಾತಿಯಲ್ಲಿ ಸಹಕಾರ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೂ 730.36 ಕೋಟಿ ಅರ್ಹ ರೈತ ಸದಸ್ಯರಿಗೆ ಸಾಲ ವಿತರಣೆ ಮಾಡಲಾಗಿರುತ್ತದೆ. ಜಿಲ್ಲೆಯ ರೈತರ ಅನುಕೂಲ ಮತ್ತು ಅಭಿವೃದ್ಧಿಗಾಗಿ ನೂತನ ಆಡಳಿತ ಮಂಡಳಿ ಚಿಂತನೆಯಂತೆ ಹೊಸ ಸಾಲ ಯೋಜನೆಗಳು: ಜಿಲ್ಲೆಯ ಸಹಕಾರ ಸಂಘಗಳಿಗೆ ನಿವೇಶನ/ಕಟ್ಟಡ ಖರೀದಿಗೆ ಸಾಲ ಯೋಜನೆಯನ್ನು ರೂಪಿಸಿಲಾಗಿದೆ.
ಕೃಷಿಕರು ತಮ್ಮ ತೋಟ ಮತ್ತು ಹೊಲಗಳಲ್ಲಿ ಮನೆ ನಿರ್ಮಿಸಲು ಅನುಕೂಲವಾಗುವಂತೆ, ವಾಣಿಜ್ಯ ಬೆಳೆ ಸ್ಥಿರಾಸ್ತಿ ಆಧಾರಿತ ಎಕ್ರೆ ಒಂದರ ರೂ.5 ಲಕ್ಷ ಮತ್ತು ಹೊಲಗಳಿಗೆ ಎಕ್ರೆ ಒಂದಕ್ಕೆ 3 ಲಕ್ಷ ರೂ.ಗಳಷ್ಟು ಸಾಲವನ್ನು ಗ್ರಾಮೀಣ ಮನೆ ನಿರ್ಮಾಣ ಉದ್ದೇಶಕ್ಕಾಗಿ ನೀಡಲು ಕ್ರಮವಿಡಲಾಗಿರುತ್ತದೆ.
ಗ್ರಾಹಕರ ಅಗತ್ಯತೆಯನ್ನು ಪೂರೈಸುವ ಉದ್ಧೇಶದಿಂದ ನೀಡಲಾಗುತ್ತಿರುವ ಸಾಮಾನ್ಯ ಉದ್ಧೇಶ ಸಾಲದ ಮಿತಿಯನ್ನು ಏಕ್ರೆ ಒಂದಕ್ಕೆ 2 ಲಕ್ಷ ರೂ.ದಿಂದ 3 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಮನೆ ನಿರ್ಮಾಣ ಸಾಲಗಳ ವೈಯಕ್ತಿಕ ಗರಿಷ್ಠ ಮಿತಿ ಆರ್.ಬಿ.ಐ.ಯ ನಿರ್ದೇಶನದಂತೆ 75 ಲಕ್ಷ ರೂ.ಗೆ ಹೆಚ್ಚಿಸಲಾಗಿರುತ್ತದೆ.
ಸದಸ್ಯ ಸಹಕಾರ ಸಂಘಗಳ ಶ್ರೆಯೋಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ವಿವಿಧ ಅಭಿವೃದ್ಧಿ ಪೂರಕ ಚಟುವಟಿಕೆಗಳಿಗೆ ಶೇ.3ರ ಬಡ್ಡಿ ಪ್ರೋತ್ಸಾಹಧನದೊಂದಿಗೆ ಅಥವಾ ಸಾಲದ ಮೇಲಿನ ಶೇ.10ರಂತೆ ಗರಿಷ್ಠ 2.50 ಲಕ್ಷ ರೂ.ಗಳ ಅನುದಾನ ಸಹಿತ ಬಹುಸೇವಾ ಸಾಲ ಯೋಜನೆಯಡಿ ಯೋಜನಾ ವೆಚ್ಚದ ಶೇ.90 ರಷ್ಟು ಸಾಲವನ್ನು ನೀಡುವ ಮುಖಾಂತರ ಸದಸ್ಯ ಸಹಕಾರ ಸಂಘಗಳ ವ್ಯಾಪಾರಾಭಿವೃಧ್ಧಿಗೆ ಪ್ರೋತ್ಸಾಹಿಸಲಾಗಿದೆ ಎಂದರು.
ಫೋಟೋ 21 ಎಂಡಿಕೆ 05 ; ಮಡಿಕೇರಿ ಡಿಸಿಸಿ ಬ್ಯಾಂಕ್ ವಾರ್ಷಿಕ ಮಹಾಸಭೆ
06 ; ಪಾಲ್ಗೊಂಡಿದ್ದ ಸದಸ್ಯರುಗಳು