ಬೆಂಗಳೂರು: ಲೋಕಸಭೆಯ ರಾಜ್ಯದ 14 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಶುಕ್ರವಾರ ಮತದಾನ ನಡೆಯಿತು. ಮೊದಲ ಹಂತದ ಚುನಾವಣೆ ಸಂದರ್ಭದಲ್ಲಿ ಎಸ್ಎಸ್ಟಿ ಮತ್ತು ಪೊಲೀಸ್ ಇಲಾಖೆ ರಾಜ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಹಣ, ಮದ್ಯ, ಡ್ರಗ್ಸ್, ಚಿನ್ನಾಭರಣ ಮತ್ತು ಉಚಿತ ಉಡುಗೊರೆಗಳನ್ನು ಜಪ್ತಿ ಮಾಡಿದ್ದು, ಈ ಸಂಬಂಧ 2,172 ಪ್ರಕರಣಗಳು ದಾಖಲಾಗಿವೆ. ಅಬಕಾರಿ ಇಲಾಖೆ 3098 ಹೀನಸ್ ಪ್ರಕರಣಗಳನ್ನು ದಾಖಲಿಸಿದೆ.
ಲೈಸೆನ್ಸ್ ಉಲ್ಲಂಘನೆ ಮಾಡಿದ್ದಕ್ಕೆ 4789 ಪ್ರಕರಣ, ಎನ್ಡಿಪಿಎಸ್ ಕಾಯ್ದೆ ಅಡಿ 177, ಸೆಕ್ಷನ್ 15ರಡಿ 28,299 ಪ್ರಕರಣಗಳು ದಾಖಲಾಗಿವೆ. ಅಧಿಕಾರಿಗಳು ಒಟ್ಟು 1,916 ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಇನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಲಹಂಕಾದ ಮಾದನಾಯನಹಳ್ಳಿ ಬಳಿ 4.80 ಕೋಟಿ ರೂಪಾಯಿ ಜಪ್ತಿ ಮಾಡಿದ್ದಾರೆ. ಎಫ್ಎಸ್ಟಿ ತಂಡ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೋರಮಂಗಲದಲ್ಲಿ 18.82 ಲಕ್ಷ ರೂಪಾಯಿ, ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆಜಿಎಫ್ನ ಬೇತಮಂಗಲದಲ್ಲಿ 47.56 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.
ಮೈಸೂರಿನ ಕಾಳಿದಾಸನಹುಂಡಿ ಚೆಕ್ಪೋಸ್ಟ್ನಲ್ಲಿ 81.90 ಲಕ್ಷ, ಬೆಂಗಳೂರಿನ ರಾಯನ್ ಸರ್ಕಲ್ ಚೆಕ್ಪೋಸ್ಟ್ನಲ್ಲಿ 20 ಲಕ್ಷ, ಉಡುಪಿ ಜಿಲ್ಲೆ ಕುಂದಾಪುರದಲ್ಲಿ 43.34 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ.
ರಾಜ್ಯದ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು. ಘಟಾನುಘಟಿ ನಾಯಕರು ಸೇರಿದಂತೆ 247 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆ ಸೇರಿದೆ. ಮೊದಲ ಹಂತದ ಮತದಾನದಲ್ಲಿ ಶೇ 69 ರಷ್ಟು ಮತದಾನವಾಗಿದೆ. ಎರಡನೇ ಹಂತದ ಮತದಾನ ಮೇ 7 ರಂದು ನಡೆಯಲಿದೆ.
ಬೆಂಗಳೂರಿನ ಸದ್ದಗುಂಟೆಪಾಳ್ಯದ ಮತಗಟ್ಟೆ ಸಂಖ್ಯೆ 91, 92, 93, 94 ಬಳಿ ನೀತಿ ಸಂಹಿತೆ ಉಲ್ಲಂಘಿಸಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬಿಬಿಎಂಪಿ ಅಧಿಕಾರಿ ಶ್ರೀನಿವಾಸ್ ಹಾಗೂ ಪೊಲೀಸ್ ಸಿಬ್ಬಂದಿ ಚಂದ್ರಶೇಖರ್ ನೀಡಿದ ದೂರಿನನ್ವಯ ಎನ್ಸಿಆರ್ ದಾಖಲಾಗಿದೆ. ಮತದಾರರ ಮೇಲೆ ಪ್ರಭಾವ ಬೀರಿರುವ ಆರೋಪ ಮತ್ತು ನಿಷೇಧಾಜ್ಞೆ ನಡುವೆಯೂ ಉಭಯ ಪಕ್ಷದ ಕಾರ್ಯಕರ್ತರ ನಡುವೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.