ಮೈಸೂರು: ಮೈಸೂರು ಲೋಕಾಯುಕ್ತ ಎಸ್ಪಿ ನಡೆಗೆ ದೂರುದಾರ ಸ್ನೇಹಮಹಿ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿರುವ ಕೃಷ್ಣ, ನಿನ್ನೆ ನಾಪತ್ತೆ ಆಗುವ ಮೂಲಕ ಮಾನ್ಯ ನ್ಯಾಯಾಲಯದ ಆದೇಶದ ಪ್ರಕಾರ ಶ್ರೀ ಸಿದ್ದರಾಮಯ್ಯ ಮತ್ತು ಇತರರ ವಿರುದ್ದ ಮೊಕದ್ದಮೆ ದಾಖಲು ಮಾಡದೇ, ನಾಪತ್ತೆ ಆಗಿದ್ದ ಮೈಸೂರಿನ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಶ್ರೀ ಉದೇಶ್ ರವರು ಈ ದಿನ ಯಾವ ನಿಯಮದ ಪ್ರಕಾರ ಮೊಕದ್ದಮೆ ದಾಖಲು ಮಾಡಬೇಕೆಂದು ಕೇಂದ್ರ ಕಚೇರಿಗೆ ಪತ್ರ ಬರೆದಿದ್ದು, ಅಲ್ಲಿಂದ ಉತ್ತರ ಬಂದ ನಂತರ ಮೊಕದ್ದಮೆ ದಾಖಲು ಮಾಡುವುದಾಗಿ ಹೊಸ ವರಸೆ ತೆಗೆಯುತ್ತಿದ್ದಾರೆ ! ಘಟನೆ ಹಿಂದೆಯೇ ನಡೆದಿರುವುದರಿಂದ, ಕಳೆದ ಡಿಸೆಂಬರ್ ನಲ್ಲೇ ಈ ಸಂಬಂಧ ಶ್ರೀ ಪ್ರದೀಪ್ ರವರು ದೂರು ನೀಡಿರುವುದರಿಂದ ಹಳೆಯ ನಿಯಮದ ಪ್ರಕಾರ ಮೊಕದ್ದಮೆ ದಾಖಲು ಮಾಡಬೇಕಾಗಿದೆ. ಈ ಸಾಮಾನ್ಯ ಜ್ಞಾನ ಸಾಮಾನ್ಯ ವ್ಯಕ್ತಿಯಾದ ನನಗೆ ತಿಳಿದಿದೆ, ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿದಿಲ್ಲದಿರುವುದು ಈ ದೇಶದ ದುರಂತ. ಹಿನ್ನೆಲೆಯಲ್ಲಿ ನಾವು ಮಾಡಿಕೊಂಡ ಮನವಿ ಪರಿಗಣಿಸಿ, ಮಾನ್ಯ ನ್ಯಾಯಾಲಯವೂ ಹಳೆಯ ನಿಯಮದ ಪ್ರಕಾರ ಮೊಕದ್ದಮೆ ದಾಖಲು ಮಾಡಲು ಆದೇಶ ಮಾಡಿದೆ…ಮಾನ್ಯ ನ್ಯಾಯಾಲಯಕ್ಕಿಂತ ದೊಡ್ಡವರಾದ ಲೋಕಾಯುಕ್ತ ಅಧಿಕಾರಿಗಳು, ಬೃಹನ್ನಳೆ ನಾಟಕವಾಡುತ್ತಿದ್ದಾರೆ ! ಎಂದು ದೂರುದಾರ ಸ್ನೇಹಮಹಿ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.