ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಸಿಎಂ ಕುರ್ಚಿಗೆ ಕಂಟಕ ತಂದೊಡ್ಡಿರುವ ಮುಡಾ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಮುಡಾ ಕಚೇರಿಗೆ ಇಂದು ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದ್ದಾರೆ. ದಾಖಲೆ ಪರಿಶೀಲನೆಗಾಗಿ ಮುಡಾ ಕಚೇರಿಗೆ ಭೇಟಿ ನೀಡಿರುವ ಲೋಕಾಯುಕ್ತ ಎಸ್ಪಿ ಉದೇಶ್ ಅಂಡ್ ಟೀಂ, ಮುಡಾ ಆಯುಕ್ತ ರಘುನಂದನ್ ಅವರನ್ನು ಭೇಟಿ ಮಾಡಿ ಕೆಲಕಾಲ ಚರ್ಚೆ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಕೆಸರೆ ಗ್ರಾಮದ ಸರ್ವೇ ನಂಬರ್ 464 ರ 3 ಎಕರೆ 16 ಗುಂಟೆ ಜಮೀನು. ಹಾಗೂ 50:50 ಅನುಪಾತದಡಿ ವಿಜಯನಗರದಲ್ಲಿ ನೀಡಿರುವ 14 ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಇಂದು ಪರಿಶೀಲನೆ ನಡೆಸಿದ್ದಾರೆ. ಇನ್ನು ಬದಲಿ ನಿವೇಶನಗಳನ್ನು ಪಡೆದಿದ್ದ ಸಿಎಂ ಪತ್ನಿ ಪಾರ್ವತಿ ತಮ್ಮ ಸ್ವ ಇಚ್ಛೆಯಿಂದ ಸೈಟುಗಳನ್ನು ವಾಪಸ್ಸು ನೀಡಿದ್ದರು. ಕೋರ್ಟ್ ಆದೇಶದಂತೆ ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.