ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಪುಟ್ಟಣ್ಣ ಕಣಗಾಲು ಗ್ರಾಮದ ಬಳಿ ಹಾದು ಹೋಗಿರುವ ಕಾವೇರಿ ನದಿಗೆ ಸೋಪಾನ ಕಟ್ಟೆ ನಿರ್ಮಾಣವಾಗಬೇಕು ಎನ್ನುವ ಬಹುದಿನದ ಬೇಡಿಕೆ ನನಸಾಗಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ.
ಗ್ರಾಮವು ಮೈಸೂರು ಜಿಲ್ಲೆಯ ಗಡಿ ಗ್ರಾಮವಾಗಿದ್ದು ಈ ಭಾಗದಲ್ಲಿ ರೈತರ ಜೀವನದಿ ಕಾವೇರಿ ನದಿ ಹಾದುಹೋಗಿದೆ. ಕಾವೇರಿ ನದಿಗೆ ಸೋಪಾನಕಟ್ಟೆ ನಿರ್ಮಾಣವಾದರೆ ಈ ಭಾಗದ ಜನತೆಗೆ ಸಾಕಷ್ಟು ಉಪಯುಕ್ತವಾಗಲಿದೆ. ಹಲವಾರು ವರ್ಷಗಳಿಂದ ಈ ಭಾಗದ ಜನರು ಸೋಪಾನಕಟ್ಟೆ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳ ಮುಂದೆ ಬೇಡಿಕೆ ಇಟ್ಟಿದ್ದರು.
ಇದೀಗ ಬೇಡಿಕೆ ಈಡೇರಿದ್ದು, ತಾಲೂಕಿನ ಶಾಸಕರು ಹಾಗೂ ಪಶುಸಂಗೋಪನ ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ಅವರ ಶ್ರಮದಿಂದ ಸುಮಾರು 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.
ಕಟ್ಟೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿ ಕೊಟ್ಟಂತಹ ಸಚಿವರಿಗೆ ಕಣಗಾಲು ಜನತೆಯು ಅಭಿನಂದನೆ ಸಲ್ಲಿಸಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಸದಸ್ಯ ಕುಮಾರಶೆಟ್ಟಿ ಹೇಳಿದರು.