ಸರಗೂರು: ತಾಲೂಕಿನ ಹೆಗ್ಗನೂರು ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅನೇಕ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬುಧವಾರ ಮಹೇಶ್ವರಿ ಕಾಳಮ್ಮನವರ ಜಾತ್ರೆಯನ್ನು ಆಚರಿಸಲಾಯಿತು,
ಜಾತ್ರೆಯ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಹೋಮ, ಮುಂಜಾನೆ ೫ ಗಂಟೆಗೆ ಸುಪ್ರಭಾತ ಸೇವೆ, ವಿಶೇಷ ಪಂಚಾಮೃತ ಅಭಿಷೇಕ ನಡೆಯಿತು.
ಭಕ್ತಾದಿಗಳಿಂದ ಉರುಳು ಸೇವೆ ಮಾಡಿ, ಕ್ಷೇತ್ರದ ಈಶಾನ್ಯ ದಿಕ್ಕಿನಲ್ಲಿರುವ ಹೆಬ್ಬಳದ ತೊರೆಯಿಂದ ಗಂಗಾ ಪೂಜೆ ಮಾಡಿ ನಂತರ ಭಕ್ತಾದಿಗಳು ಬಾಯಿಬೀಗ ಹರಕೆ, ಮುಡಿ ಮುಗಿಸಿ ಸತ್ತಿಗೆಗಳು, ನಂದಿಧ್ವಜ ಉಮಾ ಮಹೇಶ್ವರಸ್ವಾಮಿ ದೇವರ ರುದ್ರಾಕ್ಷಿ ಮಂಟಪದೊಂದಿಗೆ ಪಂಜಿನಸೇವೆ, ನಾದಸ್ವರ, ವಾದ್ಯಗೋಷ್ಠಿ, ಬ್ಯಾಂಡ್ ಸೆಟ್, ವೀರಗಾಸೆ ನೃತ್ಯ, ಗಾರುಡಿಗೊಂಬೆ, ಕೋಲಾಟ, ನೃತ್ಯವಾದ್ಯ, ಚಂಡಿವಾದ್ಯ, ಮಂಗಳವಾದ್ಯದ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮಧ್ಯಾಹ್ನ ೧೨ಗಂಟೆಗೆ ದೇವಾಲಯ ಸೇರಲಾಯಿತು.
ನಂತರ ಉಯ್ಯಾಲೆಸೇವೆ ಮೂಲಕ ಗರ್ಭಗುಡಿ ಸೇರಿಸಿ ಪಟ್ಟಕ್ಕೆ ಕುಳಿತು ಗಣಪತಿ ಪೂಜೆ, ನವಗ್ರಹ ಪೂಜೆ, ಹೋಮ, ಸಹಸ್ರನಾಮ, ಪೂರ್ಣಾಹುತಿ, ಮಂಗಳಾರತಿ ನೆರವೇರಿಸಲಾಯಿತು.
ಜಾತ್ರೆಯ ಅಂಗವಾಗಿ ಬುಧವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದಾಸೋಹ ವ್ಯವಸ್ಥೆಯನ್ನು ಮಾಡಲಾಗಿತ್ತು.
ಜಾತ್ರೆಯ ಅಂಗವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಚರಂಡಿ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ, ಗ್ರಾಮದ ಎಲ್ಲ ಬೀದಿಗಳಿಗೂ ಬೀದಿ ದೀಪ ಅಳವಡಿಸಲಾಗಿತ್ತು. ದೇವಾಲಯಕ್ಕೆ ಬಂದಿದ್ದ ಭಕ್ತಾಧಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಜಾತ್ರಾ ಮಹೋತ್ಸವಕ್ಕೆ ಸುತ್ತ ಮುತ್ತಲಿನ ಗ್ರಾಮಗಳು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Leave a comment