ಮೈಸೂರು ಅ.10: ಮಹಿಷ ದಸರಾ (Mahisha Dasara) ಆಚರಿಸಿಯೇ ತೀರುತ್ತೇವೆ ಎಂದು ದಲಿತ ಸಂಘಟನೆಗಳು ಮತ್ತು ಮಹಿಷ ದಸರಾ ಸಮಿತಿಯವರು ಪಟ್ಟು ಹಿಡಿದಿದ್ದಾರೆ. ಇದನ್ನು ವಿರೋಧಿಸಿ ಕೊಡಗು-ಮೈಸೂರು ಕ್ಷೇತ್ರ ಸಂಸದ ಪ್ರತಾಪ್ ಸಿಂಹ್ (Pratap Simha) ಚಾಮುಂಡಿ ಬೆಟ್ಟ ಚಲೋ (Chamundi betta Chalo) ಜಾಥಾಗೆ ಕರೆಕೊಟ್ಟಿದ್ದಾರೆ. ಈ ಸಂಬಂಧ ಬಿಜೆಪಿ (BJP) ನಾಯಕ ಪ್ರತಾಪ್ ಸಿಂಹ್ ಇಂದು (ಅ.10) ಪೂರ್ವಭಾವಿ ಸಭೆ ನಡೆಸಿದರು. ಇನ್ನು ಮಹಿಷ ದಸರಾ ಆಚರಣೆಗೆ ಮತ್ತು ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ನೀಡುವಂತೆ ಎರಡೂ ಕಡೆಯವರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಮೈಸೂರು ಎಸ್ಪಿ ರಮೇಶ್ ಬಾನೋತ್ (Ramesh Banoth) ಮಾತನಾಡಿ ಈವರಗೆ ನಾವು ಇಬ್ಬರಿಗೂ ಅನುಮತಿ ನೀಡಿಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅನುಮತಿಗಾಗಿ ಎರಡೂ ಕಡೆಯವರು ನಮಗೆ ಅರ್ಜಿ ನೀಡಿದ್ದಾರೆ. ಮಹಿಷ ದಸರಾಗೆ ಪುಷ್ಪಾರ್ಚನೆಗೆ ಅವಕಾಶ ಅನುಮತಿ ಕೋರಿದ್ದಾರೆ. ಇನ್ನು 5000 ಮಂದಿ ಮೆರವಣಿಗೆ ನಡೆಸಲು ಚಾಮುಂಡಿ ಬೆಟ್ಟ ಚಲೋಗೆ ಕೂಡ ಅನುಮತಿ ಕೇಳಿದ್ದಾರೆ. ದಸರಾ ಉದ್ಘಾಟನೆ ಇರುವ ಕಾರಣ ನಾವು ಅನುಮತಿ ನೀಡಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ. ಈ ಕುರಿತು ಅ.12 ರಂದು ತೀರ್ಮಾನ ತೆಗೆದುಕೊಳ್ಳುತ್ತೇವೆ. ಕಾನೂನು ಸುವ್ಯವಸ್ಥೆ ಕುರಿತು ಇಂದು ಸಂಜೆ ಸಭೆ ಕರೆದಿದ್ದೇವೆ. ಮೈಸೂರಿಗೆ ಧಕ್ಕೆ ಬಾರದ ರೀತಿ ಕ್ರಮಕೈಗೊಳ್ಳುತ್ತೇವೆ ಎಂದರು.