ತಹಸೀಲ್ದಾರ್ ಟಿ. ಜಿ. ಸುರೇಶ್ ಆಚಾರ್ ಕರೆ
ಪ್ರತಿನಿಧಿ ವರದಿ ತಿ.ನರಸೀಪುರ
ಮಹಿಳೆಯರು ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಸಬಲಗೊಂಡರೆ ಮಾತ್ರ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಒಂದು ಅರ್ಥ ಸಿಗಲಿದೆ ಎಂದು ತಹಸೀಲ್ದಾರ್ ಟಿ. ಜಿ. ಸುರೇಶ್ ಆಚಾರ್ ಕರೆ ನೀಡಿದರು.
ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಅಂಗನವಾಡಿ ಕಾರ್ಯಕರ್ತೆಯ ಒಕ್ಕೂಟದ ಸಹಯೋಗದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಜಾಗತೀಕ ಮಟ್ಟದಲ್ಲಿ ಮಹಿಳೆಯರು ಒಂದು ಶಕ್ತಿಯಾಗಿ ಬೆಳೆದಿದ್ದಾರೆ. ಇದು ನಗರ ಪ್ರದೇಶಕ್ಕೆ ಸೀಮಿತವಾಗದೆ ಗ್ರಾಮೀಣ ಪ್ರದೇಶದ ಮಹಿಳೆಯರು ಕೂಡ ಸುಶಿಕ್ಷಿತರಾಗಿ ರಾಜಕೀಯ, ಔದ್ಯೋಗಿಕ ಕ್ಷೇತ್ರಗಳಲ್ಲಿ ಉತ್ತಮ ಸ್ಥಾನಮಾನಗಳನ್ನು ಗಳಿಸುವ ಮುಖೇನ ಸಮಾಜದಲ್ಲಿ ಉತ್ತಮ ಹೆಸರು ಗಳಿಸಬೇಕು. ಆಗಮಾತ್ರ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಒಂದು ಮಹತ್ವ ಸಿಗಲಿದೆ ಎಂದರು.
ಲಿಂಗ ತಾರತಮ್ಯ, ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಇದರಿಂದ ವಿಶ್ವದಲ್ಲಿ ಲಿಂಗಾನುಪಾತ ಗಣನೀಯವಾಗಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಸರ್ಕಾರ ಕೂಡ ಇದರ ವಿರುದ್ಧ ಕಾನೂನು ಕಠಿಣ ರೂಪಿಸಿದ್ದು, ಮಹಿಳಾ ಸಂಘಟನೆಗಳಲ್ಲದೆ ಸ್ವತಃ ಮಹಿಳೆಯರು ಕೂಡ ಇದರ ವಿರುದ್ಧ ಹೋರಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು ಸಲಹೆ ನೀಡಿದರು.
ಇದೇ ವೇಳೆ ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಸನ್ಮಾನ ನೆರವೇರಿಸಲಾಯಿತು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುರೇಶ್ , ಪುರಸಭೆ ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ, ಸಿಡಿಪಿಒ ಗೋವಿಂದರಾಜು, ಪಿರಿಯಾಪಟ್ಟಣ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಭುವನೇಶ್ವರಿ, ತಿ.ನರಸೀಪುರ ತಾಲ್ಲೂಕು ಅಧ್ಯಕ್ಷೆ ಸರೋಜಮ್ಮ, ತಾಲ್ಲೂಕು ಒಕ್ಕೂಟದ ಅಧ್ಯಕ್ಷೆ ಪ್ರೇಮಕುಮಾರಿ, ಗೀತಾ, ಭಾಗ್ಯ, ಶಿವಮ್ಮ, ಶಾರದಾ, ನಂದಿನಿ, ಎಫ್.ಡಿ.ಎ ನಂದನ್, ತಲಕಾಡು ನಿರ್ಲಾಂಭ ಮುಂತಾದವರು ಹಾಜರಿದ್ದರು