ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕುಮಾರ್
ಚಿಕ್ಕಬಳ್ಳಾಪುರ : ಒಂದು ಚಮಚದಷ್ಟು ನಿಂತ ನೀರಲ್ಲಿ ಸೊಳ್ಳೆಗಳ ಉತ್ಪತ್ತಿಗೆ ಅವಕಾಶವಿರುತ್ತದೆ. ಸೊಳ್ಳೆಗಳ ಉತ್ಪತ್ತಿ ಆದರೆ ಮಲೇರಿಯ ಹಾಗೂ ಇತರ ಕೀಟ ಜನ್ಯ ರೋಗಗಳಿಗೆ ಕಾರಣವಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 2009ನೇ ಸಾಲಿನಲ್ಲಿ 1,554 ಮಲೇರಿಯಾ ಪ್ರಕರಣಗಳು ದಾಖಲಾಗಿದ್ದವು. 2023ರ ಸಾಲಿನಲ್ಲಿ ಕೇವಲ 3 ಪ್ರಕರಣಗಳು ದಾಖಲಾಗಿ ಬಹುತೇಕ ಇಳಿಮುಖವಾಗಿದೆ. 2024ರ ಸಾಲಿನಲ್ಲಿ ಈವರೆಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಜಿಲ್ಲೆಯಲ್ಲಿ ಮಲೇರಿಯ ಪ್ರಕರಣಗಳಿಲ್ಲ ಎಂದು ಸಾರ್ವಜನಿಕರು ತಮ್ಮ ಸುತ್ತಮುತ್ತಲ ಸ್ವಚ್ಚತೆ ಕಾಪಾಡಿಕೊಳ್ಳುವುದನ್ನು ಕಡಿಮೆ ಮಾಡಬಾರದು. ಸೊಳ್ಳೆಗಳ ಉತ್ಪತ್ತಿ ತಾಣಗಳು, ನೀರು ನಿಲ್ಲುವ ತಾಣಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ನೀರಿನ ತೊಟ್ಟಿಗಳು, ಟ್ಯಾಂಕ್ ಗಳ, ಸಂಪುಗಳನ್ನು ಪ್ರತಿವಾರ ಸ್ವಚ್ಚಗೊಳಿಸಬೇಕು. ಮನೆಗಳಲ್ಲಿ ಪ್ರಿಜ್, ಏರ್ ಕೂಲರ್ ಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಜೈವಿಕ ವಿಧಾನಗಳಿಂದ ಮಲೇರಿಯ ತಡೆಗಟ್ಟಬೇಕು. ಅನಿವಾರ್ಯ ಇದ್ದಾಗ ಮಾತ್ರ ಫಾಗಿಂಗ್ ಮಾಡಿಸಬೇಕು. ಇಲ್ಲವೆ ಬೇವಿನ ಹೊಗೆ ಹಾಕಿ ಸೊಳ್ಳೆಗಳನ್ನು ನಿಯಂತ್ರಿಸಬೇಕು. ಮನೆಗಳಲ್ಲಿ ಸೊಳ್ಳೆ ಪರದೆ ಹಾಗೂ ಇತರ ನಿರೋಧಕಗಳನ್ನು ಬಳಸಬೇಕು. ಪ್ರತಿ ಮನೆಯು ಮಲೇರಿಯ ಮುಕ್ತ ಆಗುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯು ಮಲೇರಿಯ ಮುಕ್ತ ಆಗಬೇಕು ಎಂದರು.
ಈಗಾಗಲೇ ಪ್ರಪಂಚದ 43 ದೇಶಗಳು ಮಲೇರಿಯ ಮುಕ್ತ ದೇಶಗಳಾಗಿವೆ. ಭಾರತವು ಆ ನಿಟ್ಟಿನಲ್ಲಿ ಸಂಕಲ್ಪ ಮಾಡಿದೆ. 2025ರ ಮೇಳೆಗೆ ಕರ್ನಾಟಕ ರಾಜ್ಯದಲ್ಲಿ ಮಲೇರಿಯ ಪ್ರಕರಣಗಳ ಶೂನ್ಯ ಸಾಧನೆ ಉದ್ದೇಶದಿಂದ ಮಲೇರಿಯ ನಿಯಂತ್ರಣಕ್ಕೆ ಯುಕ್ತ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ 2025ರ ವೇಳೆಗೆ ಶೂನ್ಯ ಸ್ಥಳೀಯ ಮಲೇರಿಯ ಸಾಧನೆಯನ್ನು ಕೈಗೊಳ್ಳಬೇಕಿದೆ. ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮಲೇರಿಯ ಮುಕ್ತ ಜಿಲ್ಲೆಯ ಸಾಧನೆಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು. ಪೋಷಕರು ಹಾಗೂ ಸುತ್ತಮುತ್ತಲ ವಾಸಿಗಳಿಗೆ ಸೊಳ್ಳೆ ನಿಯಂತ್ರಣ ಕುರಿತು ವಿದ್ಯಾರ್ಥಿಗಳು ಅರಿವು ಮೂಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿ ಡಾ. ಮಹೇಶ್ ಕುಮಾರ್ ಅವರು ಸಲಹೆ ನೀಡಿದರು.
ನಂದಿ ವೈದ್ಯಕೀಯ ಕಾಲೇಜಿನ ನಿರ್ದೇಶಕ ಮಂಜುನಾಥ ಮಾತನಾಡಿ, ಯಾವ ದೇಶದ ಆರೋಗ್ಯ ಸೂಚ್ಯಂಕ ಚೆನ್ನಾಗಿರುತ್ತದೋ ಆ ದೇಶ ಅಭಿವೃದ್ಧಿಯಲ್ಲಿ ಮುಂದಿರುತ್ತದೆ. ಅಧಿಕ ರಕ್ತದ ಒತ್ತಡ, ಮಧುಮೇಹ ಇಂದಿನ ಬದಲಾದ ಜೀವನ ವಿಧಾನದಿಂದ ಬರುವ ಸಾಧ್ಯತೆ ಹೆಚ್ಚಾಗಿದೆ. ಉತ್ತಮ ಜೀವನ ವಿಧಾನ, ವ್ಯಾಯಾಮ, ಪಾಲನೆಯಿಂದ ಇಂತಹ ರೋಗಗಳನ್ನು ತಡೆಗಟ್ಟಬಹುದು. ಸೊಳ್ಳೆಗಳ ನಿಯಂತ್ರಣದಿಂದ ಮಲೇರಿಯ, ಡೆಂಗ್ಯು, ಚಿಕುನ್ ಗುನ್ಯ, ಆನೆ ಕಾಲು ರೋಗ ಇನ್ನು ಮುಂತಾದ ಕೀಟ ಜನ್ಯ ಕಾಯಿಲೆಗಳನ್ನು ನಿಯಂತ್ರಿಸಬಹುದು. ಚಳಿ ಜ್ವರ, ಮೈ ಕೈ ನೋವು, ಕಂಡು ಬಂದರೆ ಹತ್ತಿರದ ಆಸ್ಪತ್ರೆಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು. ಮಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಮಲೇರಿಯಾ ಪ್ರಕರಣಗಳು ಜಾಸ್ತಿ ಇದ್ದು, ಆ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡರೆ ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಾಣಾಧಿಕಾರಿ ಡಾ. ಪ್ರಕಾಶ್ ಅವರು ಪಿ.ಪಿ.ಟಿ ಪ್ರದರ್ಶನದ ಮೂಲಕ ಮಲೇರಿಯಾ ನಿಯಂತ್ರಣದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಜಿ.ಡಿ. ಚಂದ್ರಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕೃಷ್ಣ ಪ್ರಸಾದ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್ ರೆಡ್ಡಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಶಿವಕುಮಾರ್, ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಶಿ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೆ.ಮಂಜುಳ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಹರೀಶ್ ರವರು ಉಪಸ್ಥಿತರಿದ್ದರು.