ಮಂಡ್ಯ: ಪಾಂಡವಪುರದಲ್ಲಿ ಭ್ರೂಣ ಹತ್ಯೆ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆಘಾತಕಾರಿ ಮಾಹಿತಿಯೆಂದರೆ ಈ ಪ್ರಕರಣದಲ್ಲೂ ಮಂಡ್ಯದ ಆಲೆಮನೆ ಕೇಸ್ ಆರೋಪಿಯೇ ಕಿಂಗ್ಪಿನ್ ಆಗಿದ್ದಾನೆ. ಇದು ಕರಾಳ ದಂಧೆಯ ಜಾಡು ಹಿಡಿದು ಹೊರಟ ಪೊಲೀಸರಿಗೇ ಬಿಗ್ ಶಾಕ್ ನೀಡಿದೆ. ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಆಲೆಮನೆಯಲ್ಲಿ ಭ್ರೂಣ ಹತ್ಯೆ ಕೇಸ್ ನಲ್ಲಿ ಕಿಂಗ್ಪಿನ್ ಎಂದು ಗುರುತಿಸಲಾಗಿದ್ದ ನವೀನ್ ಕುಮಾರ್ ಆಗ ಜೈಲು ಪಾಲಾಗಿದ್ದ. ಮತ್ತು ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿ ಬೇಲ್ ಮೇಲೆ ಹೊರಬಂದಿದ್ದ. ಜೈಲು ಸೇರಿದ್ದರೂ ಬುದ್ಧಿ ಕಲಿಯದೆ ನವೀನ್ ಹಳೆ ಚಾಳಿ ಮುಂದುವರಿಸಿದ್ದ. ಅಂದಹಾಗೆ ನವೀನ್ ಕುಮಾರ್, ಪಾಂಡವಪುರ ತಾಲೂಕಿನ ಸುಂಕಾತಣ್ಣೂರು ನಿವಾಸಿ.
ಪಾಂಡವಪುರ ಸರ್ಕಾರಿ ಹೆಲ್ತ್ ಕ್ವಾರ್ಟರ್ಸ್ನಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಮೇ 5ರಂದು ಬೆಳಕಿಗೆ ಬಂದಿತ್ತು. ಪ್ರಕರಣ ಸಂಬಂಧ ಆರೋಪಿ ನವೀನ್ ಕುಮಾರನನ್ನು ಪೊಲೀಸರು ತಕ್ಷಣ ಬಂಧಿಸಿದ್ದರು.
ಬೇಲ್ ಮೇಲೆ ಹೊರಬಂದು ಅಮಾಯಕನಂತೆ ಓಡಾಡಿಕೊಂಡಿದ್ದ ನವೀನ ಹೆಣ್ಣು ಭ್ರೂಣಗಳನ್ನು ಹತ್ಯೆ ಮಾಡುವ ಹಳೆಯ ಚಾಳಿಯನ್ನು ಮುಂದುವರೆಸಿದ್ದ. ಆತನ ಖತರ್ನಾಕ್ ಗ್ಯಾಂಗ್ ಒಂಟಿ ಮನೆಯೊಂದರಲ್ಲಿ ಗರ್ಭಿಣಿಯರ ಸ್ಕ್ಯಾನಿಂಗ್ ನಡೆಸುತ್ತಿತ್ತು. ಪ್ರಕರಣದಲ್ಲಿ ವೈದ್ಯರು, ಅಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮಂಡ್ಯ ಖಾಕಿ ಪಡೆ ಪ್ರಕರಣ ಬೇಧಿಸಲು ಮುಂದಾಗಿದೆ. ಕೇಸ್ ನಲ್ಲಿ ಮತ್ತಷ್ಟು ಮಂದಿ ಬಂಧಿಸುವ ಸಾಧ್ಯತೆಯಿದೆ.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಂಡ್ಯ ಜಿಲ್ಲೆಯಲ್ಲಿ ಅತಿದೊಡ್ಡ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಜಾಲವನ್ನು ಭೇದಿಸಿದ್ದರು. ಇದು ಜನಮನದಿಂದ ಮಾಸುವ ಮುನ್ನವೇ ಇದೀಗ ಮತ್ತೊಂದು ಭ್ರೂಣಲಿಂಗ ಪತ್ತೆಹಚ್ಚುವಿಕೆ ಮತ್ತು ಅದರ ಹತ್ಯೆ ಜಾಲ ಮಂಡ್ಯದಲ್ಲೇ ಪತ್ತೆಯಾಗಿದೆ.
ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಕಳೆದ ವರ್ಷ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಮಂಡ್ಯದಲ್ಲಿ ಆಲೆಮನೆಯಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಕರಾಳ ದಂಧೆ ಬಯಲಾಗಿತ್ತು. ಆಲೆಮನೆ ಮಾತ್ರವಲ್ಲದೆ ಸ್ಕ್ಯಾನಿಂಗ್ ಸೆಂಟರ್ಗಳಲ್ಲೂ ಭ್ರೂಣಲಿಂಗ ಪತ್ತೆ ಹಚ್ಚುವ ಕೃತ್ಯ ನಡೆಯುತ್ತಿತ್ತಾ ಎಂಬ ಅನುಮಾನ ಅಧಿಕಾರಿಗಳಿಗೆ ವ್ಯಕ್ತವಾಗಿದೆ. ತಪಾಸಣೆ ವೇಳೆ ಅಂಥ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಿದ್ದವು.