ಬರೋಬ್ಬರಿ 17 ತಿಂಗಳ ಜೈಲುವಾಸದ ಬಳಿಕ ಶುಕ್ರವಾರ ಆಮ್ ಅದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಬಿಡುಗಡೆಯಾಗಿದ್ದಾರೆ. ಈ ಬೆಳವಣಿಗೆ ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಹರ್ಷ ತಂದಿದೆ.
ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಬಳಿಕ ಜೈಲಿನಿಂದ ಹೊರಬಂದ ಮನೀಶ್ ಸಿಸೋಡಿಯಾ ಅವರನ್ನು ಸಾವಿರಾರು ಕಾರ್ಯಕರ್ತರು ಹಾಜರಾಗಿ ನಾಯಕನನ್ನು ಸ್ವಾಗತಿಸಿದ್ದಾರೆ.
ಶಿಕ್ಷಣ ಖಾತೆ ಸೇರಿ ಹಲವು ಖಾತೆಗಳ ಜವಾಬ್ದಾರಿ ವಹಿಸಿಕೊಂಡಿದ್ದ ಮನೀಶ್ ಸಿಸೋಡಿಯಾ, ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿದ್ದರು. 17 ತಿಂಗಳ ಸೆರೆವಾಸದ ಬಳಿಕ ಬಿಡುಗಡೆಯಾಗಿದ್ದು, ಮಳೆಯ ನಡುವೆಯೂ ಸಂಭ್ರಮದ ಸ್ವಾಗತ ಸಿಕ್ಕಿದೆ. ಮನೀಶ್ ಸಿಸೋಡಿಯಾ ಅವರ ಎಂಟನೇ ಮೇಲ್ಮನವಿಯನ್ನು ಪರಿಗಣಿಸಿ ಜಾಮೀನು ನೀಡಲಾಗಿದೆ.
ಮಾರ್ಚ್ನಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಬಂಧಿಸಿದ್ದವು. ಜಾರಿ ನಿರ್ದೇಶನಾಲಯ ದಾಖಲಿಸಿದ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿದ್ದರೂ ಸಿಬಿಐ ಪ್ರಕರಣದಲ್ಲಿ ಅವರಿಗೆ ಜಾಮೀನು ನಿರಾಕರಿಸಲಾಗಿದೆ.
ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ಸಿಕ್ಕಿರುವುದಕ್ಕೆ ಎಎಪಿ ಸಂತಸ ವ್ಯಕ್ತಪಡಿಸಿದ್ದು ಇದು ಸತ್ಯಕ್ಕೆ ಸಿಕ್ಕ ಗೆಲುವು ಎಂದು ಹೇಳಿದೆ.