ಬೆಂಗಳೂರು ಡಿ.30: ‘ರಾಜ್ಯಾದ್ಯಂತ ವಸತಿ ಇಲಾಖೆಯ ವಿವಿಧ ಯೋಜನೆಗಳಡಿ ನಿರ್ಮಿಸುತ್ತಿರುವ 1.6 ಲಕ್ಷ ಮನೆಗಳ ನಿರ್ಮಾಣ 2024ರ ಮಾರ್ಚ್ ಒಳಗಾಗಿ ಪೂರ್ಣಗೊಳ್ಳಬೇಕು. ಜತೆಗೆ ರಾಜೀವ್ಗಾಂಧಿ ವಸತಿ ನಿಗಮದಿಂದ ನಿರ್ಮಿಸುತ್ತಿರುವ 52,189 ಮನೆಗಳ ನಿರ್ಮಾಣವನ್ನು ಸರ್ಕಾರದ ಹಣದಿಂದಲೇ ಪೂರ್ಣಗೊಳಿಸಲು ಅಗತ್ಯವಿರುವ ಹೆಚ್ಚುವರಿ ಅನುದಾನಕ್ಕೆ ಸಚಿವ ಸಂಪುಟ ಸಭೆ ಮುಂದೆ ಪ್ರಸ್ತಾವನೆ ಸಲ್ಲಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಅಧಿಕಾರಿಗಳೊಂದಿಗೆ ವಸತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ವಿವಿಧ ವಸತಿ ಯೋಜನೆಗಳಡಿ ವರ್ಷ 3 ಲಕ್ಷ ಮನೆಗಳ ನಿರ್ಮಾಣ ಗುರಿ ಹೊಂದಲಾಗಿತ್ತು. ಇದೀಗ 1.31 ಲಕ್ಷ ಮನೆಗಳ ನಿರ್ಮಾಣ ಪೂರ್ಣವಾಗಿದೆ. ಉಳಿದಂತೆ ನಿರ್ಮಾಣ ಹಂತದಲ್ಲಿರುವ 1.6 ಲಕ್ಷ ಮನೆಗಳನ್ನು 2024ರ ಮಾರ್ಚ್ ಒಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
52,189 ಮನೆಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ: ರಾಜೀವ್ ಗಾಂಧಿ ವಸತಿ ನಿಗಮದಿಂದ ರಾಜ್ಯದೆಲ್ಲೆಡೆ ಬಡ ಕುಟುಂಬಗಳಿಗಾಗಿ ಪ್ರಧಾನ ಮಂತ್ರಿ ಅವಾಸ್ (ನಗರ ) ಯೋಜನೆಯಡಿ 52,189 ಮನೆ ನಿರ್ಮಿಸುತ್ತಿದ್ದು, ಹಣಕಾಸು ಸಮಸ್ಯೆ ಎದುರಾಗಿದೆ. 2013 ರಿಂದ ಇದುವರೆಗೆ 52,189 ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಫಲಾನುಭವಿಗಳ ವಂತಿಗೆ 2013 ಕೋಟಿ ರು.ಬದಲಿಗೆ 134 ಕೋಟಿ ರು. ಮಾತ್ರ ಪಾವತಿ ಆಗಿದೆ. ಫಲಾನು ಭವಿಗಳು ಬಡವರಾಗಿದ್ದು ಅವರಿಂದ 4 ಲಕ್ಷ ರು. ಪಾವತಿ ಕಷ್ಟ ಆಗಿದೆ. ಬ್ಯಾಂಕ್ ಗಳಿಂದಲೂ ಸಾಲ ಸಿಗುತ್ತಿಲ್ಲ ಎಂದು ಸಭೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಯೋಜನೆಯಡಿ ಕೈಗೊಂಡಂತೆ ಫಲಾನುಭವಿಗಳು 1 ಲಕ್ಷ ರು. ಮಾತ್ರ ಪಾವತಿಸಿ ಉಳಿದ ಹಣ ಸರ್ಕಾರದಿಂದಲೇ ಭರಿಸಿದರೆ ಮಾತ್ರ ಯೋಜನೆ ಪೂರ್ಣಗೊಳ್ಳಲಿದೆ ಎನ್ನುತ್ತಿದ್ದೀರಿ. ಇದಕ್ಕೆ ಅಗತ್ಯವಾಗುವ ಹೆಚ್ಚುವರಿ ಅನುದಾನ ಕೋರಿ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಿ. ಮುಂದೆ ಚರ್ಚಿಸಿ ನಿರ್ಧಾರ ಮಾಡೋಣ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹಮದ್, ಗೋವಿಂದ ರಾಜು, ಮುಖ್ಯಮಂತ್ರಿ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅತೀಕ್, ಹಣಕಾಸು ಇಲಾಖೆ ಕಾರ್ಯ ದರ್ಶಿ ಜಾಫರ್, ವಸತಿ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಅಲ್ಪಸಂಖ್ಯಾತ ರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್ ಸೇರಿ ಹಲವರು ಹಾಜರಿದ್ದರು.