ಪ್ರತಿನಿಧಿ ವರದಿ ಮೈಸೂರು
ಕನ್ನಡ ಸಾಹಿತ್ಯ, ಸಂಸ್ಕೃತಿಯ ಪ್ರವರ್ಧಮಾನಕ್ಕಾಗಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ತಮ್ಮ ಬದುಕನ್ನ ಸಮರ್ಪಿಸಿಕೊಂಡರು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ ಹೇಳಿದರು.
ಕೆಎಂಪಿಕೆ ಟ್ರಸ್ಟ್ ವತಿಯಿಂದ ನಗರದ ಚಾಮರಾಜಪುರಂನಲ್ಲಿರುವ ಟ್ರಸ್ಟ್ನ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕನ್ನಡ ಸಾಹಿತ್ಯ ಸಂಸ್ಕೃತಿಯ ಪ್ರವರ್ಧಮಾನಕ್ಕೆ ತಮ್ಮ ಬದುಕನ್ನ ಸಮರ್ಪಿಸಿಕೊಂಡವರು. ಕಥೆ, ಕಾದಂಬರಿ, ಕವಿತೆ, ನಾಟಕ ವಿಮರ್ಶೆ, ಅನುವಾದ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ 123ಕ್ಕೂ ಹೆಚ್ಚು ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಶಕ್ತಿ ತುಂಬಿದರು. ಮೈಸೂರು ಸಂಸ್ಥಾನದಲ್ಲಿ ರೆವಿನ್ಯೂ ಅಧಿಕಾರಿಯಾಗಿ ಆಡಳಿತದಲ್ಲೂ ಅಂದಿನ ಗ್ರೀಕ್ ಇಂಗ್ಲೀಷ್ ಪದಗಳಿಗೆ ಕನ್ನಡದ ಹೆಸರುಗಳನ್ನ ಕನ್ನಡತನ ಮೆರೆದರು. ಮಾಸ್ತಿ ಅವರ ಸಾಹಿತ್ಯ ಕಾಲಾತೀತ ಎಂದು ಅಭಿಪ್ರಾಯಪಟ್ಟರು.
ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ ಮಾತನಾಡಿ, ಮಾಸ್ತಿ ಅವರು ತಾವು ಬರೆಯುತ್ತಲೇ ತಮ್ಮ ನೆರವು ಕೋರಿ ಬಂದವರಿಗೆ ಆಸರೆಯಾದರು. ಬೇಂದ್ರೆ, ಜಿ.ಪಿ. ರಾಜರತ್ನಂ ಸೇರಿದಂತೆ ಅಂದಿನ ಕಾಲದ ಬಹಳಷ್ಟು ಲೇಖಕರ ಸಾಹಿತ್ಯ ರಚನೆಗೆ ಒತ್ತಾಸೆಯಾಗಿ ನಿಂತರು. ಈ ಎಲ್ಲ ಸಮಾಜಮುಖಿ ಕಾರ್ಯಗಳಿಂದ ನಾಲ್ವಡಿ ಅವರಿಂದ ರಾಜ ಸೇವಾಸಕ್ತ ಪ್ರಶಸ್ತಿಗೆ ಭಾಜನರಾದರು. ಮಾಸ್ತಿ ಅವರ ಮಾತೃ ಭಾಷೆ ತಮಿಳಾದರೂ, ಅವರ ಕನ್ನಡ ಪ್ರೀತಿ ಅಮರವಾದದ್ದು ಎಂದರು.
ಇದಕ್ಕೂ ಮುನ್ನ ಗಣ್ಯರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಪ್ರಕಾಶ್ ಪ್ರಿಯದರ್ಶನ್, ಜಿ. ರಾಘವೇಂದ್ರ, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ರಾಜೇಶ್, ಬೈರತಿ ಲಿಂಗರಾಜು ಇತರರಿದ್ದರು.
==================