– ನೋಡುಗರನ್ನು ಆಕರ್ಷಿಸಿದ ಮೀನುಗಳ ವೈಯ್ಯಾರ
– 65ಕ್ಕೂ ಹೆಚ್ಚು ತಳಿಯ ಮೀನುಗಳನ್ನು ಪ್ರದರ್ಶನ
ಪ್ರತಿನಿಧಿ ವರದಿ ಮೈಸೂರು
ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ನಡೆಯುತ್ತಿರುವ ಹತ್ತಾರು ಆಕರ್ಷಕ ಕಾರ್ಯಕ್ರಮಗಳ ನಡುವೆ ಜೆ.ಕೆ. ಮೈದಾನದಲ್ಲಿ ಅನಾವರಣಗೊಂಡಿರುವ ಮತ್ಸ್ಯಲೋಕ ವಿಭಿನ್ನ ಅನುಭವ ನೀಡುತ್ತಿದೆ.
ಜಿಲ್ಲಾಡಳಿತ, ಮೀನುಗಾರಿಕೆ ಇಲಾಖೆ ದಸರಾ ಮಹೋತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುವ ಸಲುವಾಗಿ ನಗರದ ಜೆಕೆ ಮೈದಾನದಲ್ಲಿ ಆಯೋಜಿಸಿರುವ ಮತ್ಸ್ಯ ಮೇಳದಲ್ಲಿ ಬಣ್ಣಬಣ್ಣದ, ವಿಭಿನ್ನ ತಳಿಯ ಮೀನುಗಳು ನೋಡುಗರ ಮನಸೂರೆಗೊಳ್ಳುತ್ತಿವೆ. ದೇಶ ವಿದೇಶದ ಮೀನುಗಳು, ಅಲಂಕಾರಿಕ ಮೀನುಗಳು, ಬಗೆಬಗೆಯ ಅಕ್ವೇರಿಯಂ ಪ್ರದರ್ಶನದಲ್ಲಿದ್ದು, ಮೀನುಗಾರಿಕೆಗೆ ಬಳಸುವ ವಸ್ತುಗಳ ಬಲೆ, ತೆಪ್ಪ ಸೇರಿದಂತೆ ಹಲವು ವಸ್ತುಗಳನ್ನು ಪ್ರದರ್ಶನದಲ್ಲಿಡಲಾಗಿದೆ. ಮತ್ಸ್ಯ ಮೇಳದಲ್ಲಿ ವಿವಿಧ ಮೀನುಗಳನ್ನು ನೋಡಲು ಪ್ರವಾಸಿಗರು ಮುಗಿಬಿದ್ದರು. ವಿವಿಧ ಜಾತಿಯ, ಬಣ್ಣದ ಮೀನುಗಳನ್ನು ನೋಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಡಿಯೋ ತೆಗೆದು ಸಂಭ್ರಮಿಸಿದರು.
ನೋಡುಗರಿಗೆ ಅನನ್ಯ ಅನುಭವ:
ಮತ್ಸ್ಯ ಮೇಳ ವೀಕ್ಷಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ವಿಭಿನ್ನ ಅನುಭವ ಉಣ ಬಡಿಸುವ ಸಲುವಾಗಿ ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಗುಹೆ ಮಾದರಿಯ ಒಳಭಾಗದಲ್ಲಿ ಬಗೆ ಬಗೆಯ ಮೀನುಗಳನ್ನು ಪ್ರದರ್ಶಿಸಲಾಗಿದೆ. ಪ್ರವೇಶದ್ವಾರದಲ್ಲೇ ಗುಹೆಯ ಮಾದರಿಯಲ್ಲಿ ಟನಲ್ ಇದ್ದು ಅಲ್ಲೇ ಪಕ್ಕದಲ್ಲಿರುವ ಬಗೆ ಬಗೆಯ ಬಣ್ಣ ಬಣ್ಣದ ಮೀನುಗಳು ಅತ್ಯಾಕರ್ಷವಾಗಿವೆ. ಮೇಳದಲ್ಲಿ ದೇಶ ವಿದೇಶದ 65ಕ್ಕೂ ಹೆಚ್ಚು ತಳಿಯ ಮೀನುಗಳನ್ನು ಪ್ರದರ್ಶಿಸಲಾಗಿದೆ.
ಯಾವೆಲ್ಲಾ ಮೀನುಗಳಿವೆ:
ಮತ್ಸ್ಯ ಮೇಳದಲ್ಲಿ ಏಂಜಲ್ ಫಿಶ್, ಮೋಲಿಸ್, ಬಾರ್ಬ್ಸ್, ಸಿಕ್ಲೀಡ್ಸ್, ಶಾರ್ಕ್ಸ್, ಸ್ವಾರ್ಡ್ ಟೈಲ್, ಗುಪ್ಪಿ, ಗೌರಮಿ, ಶಾರ್ಕ್, ಟಿಲಾಪಿಯಾ, ವಿಡೋ ಟೆಟ್ರಾಸ್, ಗೋಲ್ಡ್ ಫಿಶ್, ಫ್ಲವರ್ ಹಾರ್ನ್, ಕೋಯಿ ಕಾರ್ಪ್, ರೆಮೋರಾ ಸಕ್ಕರ್ ಫಿಶ್, ಎಸ್.ಕೆ ಗೋಲ್ಡ್, ಪರ್ಲ್ ಸ್ಪಾಟ್, ಜೈಂಟ್ ಗೌರಮಿ, ಪ್ಲಾಟಿ, ಆಸ್ಕರ್ ಫಿಶ್, ಬಿಚ್ಚರ್, ಸ್ಪಾಟೆಡ್ ಸ್ಕ್ಯಾಚ್, ಮರೀನಾ ಏಂಜಲ್, ಪ್ಯಾರೆಟ್ ಫಿಶ್, ರೆಡ್ ಝೀಬ್ರಾ ಫಿಶ್ ಸೇರಿದಂತೆ ವಿವಿಧ ತಳಿಯ ಮೀನುಗಳು ಪ್ರದರ್ಶನದಲ್ಲಿವೆ. ೨ ಕೆಜಿಯಿಂದ ಗ್ರಾಂ ತೂಕದ ಮೀನುಗಳು ಪ್ರದರ್ಶನದಲ್ಲಿದ್ದು, ಅಕ್ವೇರಿಯಂಗಳಲ್ಲಿ ಓಡಾಡುತ್ತಿದ್ದರೆ ನೋಡುಗರ ಖುಷಿ ಹೆಚ್ಚುವಂತೆ ಮಾಡಿತು.
ವಿಶೇಷ ವಸ್ತುಗಳ ಪ್ರದರ್ಶನ:
ಮೇಳದಲ್ಲಿ ಬಗೆಬಗೆಯ ಮೀನುಗಳ ಜತೆಗೆ ಸಿಹಿ, ಉಪ್ಪು ನೀರಿನ ಮೀನುಗಳ ಅಕ್ವೇರಿಯಂ, ಪ್ಲಾಂಟೆಡ್ ಅಕ್ವೇರಿಯಂ ಸೇರಿದಂತೆ ೩೫ಕ್ಕೂ ಹೆಚ್ಚು ಅಕ್ವೇರಿಯಂಗಳಲ್ಲಿ ಪ್ರದರ್ಶಿಸಲಾಗಿದೆ. ಅಕ್ವೇರಿಯಂಗಳಲ್ಲಿ ಸಮುದ್ರದ ಒಳಭಾಗದಲ್ಲಿ ಸುಂದರವಾಗಿ ಕಾಣುವ ಸಸ್ಯಗಳನ್ನಿಟ್ಟು ಪ್ರದರ್ಶಿಸುವ ಪ್ಲಾಂಟೆಡ್ ಅಕ್ವೇರಿಯಂ, ಅರ್ಧ ಭಾಗ ನೀರಿನ ಒಳಭಾಗದಲ್ಲಿ ಹಾಗೂ ಅರ್ಧ ಸಸ್ಯ ನೀರಿನಿಂದ ಹೊರಗೆ ಇರುವ ಅಕ್ವೇರಿಯಂಗಳು ಎಲ್ಲರ ಗಮನ ಸೆಳೆಯುತ್ತಿವೆ.
ಮೀನುಗಾರಿಕೆ ಕುರಿತು ಅರಿವು:
ಮೇಳದಲ್ಲಿ ಮೀನುಗಾರಿಕೆಗೆ ಉಪಯುಕ್ತವಾಗುವ ಕೃಷಿ ಮಾಹಿತಿಯನ್ನೂ ನೀಡಲಾಗುತ್ತದೆ. ಮೀನುಗಾರಿಕೆ ಕ್ಷೇತ್ರದ ಇತ್ತೀಚಿನ ತಾಂತ್ರಿಕತೆಗಳ ವಿವರಣೆ ನೀಡುವ ಮಳಿಗೆಗಳು, ಮೀನಿನ ಆಹಾರ ಮತ್ತು ಮೀನು ಕೃಷಿಗೆ ಬೇಕಾಗುವ ಇನ್ನಿತರ ವಸ್ತುಗಳ ವಿವರಣೆ ನೀಡುವ ಮಳಿಗೆಗೆ ತೆರೆಯಲಾಗಿದೆ. ಮತ್ತೊಂದೆಡೆ ಅಕ್ವೇರಿಯಂ ಹಾಗೂ ಮೀನುಗಳ ಮಾರಾಟ ಕೇಂದ್ರವೂ ಇದೆ. ಜತೆಗೆ ಕಪ್ಪೆಚಿಪ್ಪುಗಳನ್ನು ಸಂಗ್ರಹಿಸುವ ಮೂಲಕ ಕೃತಕ ಮುತ್ತುಗಳನ್ನು ಅಭಿವೃದ್ಧಿ ಪಡಿಸುವ ಸಿಹಿನೀರು ಮುತ್ತು ಉತ್ಪಾದನೆಯ ಕೃಷಿ ಬಗ್ಗೆ ವಿವರಣೆ ನೀಡುವದರ ಜತೆಗೆ ಮಣ್ಣಿನ ಏಡಿ ಸಾಕಾಣಿಕೆ ಹಾಗೂ ಅವುಗಳ ಸೇವನೆಯಿಂದ ಆಗುವ ಆರೋಗ್ಯದ ಲಾಭಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ.
====================
ಬಾಕ್ಸ್
ಕೃಷಿ ಸಚಿವರಿಂದ ಚಾಲನೆ
ದಸರಾ ಮಹೋತ್ಸವದ ಅಂಗವಾಗಿ ನಗರದ ಜೆ.ಕೆ.ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಿರುವ ಮತ್ಸ್ಯಮೇಳಕ್ಕೆ ಕೃಷಿ ಸಚಿವ ಚೆಲುವನಾರಾಯಣ ಸ್ವಾಮಿ ಚಾಲನೆ ನೀಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಿದ ಉಪಾಧ್ಯಕ್ಷೆ ಡಾ.ಪುಷ್ಪ ಅಮರ್ನಾಥ್, ಶಾಸಕ ಕೆ.ಹರೀಶ್ ಗೌಡ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ಸೇರಿದಂತೆ ಇನ್ನಿತರರು ಅಧಿಕಾರಿಗಳು ಇದ್ದರು.
==================