ನಿಯೋಜಿತ ಜಿಲ್ಲಾ ಗವರ್ನರ್ ರೊ.ಕೆ.ಪಾಲಾಕ್ಷ ಅಭಿಪ್ರಾಯ
ಪ್ರತಿನಿಧಿ ವರದಿ ಹೊಳೆನರಸೀಪುರ
ಪರಿಶ್ರಮ ಮತ್ತು ಸಾಧನೆಗಳ ಮೂಲಕ ನಾಯಕರಾದವರಲ್ಲಿ ನಮ್ಮೂರಿನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೂಲತಃ ರೈತ ಕುಟುಂಬದಿಂದ ಬಂದು, ದೇಶದ ಉನ್ನತ ಸ್ಥಾನದಲ್ಲಿ ತಮ್ಮ ಸೇವೆ ಮಾಡಿದ್ದಾರೆ. ಇಂತಹ ನಾಯಕರನ್ನು ನಿಮ್ಮ ಜೀವನದಲ್ಲಿ ಆದರ್ಶವಾಗಿಟ್ಟುಕೊಳ್ಳಿ ಎಂದು ನಿಯೋಜಿತ ಜಿಲ್ಲಾ ಗವರ್ನರ್ ರೊ.ಕೆ.ಪಾಲಾಕ್ಷ ತಿಳಿಸಿದರು.
ಪಟ್ಟಣದ ಗೃಹ ವಿಜ್ಞಾನ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (ಐ.ಕ್ಯೂ.ಎ.ಸಿ.), ರೋಟರಿ ಸಂಸ್ಥೆ ಹೊಳೆನರಸೀಪುರ ಇವರ ಪ್ರಾಯೋಜಿತ, ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೋಟರಿ ಕ್ಲಬ್ ಹೊಳೆನರಸೀಪುರ ಹಾಗೂ ಗೃಹ ವಿಜ್ಞಾನ ಕಾಲೇಜು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ಕನಸನ್ನು ಸಾಕಾರಗೊಳಿಸಲು ಶ್ರಮವಹಿಸಿ ಪ್ರಯತ್ನಿಸಬೇಕು. ಆಸೆಯ ಜತೆಗೆ ಗುರಿಯನ್ನು ಇಟ್ಟುಕೊಳ್ಳಬೇಕು. ರಾಹುಲ್ ಗಾಂಧಿ ಹುಟ್ಟಿನಿಂದಲೇ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದವರು. ಕಾರಣ ಅವರ ವಂಶದಲ್ಲಿ ಮೂರು ಪ್ರಧಾನ ಮಂತ್ರಿಗಳನ್ನು ಕಂಡ ದೇಶವಿದು. ಆದರೆ ರೈತರ ಮಗನಾಗಿ ಕಷ್ಟಪಟ್ಟು ಶ್ರಮದಿಂದ ದೇಶದ ಪ್ರಧಾನಿಯಾದವರು ದೇವೇಗೌಡರು. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ ಎಂದು ತಿಳಿಸಿದರು.
ರೋಟರಿ ಕ್ಲಬ್ನ ಅಧ್ಯಕ್ಷ ಎಚ್.ವೈ.ಸಂತೋಷ ಕುಮಾರ್ ಮಾತನಾಡಿ, ಹಿರಿಯರ ಮಾರ್ಗದರ್ಶನದಂತೆ ನನ್ನಅಧಿಕಾರವಧಿಯಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತೇನೆ. ಇದು ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು, ಪೋಲಿಯೋ ಮುಕ್ತ ಭಾರತ ದೇಶವನ್ನಾಗಿಸಲು ರೋಟರಿ ಸಂಸ್ಥೆಯು ಮುಖ್ಯ ಕಾರಣವಾಗಿದೆ. ಪರಿಸರಕ್ಕೆ ಸಂಬಂಧಿಸಿದಂತೆ ಒಂದು ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಯು.ಎಚ್.ಆಶಾ ಜ್ಯೋತಿ, ಸಹಾಯಕ ಗವರ್ನರ್ ರೋ.ನಿರ್ಮಲ ಕುಮಾರ್ ಜೈನ್, ರೊ.ಸಂತೋಷ, ಡಾ.ಪ್ರಶಾಂತ್, ಬಾಲಕಿಯರ ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ದೇವರಾಜು, ಹರದಹಳ್ಳಿ ಕಾಲೇಜಿನ ಪ್ರಾಂಶುಪಾಲ ಲೋಕೇಶ್, ಪಡುವಲಹಿಪ್ಪೆ ಕಾಲೇಜಿನ ಉಪನ್ಯಾಸಕ ಶಿವಕುಮಾರ್ ಮಾತನಾಡಿದರು. ಎಚ್.ಎಸ್.ಜಯಚಂದ್ರ, ರೇಂಜರ್ ಘಟಕದ ಸಂಯೋಜಕಿ ಶ್ವೇತಾ ನಾಯಕ್, ಎನ್.ಎಸ್.ಎಸ್.ಅಧಿಕಾರಿ ಫಕೀರಮ್ಮ, ಸಾಂಸ್ಕೃತಿ ವೇದಿಕೆಯ ಸಂಚಾಲಕ ಡಾ.ಚಿಕ್ಕಮಗಳೂರು ಗಣೇಶ್, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಮಂಜುನಾಥ್, ರೊ.ರವೀಶ್, ರೊ.ಅಶೋಕ್, ರೊ.ವೆಂಕಟೇಶ್, ಸಂಯೋಜಕ ಡಾ.ಕೃಷ್ಣಮೂರ್ತಿ ಮತ್ತಿತರರು ಇದ್ದರು.
ಚಿತ್ರ: ಹೊಳೆನರಸೀಪುರ ಪಟ್ಟಣದ ಗೃಹ ವಿಜ್ಞಾನ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ಕಾರ್ಯಕ್ರಮವನ್ನು ನಿಯೋಜಿತ ಜಿಲ್ಲಾ ಗವರ್ನರ್ ಡಾ.ಕೆ.ಪಾಲಾಕ್ಷ ಉದ್ಘಾಟಿಸಿ ಮಾತನಾಡಿದರು.