ಆನೇಕಲ್ : ಕೇಂದ್ರದಲ್ಲಿ ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಯನ್ನು ತಡೆಯುವುದಾಗಿ ಡಿಕೆಎಂಕೆ ತನ್ನ ಲೋಕಸಭಾ ಪ್ರಾಣಾಳಿಕೆಯಲ್ಲಿ ಹೊರಡಿಸಿರುವುದನ್ನು ವಿರೋಧಿಸಿ ಬೆಂಗಳೂರು ನಗರ ಜಿಲ್ಲೆಯ ಆನೆಕಲ್ ತಾಲೂಕಿನ ಗಡಿಭಾಗ ಅತ್ತಿಬೆಲೆಯಲ್ಲಿ ಕನ್ನಡ ಒಕ್ಕೂಟದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವಾ, ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕುಮಾರ್ ಭಾಗಿಯಾಗಿದ್ದರು.
ಪ್ರತಿಭಟನೆ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಮೇಕೆದಾಟು ಯೋಜನೆಗೆ ತಮಿಳುನಾಡು ರಾಜಕಾರಣಿಗಳು ಏಕೆ ವಿರೋಧ ಮಾಡುತ್ತಿದ್ದೀರಿ? ಕರುಣಾನಿಧಿ, ಜಯಲಲಿತಾ, ಎಂಜಿಆರ್ ಕಾಲದಿಂದಲೂ ನಾವು ಹೋರಾಟ ಮಾಡುತ್ತಿದ್ದೆವೆ. ಮೇಕೆದಾಟು ಯೋಜನೆಯಿಂದ ನಿಮಗೆ ಆಗುವ ನಷ್ಟ ಏನು. ಅದನ್ನು ಮೊದಲು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದರು.
ಮೇಕೆದಾಟು ಯೋಜನೆಯಿಂದ ರಾಜ್ಯಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಮಳೆಗಾಲದಲ್ಲಿ ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆಯುತ್ತೇವೆ. ನಿಮ್ಮ ಡ್ಯಾಮ್ಗಳಿಗೂ ನೀರನ್ನು ಹರಿಸುತ್ತೇವೆ. ಆದರೆ ಸ್ಟಾಲಿನ್ ತಮಿಳುನಾಡು ಜನರನ್ನು ರಾಜ್ಯದ ವಿರುದ್ಧ ಎತ್ತುಕಟ್ಟುತ್ತಿದ್ದಾರೆ. ನಾವು ನಿಮ್ಮ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂದರು.