ಪ್ರತಿನಿಧಿ ವರದಿ ಮೈಸೂರು
ನಗರದ ಸಮರ್ಥನಂ ಅಂಗವಿಕಲ ಸಂಸ್ಥೆ ಹಾಗೂ ಲವ್ಸ್ ಕಂಪನಿ ಸಹಯೋಗದಲ್ಲಿ ಬನ್ನಿಮಂಟಪದ ಸಾಯಿರಂಗ ವಿದ್ಯಾಸಂಸ್ಥೆಯ ಉಚಿತ ಕಿವುಡು ಗಂಡು ಮಕ್ಕಳ ವಸತಿ ಶಾಲೆಗೆ ಮಿನಿ ವಿಜ್ಞಾನ ಪ್ರಯೋಗಾಲಯವನ್ನು ಕೊಡುಗೆಯಾಗಿ ನೀಡಲಾಯಿತು.
ಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಂಕರಗೌಡ ಪಾಟೀಲ್, ಸಮರ್ಥನಂ ಸಂಸ್ಥೆಯ ಗುರುರಾಘವೇಂದ್ರ, ಸಾಯಿರಂಗ ವಿದ್ಯಾ ಸಂಸ್ಥೆಯ ದಯಾನಂದ, ಸಮರ್ಥನಂ ಸಂಸ್ಥೆಯ ಶಿವರಾಜ್ ಸಾಮೂಹಿಕವಾಗಿ ಹಸಿರು ಟೇಪ್ ಕತ್ತರಿಸುವ ಮೂಲಕ ಮಿನಿ ಪ್ರಯೋಗಾಲಯ ಉದ್ಘಾಟಿಸಿದರು.
ಬಳಿಕ ವೇದಿಕೆ ಕಾರ್ಯಕ್ರದಲ್ಲಿ ಮಾತನಾಡಿದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಂಕರಗೌಡ ಪಾಟೀಲ್, ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ವಿಷಯಗಳು(ಸ್ಟೆಮ್) ತಾಂತ್ರಿಕ ಕ್ರಾಂತಿಯ ಹೃದಯಭಾಗದಲ್ಲಿದೆ. ನಾವು ಬದುಕುವ ರೀತಿ ಮತ್ತು ಕೆಲಸ ಮಾಡುವ ವಿಧಾನವನ್ನು ಇದು ಪರಿವರ್ತಿಸುತ್ತದೆ. ಶಿಕ್ಷಣ ವಲಯದಲ್ಲಿ ಸ್ಟೆಮ್ ಶಿಕ್ಷಣವನ್ನು ಸಂಯೋಜಿಸುವುದು ಕುತೂಹಲ, ಜಿಜ್ಞಾಸೆ, ವಿಮರ್ಶಾತ್ಮಕ-ಚಿಂತನೆ, ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತದೆ. ಅಲ್ಲದೆ ವಿಜ್ಞಾನ ಸಾಕ್ಷರತೆಯು ಸ್ಟೆಮ್ ಪ್ರದೇಶಗಳಲ್ಲಿ ಘನ ಜ್ಞಾನದ ಆಧಾರದ ಮೇಲೆ ಅವಲಂಬಿತವಾಗಿದೆ. ಭವಿಷ್ಯದ ಹೆಚ್ಚಿನ ಉದ್ಯೋಗಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳ ಮೂಲಭೂತ ತಿಳುವಳಿಕೆ ಅಗತ್ಯವಿರುತ್ತದೆ ಎಂದು ಹೇಳಿದರು.
ಸಮರ್ಥನಂ ಅಂಗವಿಕಲ ಸಂಸ್ಥೆಯ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಗುರು ರಾಘವೇಂದ್ರ ಮಾತನಾಡಿ, ಸಮರ್ಥನಂ ಸಂಸ್ಥೆಯು ದೇಶದ 17 ರಾಜ್ಯಗಳಲ್ಲಿ 700ಕ್ಕೂ ಹೆಚ್ಚು ಶಾಲೆಗಳಲ್ಲಿ ಮಿನಿ ವಿಜ್ಞಾನ ಪ್ರಯೋಗಾಲಯ, ಸ್ಮಾರ್ಟ್ ಬೋರ್ಡ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ. ಬಡ ಮತ್ತು ವಿಶೇಷಚೇತನರ ಶ್ರೇಮಾಭಿವೃದ್ಧಿಗೆ ದುಡಿಯುತ್ತಿದ್ದು, ಮೈಸೂರಿನಲ್ಲಿ ಮೂರು ವಿಶೇಷ ಶಾಲೆಗಳ ಜೊತೆಗೆ ಐದು ಶಾಲೆಗಳಿಗೆ ಮಿನಿ ವಿಜ್ಞಾನ ಪ್ರಯೋಗಾಲಯ ಮತ್ತು ಸ್ಮಾರ್ಟ್ ಬೋರ್ಡ್ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾಯಿರಂಗ ಸಂಸ್ಥೆ ಕಾರ್ಯದರ್ಶಿ ದಯಾನಂದ, ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗದ ಸಂಯೋಜಕ ಶಿವರಾಜು, ಸಾಯಿರಂಗ ಸಂಸ್ಥೆ ಮುಖ್ಯೋಪಾಧ್ಯಾಯ ರಘುನಾಥ ಗೌಡ, ಖಜಾಂಚಿ ಶ್ರೀನಿವಾಸ್ ಇತರರಿದ್ದರು.