ಮೈಸೂರು: ಸ್ವಾತಂತ್ರ್ಯ ಪೂರ್ವದಲ್ಲಿ ಗುತ್ತಿಗೆ ಕೊಟ್ಟಿದ್ದ ಅರಣ್ಯ ಪ್ರದೇಶಗಳನ್ನು ವಾಪಸ್ ಪಡೆಯಲಾಗುವುದು ಎಂದು ಮೈಸೂರಿನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಹುದೊಡ್ಡ ಕಂಪನಿಗಳ ವಶದಲ್ಲಿ ಅರಣ್ಯ ಪ್ರದೇಶವಿದೆ. ಶೇ.95% ಭಾಗ ಅರಣ್ಯ ಪ್ರದೇಶ ಮಡಿಕೇರಿ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಇವೆ. ಸುಮಾರು 7 ಸಾವಿರ ಎಕರೆ ಅರಣ್ಯ ಭಾಗ ವಶಕ್ಕೆ ಪಡೆಯಬೇಕಿದೆ ಎಂದರು.
ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿದೆ. ಮುಂದಿನ 6 ತಿಂಗಳಗಳ ಕಾಲಾವಕಾಶದಲ್ಲಿ ಹಿಂದಕ್ಕೆ ಪಡೆಯುತ್ತೇವೆ. ಬಂಡೀಪುರ ಪಶ್ಚಿಮಘಟ್ಟದ ದಟ್ಟ ಅರಣ್ಯ. ಇಲ್ಲಿ ಕಾಡು ಪ್ರಾಣಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ. ಕಿರಿಕಿರಿಯಾಗದಂತೆ ಎಲ್ಲಾ ಕ್ರಮ ವಹಿಸಲಾಗಿದೆ. ಸುಮಾರು 7 ಸಾವಿರ ಎಕರೆ ಜಮೀನು ವಿವಿಧ ಹಂತದಲ್ಲಿ ಲೀಸ್ಟ್ ಪಿರಿಯಡ್ ಮುಗಿದಿದೆ. ನೂರಾರು ಕೋಟಿ ರೂಪಾಯಿ ಬಾಕಿ ವಸೂಲಿ ಮಾಡಬೇಕು. ಜಮೀನು ವಾಪಾಸ್ ಪಡೆಯುವ ಬಗ್ಗೆ ಚಿಂತಿಸಲಾಗಿದೆ. ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಆನೆಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಪ್ರಾಣಿ ಮಾನವ ಸಂಘರ್ಷ ತಡೆಯಬೇಕಿದೆ. ಕಾನೂನು ತೊಡಕುಗಳನ್ನು ನಿವಾರಿಸಿ ಜಮೀನುಗಳನ್ನು ವಾಪಾಸ್ ಪಡೆದುಕೊಳ್ಳುತ್ತೇವೆ. ಒತ್ತುವರಿ ತೆರವು ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.