ಪ್ರತಿನಿಧಿ ವರದಿ ಚಿಕ್ಕಮಗಳೂರು
ನಿರಂತರ, ಗುಣಮಟ್ಟದ ವಿದ್ಯುತ್ ಪೂರೈಕೆ ಮತ್ತು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಮೊದಲ ಆದ್ಯತೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ತಾಲೂಕಿನ ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಮಲ್ಲಂದೂರು (ಕೆಳ ಮಲ್ಲಂದೂರು) ಗ್ರಾಮದಲ್ಲಿ ಬುಧವಾರ ಹೊಸ ವಿದ್ಯುತ್ ಪ್ರಸರಣ ಉಪ ಕೇಂದ್ರದ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ ಈ ವಿದ್ಯುತ್ ಉಪ ಕೇಂದ್ರದಿಂದ 6.769 ಎಂ.ಯು ನಷ್ಟು ವಿದ್ಯುತ್ ನಷ್ಟದ ಉಳಿಕೆ ಆಗಲಿದೆ. ಆಲ್ದೂರು ಚಿಕ್ಕಮಗಳೂರು ಮತ್ತು ಬಾಳೆಹೊನ್ನೂರು ವಿದ್ಯುತ್ ಉಪಕೇಂದ್ರಗಳ ಮೇಲಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ ಮತ್ತು ವೋಲ್ಟೇಜ್ ರೆಗ್ಯುಲೇಷನ್ ಶೇಕಡ 7.89 ರವರೆಗೂ ಸುಧಾರಿಸಬಹುದು. ಇದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಕಾಮಗಾರಿಯನ್ನು ಶೀಘ್ರವಾಗಿ ಮತ್ತು ವ್ಯವಸ್ಥಿತವಾಗಿ ಪೂರೈಸುವಂತೆ ಸಂಬಂಧಪಟ್ಟ ಕಂಟ್ರ್ಯಾಕ್ಟರ್ಗೆ ತಿಳಿಸಿದರು.
ಮೆಸ್ಕಾಂನ ಸೂಪರಿಡೆಂಟ್ ಇಂಜಿನಿಯರ್ ಕೆ.ಸುರೇಶ್ ಕಾಮಗಾರಿಯ ಕುರಿತು ಮಾಹಿತಿ ನೀಡಿ ಕಾಮಗಾರಿಯೂ 2023 ನವೆಂಬರ್ 28 ರಂದು ಡಿ.ಪಿ.ಆರ್ ಆಗಿದ್ದು ವಿದ್ಯುತ್ ಉಪ ಕೇಂದ್ರ, ಪ್ರಸರಣ ಮಾರ್ಗ ಹಾಗೂ 66 ಕೆ.ವಿ ಟರ್ಮಿನಲ್ಗೆ ಸುಮಾರು 33 ಕೋಟಿ ಡಿ.ಪಿ.ಆರ್ ಆಗಿದೆ. ಉದ್ದೇಶಿತ ಕಾಮಗಾರಿಯೂ 212.5 ಎಂ.ವಿ.ಎ, 66/11 ಕೆ. ವಿ ವಿದ್ಯುತ್ ಉಪ ಕೇಂದ್ರ ವಾಗಿದೆ. ಇದು 66 ಕೆ.ವಿ ಏಕಮುಖ ಮಾರ್ಗವನ್ನು ದ್ವಿಮುಖ ಗೋಪುರದಲ್ಲಿ ಹಾಲಿ ಇರುವ 66/ 11 ಕೆ.ವಿ ಆಲ್ದೂರು ವಿದ್ಯುತ್ ಉಪ ಕೇಂದ್ರದಿಣಂದ 66/11 ಕೆ.ವಿ ಮಲ್ಲಂದೂರು ಉಪ ಕೇಂದ್ರದ ವರೆಗೆ ಸುಮಾರು 21.68 ಕಿ.ಮೀ 66 ಕೆ. ವಿ ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿಯಾಗಿದೆ ಎಂದರು.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷರು ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗೋಪಾಲಕೃಷ್ಣ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಮೆಸ್ಕಾಂನ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.