ನಮ್ಮ ಬಣಕ್ಕೆ ಟಿಕೆಟ್ ಬೇಕು, ನಮಗೇ ಕೊಡ್ಬೇಕು ಎಂದು ಕೋಲಾರ ಕಾಂಗ್ರೆಸ್ ಟಿಕೆಟ್ ಪ್ರಹಸನ ಕಾಂಗ್ರೆಸ್ ನಾಯಕರಿಗೆ ಭಾರೀ ತಲೆ ನೋವು ತಂದಿಟ್ಟಿತ್ತು. ಮುನಿಯಪ್ಪ ಅಳಿಯನಿಗೆ ಟಿಕೆಟ್ ಕೊಡುವುದಕ್ಕೆ ಮುಂದಾದಾಗ ರಮೇಶ್ ಬಣ ರಾಜೀನಾಮೆ ನೀಡಲು ಮುಂದಾಗಿದ್ದರು. ಇತ್ತ ರಮೇಶ್ ಬಣ ಹೇಳುತ್ತಿರುವ ಹೆಸರಿಗೆ ಮಣೆ ಹಾಕಿದರೆ ಮುನಿಯಪ್ಪಗೆ ಮುನಿಸು. ಇವರಿಬ್ಬರ ಸಿಟ್ಟನ್ನ ಶಮನ ಮಾಡುವಲ್ಲಿ ಸುಸ್ತಾಗಿ ಹೋಗಿದ್ದ ಕಾಂಗ್ರೆಸ್ ನಾಯಕರು ಕೊನೆಗೆ 3ನೇ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ. ಅಚ್ಚರಿ ಅಭ್ಯರ್ಥಿ ಕೆ.ವಿ.ಗೌತಮ್ಗೆ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಟಿಕೆಟ್ ಘೋಷಣೆ ಬಳಿಕ ಮುನಿಸು ಮರೆತು ಹೈಕಮಾಂಡ್ ನಿರ್ಧಾರವನ್ನು ಸಚಿವ ಮುನಿಯಪ್ಪ ಸ್ವಾಗತಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೌತಮ್ಗೆ ಟಿಕೆಟ್ ನೀಡಿರುವುದನ್ನು ಸ್ವಾಗತಾರ್ಹ. ಟಿಕೆಟ್ ಕೇಳಿದ್ದೆ, ಎಲ್ಲಾ ಶಾಸಕರು ಒಗ್ಗಟ್ಟಾಗಿ ಬರೋದಕ್ಕೆ ಆಗಲಿಲ್ಲ. ಹೀಗಾಗಿ ಬೇರೆಯವರಿಗೆ ಅನಿವಾರ್ಯವಾಗಿ ಟಿಕೆಟ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಗೌತಮ್ಗೆ ರಾಜಕೀಯ ಹಿನ್ನೆಲೆ ಇದೆ, ತಂದೆ ಮೇಯರ್ ಆಗಿದ್ದವರು. ಕಾಂಗ್ರೆಸ್ ಪಕ್ಷದ ಗೆಲುವಿಗೆ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಬೇಕಿದೆ. 7 ಬಾರಿ ಸಂಸದ, 10 ವರ್ಷಗಳ ಕಾಲ ಮಂತ್ರಿ, CWC ಸದಸ್ಯನಾಗಿದ್ದೆ. ಲೋಕಸಭೆಯಲ್ಲಿ ಸೋತ ಬಳಿಕ ಶಾಸಕನಾಗಿ ಮಾಡಿ ಮಂತ್ರಿ ಮಾಡಿದ್ದಾರೆ ಎಂದಿದ್ದಾರೆ.