ಬೆಳಗಾವಿ, ಅಕ್ಟೋಬರ್ 25: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮೈಸೂರು ಪ್ರವಾಸಕ್ಕೆ ಕಾಂಗ್ರೆಸ್ (Congress) ಹೈಕಮಾಂಡ್ ಬ್ರೇಕ್ ಹಾಕಿ ಅಂತೂ ಸಮಸ್ಯೆ ಬಗೆಹರಿಸಿತು ಎಂಬಷ್ಟರಲ್ಲೇ ಅವರು ವಿದೇಶ ಪ್ರವಾಸದ (Foreign Trip) ಯೋಜನೆ ಇದೆ ಎಂದು ಹೇಳಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಕುತೂಹಲ ಸೃಷ್ಟಿಸಿದೆ. ಬೆಳಗಾವಿಯಲ್ಲಿ ಬುಧವಾರ ಮಾತನಾಡಿದ ಸತೀಶ್ ಜಾರಕಿಹೊಳಿ, ಹೊರ ದೇಶ ಪ್ರವಾಸಕ್ಕೆ ಹೋಗುವ ವಿಚಾರ ಇದೆ. ಹೀಗೆಯೇ ಅಂತ ನಿರ್ಧಾರ ಮಾಡಿಲ್ಲ, ಅದಕ್ಕೆ ಸಮಯ ಬರಬೇಕು. ಪ್ರವಾಸ ಮಾಡುವ ಪ್ಲ್ಯಾನ್ ಇದ್ದೇ ಇದೆ ಎಂದು ಹೇಳಿದ್ದಾರೆ.ಬಹಳಷ್ಟು ಜನ ಪ್ರವಾಸಕ್ಕೆ ಹೋಗುತ್ತಾರೆ, ನಾವೂ ಹೋಗುತ್ತೇವೆ. ಪಕ್ಷದ ಅಧ್ಯಕ್ಷರು, ಸಿಎಂ ಗಮನಕ್ಕೆ ತಂದು ಪ್ರವಾಸಕ್ಕೆ ಹೋಗ್ತೇವೆ ಎಂದು ಅವರು ತಿಳಿಸಿದ್ದಾರೆ.
ಸತೀಶ್ ಜಾರಕಿಹೊಳಿ ಶಾಸಕರೊಂದಿಗೆ ಮೈಸೂರು ಪ್ರವಾಸಕ್ಕೆ ಹೊರಟಿದ್ದ ವಿಚಾರ ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ಸತೀಶ್ ಅವರು ಬೆಳಗಾವಿ ರಾಜಕಾರಣದಲ್ಲಿ ಇತರರ ಹಸ್ತಕ್ಷೇಪದಿಂದ ರೋಸಿಹೋಗಿ ಅಸಮಾಧಾನದಿಂದ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದೇ ಹೇಳಲಾಗಿತ್ತು. ನಂತರ ಕಾಂಗ್ರೆಸ್ ಹೈಕಮಾಂಡ್ ನಾಯಕರು ಅವರನ್ನು ಸಮಾಧಾನಪಡಿಸಿದ್ದರು.