ಸಮಾಜದ ಬಳಕೆಗೆ ಬರದ ಯೋಜನೆ ಹಣ । ಬಹುಜನ ಸಮಾಜ ಪಕ್ಷದ ವತಿಯಿಂದ ತಹಸೀಲ್ದಾರ್ಗೆ ಮನವಿ ಪತ್ರ ಸಲ್ಲಿಕೆ
ಪ್ರತಿನಿಧಿ ವರದಿ ಸಕಲೇಶಪುರ
ರಾಜ್ಯದ ಸಿದ್ದರಾಮಯ್ಯ ಅವರ ನೇತೃವದ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಎಸ್ಸಿಎಸ್ಟಿ ಮತ್ತು ಟಿಎಸ್ಪಿ ಯೋಜನೆಯ ಅಡಿಯಲ್ಲಿ ಮೀಸಲಿಟ್ಟಿದ್ದ ಕೊಟ್ಯಾಂತರ ರೂಪಾಯಿ ಹಣವನ್ನು ಆ ಸಮಾಜಗಳಿಗೆ ಬಳಸದೆ ದುರ್ಬಳಕೆ ಮಾಡಿಕೊಂಡಿರುವುದನ್ನು ವಿರೋಧಿಸಿ ಗುರುವಾರ ಬಹುಜನ ಸಮಾಜ ಪಕ್ಷದ ವತಿಯಿಂದ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷ ಗಂಗಾಧರ ಬಹುಜನ್ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ವಿವಿಧ ಯೋಜನೆಗಳ ಮುಖಾಂತರ ಶೋಷಿತ ಸಮಾಜವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸದುದ್ದೇಶದಿಂದ ಕರ್ನಾಟಕ ಸರ್ಕಾರವು 2013-14ರಲ್ಲಿ ಎಸ್ಸಿಎಸ್ಟಿ ಮತ್ತು ಟಿಎಸ್ಪಿ ಕಾಯ್ದೆಯನ್ನು ರೂಪಿಸಿ ಇದರ ಅಡಿಯಲ್ಲಿ ರಾಜ್ಯ ಯೋಜನಾ ವೆಚ್ಚದ ಒಂದು ಭಾಗವನ್ನು ಮೀಸಲಿಡುವುದಕ್ಕಾಗಿ ಈ ಅಧಿನಿಯಮ ಅವಕಾಶ ಕಲ್ಪಿಸಲಾಗಿತ್ತು. ಈ ಯೋಜನೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಆಗುತ್ತದೆ ಎಂದು ಆಶಾಭಾವನೆ ಮೂಡಿತ್ತು. ಆದರೆ ಕರ್ನಾಟಕ ರಾಜ್ಯವನ್ನಾಳಿದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಈ ಅಧಿನಿಯಮದ ಆಶಯಗಳನ್ನು ಜಾರಿ ಮಾಡದೆ ಗಾಳಿಗೆ ತೂರುವ ಮೂಲಕ ಪರಿಶಿಷ್ಟ ಸಮಾಜಕ್ಕೆ ದ್ರೋಹ ಮಾಡಿವೆ ಎಂದು ದೂರಿದರು.
2014-15ನೇ ಸಾಲಿನಿಂದ ಇದೂವರೆಗೂ 10 ವರ್ಷಗಳಲ್ಲಿ 2,94,963 ಕೋಟಿ ರೂ.ಅನ್ನು ಈ ಉದ್ದೇಶಕ್ಕೆ ಮೀಸಲಿಡಲಾಗಿದೆ. ಆದರೆ ಈ ಪೈಕಿ ಕೇವಲ ಶೇ.10 ರಷ್ಟು ಹಣವನ್ನೂ ಸಹ ಎಸ್ಸಿಎಸ್ಟಿ ಗಳಿಗೆ ನೇರವಾಗಿ ತಲುಪಿಸದೆ ಸರ್ಕಾರಗಳು ಮಹಾ ದ್ರೋಹ ಮಾಡಿವೆ. 2023-24 ಮತ್ತು 2024-25ನೇ ಸಾಲಿನ 2 ವರ್ಷಗಳಲ್ಲಿ 25,398 ಕೋಟಿ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿದೆ. ಹಿಂದಿನ ಬಿಜೆಪಿ ಸರ್ಕಾರ ಸುಮಾರು 19,000 ಕೋಟಿ ರೂ.ಗಳನ್ನು ಅನ್ಯ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿರುವ ಮೂಲಕ ಸದರಿ ಕಾಯ್ದೆಯ ಉದ್ದೇಶವನ್ನು ಅಪಹಾಸ್ಯಗೊಳಿಸಿವೆ. ಅಲ್ಲದೇ ಸರ್ಕಾರವೇ ಹೇಳಿರುವಂತೆ ಬಿಜೆಪಿ ಆಡಳಿತದಲ್ಲಿ ಭೋವಿ ಅಭಿವೃದ್ಧಿ ನಿಗಮ, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಭವ ಅಭಿವೃದ್ಧಿ ನಿಗಮಗಳಲ್ಲಿ ಹತ್ತಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ. ಇತ್ತೀಚೆಗೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಹಗರಣ ನಡೆದಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ ಇದೂವರೆಗೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಸರ್ಕಾರಗಳು ಸುಮಾರು 70 ಸಾವಿರ ಕೋಟಿ ರೂ. ದುರ್ಬಳಕೆ ಮಾಡಿಕೊಂಡಿರುವುದು ಈ ಜನಾಂಗಕ್ಕೆ ಮಾಡಿದ ಮಹಾನ್ ದ್ರೋಹವಾಗಿದೆ ಎಂದರು.
ಬಹುಜನ ಸಮಾಜ ಪಕ್ಷದ ಜಿಲ್ಲಾ ಅಧ್ಯಕ್ಷ ಹರೀಶ್ ಅತ್ನಿ ಮಾತನಾಡಿ, ಇದೂವರೆಗೂ ಮೀಸಲಿಟ್ಟ 21 ಇಲಾಖೆಗಳ ಎಸ್ಸಿ, ಎಸ್ಟಿ ಮತ್ತು ಟಿಎಸ್ಪಿಯ ಹಣವನ್ನು ಈ ಜನಾಂಗದ ಅಭಿವೃದ್ಧಿಗೆ ಮಾಡಬಹುದಾದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ, ಬಿ.ಇ., ಎಂ.ಬಿ.ಬಿ.ಎಸ್., ಪಿ.ಹೆಚ್ಡಿ ವರೆಗೆ ಗುಣಮಟ್ಟದ ಉಚಿತ ಶಿಕ್ಷಣ ನೀಡಬಹುದಿತ್ತು. ಲಕ್ಷಾಂತರ ಎಸ್ಸಿ, ಎಸ್ಟಿ ನಿರುದ್ಯೋಗಿ ಯುವ ಜನತೆಗೆ ಸ್ವಯಂ ಉದ್ಯೋಗ ಒದಗಿಸಬಹುದಿತ್ತು. ವಸತಿ ರಹಿತ ಎಸ್ಸಿ, ಎಸ್ಟಿ ಕುಟುಂಬಗಳಿಗೆ ಸ್ವಂತ ಮನೆ ಕಟ್ಟಿಸಿಕೊಡಬಹುದಿತ್ತು. ಭೂರಹಿತ ಎಸ್ಸಿ, ಎಸ್ಟಿ ಕೃಷಿಕಾರ್ಮಿಕರಿಗೆ ತಲಾ 5 ಎಕರೆ ಕೃಷಿ ಜಮೀನು ಖರೀದಿಸಿ ಕೊಡಬಹುದಿತ್ತು.
ಅತಿ ಬಡ ಎಸ್ಸಿ, ಎಸ್ಟಿ ರೋಗಿಗಳಿಗೆ ಉಚಿತವಾಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಬಹುದಿತ್ತು. ಈ ಯೋಜನೆಗಳನ್ನು ಜಾರಿ ಮಾಡಿ, ಎಸ್ಸಿ, ಎಸ್ಟಿಗಳನ್ನು ಅಭಿವೃದ್ಧಿ ಮಾಡುವ ಬದಲು ಈಗಾಗಲೇ ಚಾಲ್ತಿಯಲ್ಲಿದ್ದ ಅನೇಕ ಯೋಜನೆಗಳನ್ನು ಸರ್ಕಾರ ರದ್ದುಗೊಳಿಸಿದೆ. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ರದ್ದುಪಡಿಸಿದೆ. ಪ್ರಭುದ್ಧ ಯೋಜನೆ ಅಡಿಯಲ್ಲಿ ವಿದೇಶಗಳಲ್ಲಿ ಪಿಹೆಚ್ಡಿ ಓದಲು ಸ್ಕಾಲರ್ ಶಿಪ್ ನಿರಾಕರಿಸಿದೆ. ಶಾಲಾ ಕಾಲೇಜುಗಳಲ್ಲಿ ಪ್ರಾರಂಭದಲ್ಲೇ ಪೂರ್ಣ ಶುಲ್ಕ ಪಾವತಿಸುವಂತಾಗಿದೆ. ಕಾಲ-ಕಾಲಕ್ಕೆ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವೇತನ ಸಿಗುತ್ತಿಲ್ಲ ಇಂತಹ ಅನೇಕ ಗಂಭೀರ ಸಮಸ್ಯೆಗಳನ್ನು ಕರ್ನಾಟಕ ಸರ್ಕಾರದ ಗಮನಕ್ಕೆ ತಂದರೂ ಸಹ ರಾಜ್ಯ ಸರ್ಕಾರ ನಿರ್ಲಕ್ಷವನ್ನು ತಾಳಿದೆ ಎಂದರು.
ಈ ಅಂಶಗಳ ಹಿನ್ನೆಲೆಯಲ್ಲಿ ಎಸ್ಸಿ, ಎಸ್ಪಿ ಮತ್ತು ಟಿಎಸ್ಪಿ ಕಾಯ್ದೆಯಲ್ಲಿ ರೂಪಿಸಿರುವ ಯೋಜನೆಗಳು ನೇರವಾಗಿ ಎಸ್ಸಿ, ಎಸ್ಟಿಗಳಿಗೆ ತಲುಪುವಂತೆ ಮಾಡಬೇಕೆಂದು ಮತ್ತು ಈ ಮೀಸಲು ಹಣವನ್ನು ಅನ್ಯ ಯೋಜನೆಗಳಿಗೆ ದುರ್ಬಳಕೆ ಮಾಡಿರುವವರ ವಿರುದ್ಧ ಕಾಯ್ದೆಯಂತೆ ಶಿಕ್ಷೆಗೆ ಗುರಿಪಡಿಸಬೇಕು. ಈಗಾಗಲೇ ದುರ್ಬಳಕೆ ಮಾಡಿಕೊಂಡಿರುವ ಹಣವನ್ನು ಎಸ್ಸಿ, ಎಸ್ಪಿ ಮತ್ತು ಟಿಎಸ್ಪಿ ಖಾತೆಗೆ ಹಿಂತಿರುಗಿಸಲು ಆದೇಶಿಸಬೇಕೆಂದು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಮ್ಮ, ಜಿಲ್ಲಾ ಕಾರ್ಯದರ್ಶಿ ಸೋಮಶೇಖರ್, ಜಿಲ್ಲಾ ಉಸ್ತುವಾರಿ ಲಕ್ಷಣ್ ಕೀರ್ತಿ, ತಾಲೂಕು ಬಿಎಸ್ಪಿ ಅಧ್ಯಕ್ಷ ವೀರೇಶ್ ಕಲ್ಗಣೆ, ಕಾರ್ಯದರ್ಶಿ ಮಂಜಯ್ಯ, ಮಲ್ಲಯ್ಯ ಇತರರು ಇದ್ದರು.