ಮುಡಾದಲ್ಲಿ ನಡೆದಿರುವ ಅಕ್ರಮದಲ್ಲಿ ನಾನು ಭಾಗಿಯಾಗಿಲ್ಲ, ಒಂದು ವೇಳೆ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿಯಾಗುತ್ತೇನೆ ಇಲ್ಲವೆ ಕತ್ತು ಕುಯ್ದುಕೊಳ್ಳುತ್ತೇನೆ ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ ಹರೀಶ್ ಗೌಡ ಇಂದು ಹೇಳಿದ್ದಾರೆ.
ಆಶ್ರಯ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಆರೋಪಗಳನ್ನು ಮಾಡುತ್ತಿರುವ ಪಕ್ಷದ ನಾಯಕರ ಪಾಲು ಹೆಚ್ಚಿದೆ. ಸಿಎಂ ಪತ್ನಿ ಪ್ರಕರಣವನ್ನು ಮುಂದಿಟ್ಟುಕೊಂಡು ಕೆಲವರು ಬಚಾವ್ ಆಗಲು ಯತ್ನಿಸುತ್ತಿದ್ದಾರೆ. ನಾನು ಅಕ್ರಮವಾಗಿ ಯಾವುದೇ ನಿವೇಶನ ಪಡೆದಿಲ್ಲಅಕ್ರಮವಾಗಿ ನಿವೇಶನ ಪಡೆಯುವ ಅವಶ್ಯಕತೆಯೂ ನನಗಿಲ್ಲ. ಮುಡಾದಲ್ಲಿ ನಾನು ಅಕ್ರಮವಾಗಿ ನಿವೇಶನ ಪಡೆದಿರುವುದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿಯಾಗುತ್ತೇನೆ, ಕತ್ತು ಕುಯ್ದುಕೊಳ್ಳುತ್ತೇನೆ, ಸುಸೈಡ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿಯವರ ತರಹ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ನಾನು ಮಾಡೋದಿಲ್ಲ.ಮುಡಾದಲ್ಲಿ ನೂರಕ್ಕೆ ಇನ್ನೂರರಷ್ಟು ಅಕ್ರಮ ನಡೆದಿದೆ ಆದರೆ ಸಿಎಂ ಪ್ರಕರಣದಲ್ಲಿ ಅಕ್ರಮ ನಡೆದಿಲ್ಲ.
ಮುಡಾದಲ್ಲಿ ಸಿದ್ದರಾಮಯ್ಯರನ್ನು ಬಿಟ್ಟು ಬಹುತೇಕರು ಅಕ್ರಮ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇನೆ, ದಾಖಲೆಗಳನ್ನ ಕಲೆ ಹಾಕಿ ಸಮಯ ಬಂದಾಗ ಜನತೆಗೆ ಸತ್ಯಾಸತ್ಯತೆ ತಿಳಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ನಾನು ಗೆದ್ದ ಬಳಿಕ ಆಶ್ರಯ ಸಮಿತಿಯ ಮೊದಲ ಸಭೆ ನಡೆಸಿದ್ದೇನೆ. 2002ನೇ ಸಾಲಿನಿಂದ 3279 ಜನ ಅರ್ಜಿ ಹಾಕಿದ್ದಾರೆ. ಆಶ್ರಯ ಸಮಿತಿಗೆ ಯಾರು ಅರ್ಜಿ ಹಾಕಿದ್ದಾರೆ ಎಂಬ ಮಾಹಿತಿ ಪಡೆದಿದ್ದೇನೆ.
22 ವರ್ಷದಿಂದ ಆಶ್ರಯ ಸಮಿತಿಯಿಂದ ಯಾವುದೇ ಮನೆ, ನಿವೇಶನ ಮಂಜೂರು ಮಾಡಿಲ್ಲ ಹಂಚ್ಯಾ ಗ್ರಾಮದಲ್ಲಿ 24.9 ಎಕರೆ, ಹೆಬ್ಬಾಳುವಿನಲ್ಲಿ 8.28 ಎಕರೆ, ಅಯ್ಯಜ್ಜನಹುಂಡಿ ಗ್ರಾಮದಲ್ಲಿ 15 ಎಕರೆ ಜಾಗ ಗುರುತಿಸಲಾಗಿದೆ. ಇದರ ಜೊತೆಗೆ ಶ್ರೀರಾಂಪುರದಲ್ಲಿ 36.24 ಎಕರೆ, ಶಾದನಹಳ್ಳಿಯಲ್ಲಿ 10 ಎಕರೆ, ಬಂಡೀಪಾಳ್ಯದಲ್ಲಿ 6.26 ಎಕರೆ ಜಾಗ ಗುರುತಿಸಲಾಗಿದೆ. ಚಾಮರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿರುವ ಜನರಿಗೆ ನಿವೇಶನ ಅಥವಾ ಗುಂಪು ಆಶ್ರಯ ಮನೆಗಳನ್ನು ನಿರ್ಮಾಣ ಮಾಡಕೊಡಲು ನಿರ್ಧರಿಸಿದ್ದೇವೆ. ಒಂದು ತಿಂಗಳೊಳಗೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು,ಅರ್ಹ ಫಲಾನುಭವಿಗಳು ಈಗಾಗಲೇ ಅರ್ಜಿ ಹಾಕಿರುವ ಬಗ್ಗೆ ಸೂಕ್ತ ಮಾಹಿತಿ ನೀಡಿದ ನಂತರ ಒಂದು ವರ್ಷದ ಒಳಗೆ 3279 ಫಲಾನುಭವಿಗಳಿಗೂ ನಿವೇಶನ ಕೊಡಿಸುವ ಸಂಕಲ್ಪ ಮಾಡಿದ್ದೇನೆ ಎಂದಿದ್ದಾರೆ.