ಹನೂರು: ಪಟ್ಪಣದ ಅಂಬೇಡ್ಕರ್ ವೃತ್ತದಲ್ಲಿರುವ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ರವರ ಪ್ರತಿಮೆಯನ್ನು ಮಧ್ಯಭಾಗದಲ್ಲಿ ಪ್ರತಿಷ್ಠಾಪಿಸುವ ಸಲುವಾಗಿ ಶಾಸಕ ಎಂ ಆರ್ ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಅಂಬೇಡ್ಕರ್ ಸಮುದಾಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದಕ್ಕೆ ಬಹಳ ಸಂತೋಷವಾಗಿದೆ, ಪೂಜ್ಯ ಜ್ಞಾನ ಪ್ರಕಾಶ್ ಸ್ವಾಮೀಜಿಯವರ ಸಹಕಾರ ಹಾಗೂ ನಿಮ್ಮೆಲ್ಲರ ಸಹಕಾರ ಇದ್ದರೆ ಅಂಬೇಡ್ಕರ್ ರವರ ಪ್ರತಿಮೆ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಸಾಧ್ಯವಾದರೆ ಏಪ್ರಿಲ್ 14 ನೇ ಅಂಬೇಡ್ಕರ್ ಜಯಂತಿಯ ದಿನ ವಿಜೃಂಭಣೆಯಿಂದ ಉದ್ಘಾಟನೆ ಮಾಡುತ್ತೇನೆ ಎಂದರು.
ಇದೇ ವೇಳೆ ಮಾತನಾಡಿದ ಉರಿಲಿಂಗ ಪೆದ್ದಿ ಮಠದ ಪೀಠಾಧ್ಯಕ್ಷರಾದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿಯವರು ಅಂಬೇಡ್ಕರ್ರವರ ಮಾತಿನಂತೆ ನೀವು ಒಗ್ಗಟ್ಟಾದರೆ ಉಳಿಯುತ್ತೀರಿ, ವಿಭಜನೆಯಾದರೆ ಸಾಯುತ್ತೀರಿ ಎಂದು ಹೇಳಿದರು.
ಹನೂರು ಕ್ಷೇತ್ರಕ್ಕೆ ಮಂಜುನಾಥ್ ರವರು ಅಭಿವೃದ್ಧಿಯ ಸಂಕೇತ, ಕ್ಷೇತ್ರದಲ್ಲಿ 45 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆಯನ್ನು ರೂಪಿಸುತ್ತಿದ್ದಾರೆ. ಅದು ಅಲ್ಲದೆ ಯಾವ ಕಾರ್ಯಕ್ರಮಗಳಿಗೂ ಶಾಸಕರನ್ನು ಆಹ್ವಾನಿಸಿದರೂ ಸಹ ಹನೂರಿನ ಜನರ ಋಣ ನನ್ನ ಮೇಲಿದೆ. ಹಾಗಾಗಿ ಅವರ ಕೆಲಸ ಮತ್ತು ಯಾವುದೇ ಕಾರ್ಯಕ್ರಮಗಳಿಗೆ ದಿನದ 24 ಗಂಟೆಗಳು ಸಿದ್ಧನಿದ್ದೇನೆ ಎಂದು ಹೇಳುತ್ತಾರೆ ಎಂದು ಶಾಸಕರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಹೀಗಿರುವಾಗ ಪಟ್ಟಣ ಸೇರಿದಂತೆ ನೆರೆಹೊರೆ ಗ್ರಾಮದ ಸಮುದಾಯದ ಮುಖಂಡರುಗಳು ಒಗ್ಗಟ್ಟಾಗಿ ಜೇನು ಗೂಡಿನಂತೆ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಹನೂರು ತಾಲೂಕು ವ್ಯಾಪ್ತಿಯ ಅಜ್ಜೀಪರ, ಮಂಗಲ, ಮಣಗಳ್ಳಿ, ಬಂಡಳ್ಳಿ, ಡಿ ಎಂ ಸಮುದ್ರ, ಲೊಕ್ಕನಹಳ್ಳಿ, ಚಿಕ್ಕಮಾಲಾಪುರ, ಕಾಮಗೆರೆ, ಕಣ್ಣೂರು,ಬಿ ಗುಂಡಾಪುರ,ಕೆ ಗುಂಡಾಪುರ ಸೇರಿದಂತೆ ಅನೇಕ ಗ್ರಾಮದ ಮುಖಂಡರುಗಳು ಗ್ರಾಮಸ್ಥರು ಹಾಗೂ ಹನೂರು ಪಟ್ಟಣದ ಯಜಮಾನರುಗಳಾದ ಚಿಕ್ಕಣ್ಣ, ಸಿದ್ದರಾಜು, ಮುಖಂಡರಾದ ಬಸವರಾಜು, ಪಂ.ಪ.ಸದಸ್ಯರಾದ ಸಂಪತ್ ಕುಮಾರ್, ಮಹೇಶ್ ಕುಮಾರ್, ಹನೂರು ಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ಶಶಿಕುಮಾರ್ ಹಾಗೂ ಸಿಬ್ಬಂದಿಗಳು ಸೇರಿದಂತೆ ಪಟ್ಟಣದ ಯುವಕರು ಸಾರ್ವಜನಿಕರು ಹಾಜರಿದ್ದರು.