ಪ್ರತಿನಿಧಿ ವರದಿ ಕೊಳ್ಳೇಗಾಲ
ತಾಲೂಕಿನ ಟಗರಪುರ ಹಾಗೂ ಕುಂತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ವಿವಿದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಟಗರಪುರ ಸಮೀಪದ ಆಲಹಳ್ಳಿ ಮತ್ತು ಚಿಲಕವಾಡಿ ಬೆಟ್ಟದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರೆ, ಹೊಸಮಾಲಂಗಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆಗೊಳಿಸಿದರು.
ಅಂತೆಯೇ, ಚಿಲಕವಾಡಿ ಗ್ರಾಮದಲ್ಲಿ ಕನಕ ಸಮುದಾಯ ಭವನ ಮತ್ತು ಟಗರಪುರ ಗ್ರಾಮದಲ್ಲಿ ಶ್ರೀ ಶನೈಶ್ಚರಸ್ವಾಮಿ ದೇವಸ್ಥಾನ, ಸಿಲ್ಕಲ್ಪುರ ಗ್ರಾಮದಲ್ಲಿ ಶ್ರೀ ಮಂಟ್ಯೇಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ ಅವರು ಮುಂದುವರೆದ ಕಾಮಗಾರಿ ಕೈಗೊಳ್ಳುವ ಕುರಿತು ಪರಿಶೀಲಿಸಿದರು.
ನಂತರ ಮಾತನಾಡಿ, ಕೊಳ್ಳೇಗಾಲ ಕ್ಷೇತ್ರದ 2023ರ ಚುನಾವಣೆಯಲ್ಲಿ ನನ್ನ ಕೈ ಹಿಡಿದ ಮತದಾರ ಪ್ರಭುಗಳನ್ನು ಸದಾ ನಾನು ಗೌರವಿಸುತ್ತೇನೆ ಹಾಗೂ ಕ್ಷೇತ್ರದ ಸರ್ವೋತೋಮುಖ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದರಲ್ಲದೇ, ಟಗರಪುರದಲ್ಲಿ ಶ್ರೀ ಶನೈಶ್ಚರಸ್ವಾಮಿ ದೇವಸ್ಥಾನದ ನೆಲ ಹಾಸು ಕಾಮಗಾರಿಯನ್ನು ನಿಗದಿತ ಕಾಲಮಿತಿಯೊಳಗೆ ಚಾ.ನಗರ ನಿರ್ಮಿತಿ ಕೇಂದ್ರದ ಉಪ ಯೋಜನಾ ವ್ಯವಸ್ಥಾಪಕ ಎಂ.ಪ್ರತಾಪ್ ಕುಮಾರ್ ಗುಣಮಟ್ಟದಿಂದ ನಿರ್ಮಿಸಿದ್ದಾರೆ ಎಂದು ಪ್ರಶಂಸಿಸಿದರು.
ರಾಜಕೀಯವಾಗಿ ಯಾವುದೇ ಕಳಂಕಕ್ಕೊಳಗಾಗದೆ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು 2ನೇ ಬಾರಿಗೆ ಮುಖ್ಯಮಂತ್ರಿಯಾಗಿ 15 ತಿಂಗಳು 5 ಗ್ಯಾರಂಟಿ ಯೋಜನೆಗಳನ್ನು ನೀಡಿದ್ದಾರೆ. ಇದರ ಜತೆಗೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಇವುಗಳನ್ನು ಸಹಿಸಲಾರದ ವಿಪಕ್ಷ ಬಿಜೆಪಿ, ಸುಪ್ರೀಂಕೋರ್ಟ್ನಲ್ಲಿ ಛೀಮಾರಿ ಹಾಕಿಸಿಕೊಂಡು 25 ಲಕ್ಷ ದಂಡ ಕಟ್ಟಿರುವ ವ್ಯಕ್ತಿಯನ್ನು ಮುಂದಿಟ್ಟುಕೊAಡು ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರನ್ನು ಎತ್ತಿಕಟ್ಟಿ ಪ್ರಾಷಿಕ್ಯೂಷನ್ಗೆ ಅನುಮತಿ ಕೊಡಿಸಿ ರಾಜಕೀಯ ಷಡ್ಯಂತ್ರ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಬಿ.ಎಚ್.ಚಂದ್ರು, ಉಪಾಧ್ಯಕ್ಷ ರಾಜೇಂದ್ರ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ತೋಟೇಶ್, ನಿರ್ಮಿತಿ ಕೇಂದ್ರದ ಉಪ ಯೋಜನಾ ವ್ಯವಸ್ಥಾಪಕ ಎಂ.ಪ್ರತಾಪ್ ಕುಮಾರ್ ಸೇರಿದಂತೆ ಇತರರು ಇದ್ದರು.
23ಕೆಜಿಎಲ್-3 ಫೋಟೋ ಶೀರ್ಷಿಕೆ: ಕೊಳ್ಳೇಗಾಲ ತಾಲೂಕಿನ ಆಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಭೂಮಿ ಪೂಜೆ ನೆರವೇರಿಸಿದರು.