*ತಿ.ನರಸೀಪುರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಹೆಚ್.ಹನುಮಂತ ಅಭಿಪ್ರಾಯ
ಪ್ರತಿನಿಧಿ ವರದಿ ತಲಕಾಡು
ಸೇವೆ ಮಾಡಲು ಹಣ ಮುಖ್ಯವಲ್ಲ, ಯಾವುದೇ ಪ್ರತಿ ಫಲಾಪೇಕ್ಷೆ ಬಯಸದೆ ಪ್ರೀತಿ ವಿಶ್ವಾಸದಿಂದ ಸೇವೆ ಮಾಡಲು ಮುಕ್ತ
ಮನಸ್ಸಿರಬೇಕು ಎಂದು ತಿ.ನರಸೀಪುರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಹೆಚ್.ಹನುಮಂತ ತಿಳಿಸಿದರು.
ತಲಕಾಡು ಹೋಬಳಿ ಕುರಬಾಳಹುಂಡಿ ಗ್ರಾಮದಲ್ಲಿ ಶನಿವಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗು ಪ್ರಥಮ ದರ್ಜೆ ಕಾಲೇಜು ತಲಕಾಡು ರಾಷ್ಟೀಯ ಸೇವಾ ಶಿಬಿರದ ಸಹಯೋಗದಲ್ಲಿ ಆಯೋಜಿಸಿದ್ದ, ಮೋಟಾರು ವಾಹನ ಕಾಯ್ದೆಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಷ್ಟೀಯ ಸೇವಾ ಶಿಬಿರದ ಮೂಲಕ ಕುರಬಾಳಹುಂಡಿ ಗ್ರಾಮದಲ್ಲಿ ಹಮ್ಮಿ ಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರ, ಗ್ರಾಮದ ಸ್ವಚ್ಚತೆ ಹಾಗು ಕೆರೆ ಸ್ವಚ್ಚತೆಯೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಿದ್ದಕ್ಕೆ ಸಾಕ್ಷಿ ಎಂದು ಶಿಬಿರಾರ್ಥಿಗಳ ಪ್ರಶಂಸಿಸಿದರು. ವಿದ್ಯಾರ್ಥಿ ದೆಸೆಯಲ್ಲೇ ಕೈಲಾದ ಸಣ್ಣ ಸಣ್ಣ ಸಮಾಜಮುಖಿ ಸೇವೆ ಸಲ್ಲಿಸುವುದನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಲು ನ್ಯಾಯಾಧೀಶರು ಕರೆ ನೀಡಿದರು.
ಮಹಾನ್ ವ್ಯಕ್ತಿಗಳಾಗಿ ಸಾಧನೆ ಮಾಡಿದವರು ರಾತ್ರೋ ರಾತ್ರಿ ಮಹಾನ್ ವ್ಯಕ್ತಿಗಳಾಗಲಿಲ್ಲ. ಜೀವನದಲ್ಲಿ ಅಪಾರ ಪರಿಶ್ರಮ ಏಳುಬೀಳಿನ ಹಾದಿಯಲ್ಲಿ ಸಾಗಿ ಸಾಧನೆ ಮಾಡಿದವರಾಗಿದ್ದಾರೆ. ಸತತ ಪರಿಶ್ರಮ ತಾಳ್ಮೆ ಸಹನೆಯಿಂದ ಮಾತ್ರ ಮಹಾನ್ ಸಾಧನೆ ಮಾಡಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.ದೇಶದ ಸುರಕ್ಷತೆಗೆ ಕಾನೂನು ಹಾಗೂ ಕಾಯ್ದೆಗಳು ಎಷ್ಟು ಮಹತ್ವದ್ದು ಎಂಬುದನ್ನು ಇವರು ತಿಳಿಸಿದ್ದಲ್ಲದೆ, ಮೋಟಾರು ವಾಹನ ಚಲಾಯಿಸುವಿಕೆಯ ಕುರಿತು ವಿದ್ಯಾರ್ಥಿಗಳಲ್ಲಿ ಇರಬೇಕಾದ ಕಾನೂನು ಅರಿವಿನ ಬಗ್ಗೆ ನ್ಯಾಯಧೀಶರು ಮನದಟ್ಟು ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ವೆಂಕಟೇಶ್ ಕೆ ಎನ್ ರವರು ಭಾಗವಹಿಸಿದ್ದರು. ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮೋಟಾರು ವಾಹನ ಕಾಯ್ದೆಯ ಕುರಿತು ತಿ.ನರಸೀಪುರದ ಹಿರಿಯ ವಕೀಲ ಭುವನೇಶ್ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನಾಗಣ್ಣ ಎಂ ಎಸ್ ರವರು, ಅಧ್ಯಕ್ಷೀಯ ನುಡಿಗಳಲ್ಲಿ ವಿದ್ಯಾರ್ಥಿಗಳಿಗೆ ಮೋಟಾರು ವಾಹನ ಕಾಯ್ದೆಯ ಅಗತ್ಯತೆ ಹಾಗೂ ಪ್ರಸ್ತುತತೆಯ ಕುರಿತು ವಿವರಿಸಿದರು.
ತಲಕಾಡು ಆರಕ್ಷಕ ಠಾಣೆಯ ಉಪನಿರೀಕ್ಷಕಿ ಉಮಾವತಿ,ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದ ಶಿಬಿರಾಧಿಕಾರಿ ಚೇತನ್ ಜೆ, ಸಹ ಶಿಬಿರಾಧಿಕಾರಿಗಳಾದ ಕೃಷ್ಣಕುಮಾರಿ, ಕಾಲೇಜಿನ ಬೋಧಕರು, ತಿ.ನರಸೀಪುರ ನ್ಯಾಯಾಲಯದ ಸಿಬ್ಬಂದಿ, ತಲಕಾಡಿನ ಪೊಲೀಸ್ ಠಾಣೆಯ ಸಿಬ್ಬಂದಿ, ಕುರಬಾಳನಹುಂಡಿ ಗ್ರಾಮಸ್ಥರು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.