ಬೆಂಗಳೂರು ಅ.11: ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಕಳೆದ ವಾರ ಬೆಂಗಳೂರಿನಲ್ಲಿ (Bengaluru) ಆಭರಣ ವ್ಯಾಪಾರಿಗಳ ಮೇಲೆ ಐಟಿ ಅಧಿಕಾರಿಗಳು (IT Officers) ದಾಳಿ ನಡೆಸಿದ್ದರು. ದೊರೆತ ದಾಖಲೆಗಳ ಆಧಾರದ ಮೇಲೆ ಕೆಲವು ಆಭರಣ ವ್ಯಾಪಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಮತ್ತೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ವ್ಯಾಪಾರಿಗಳು ಮಾತ್ರವಲ್ಲದೆ ಅಧಿಕಾರಿಗಳು ಗುತ್ತಿಗೆದಾರರ ಮನೆ ಮೇಲೂ ದಾಳಿ ಮಾಡಿದ್ದಾರೆ. ಐಟಿ ಅಧಿಕಾರಿಗಳ ಈ ದಾಳಿಗು ಮತ್ತು ಪಂಚ ರಾಜ್ಯಗಳ ಚುನಾವಣೆಗೂ ನಂಟು ಇದೆ. ಹೌದು ಕೇಂದ್ರ ಚುನಾವಣಾ ಆಯೋಗ ಪಂಚ ರಾಜ್ಯಗಳ ಚುನಾವಣೆ ದಿನಾಂಕ ಘೋಷಿಸಿದ ಹಿನ್ನೆಲೆಯಲ್ಲಿ ದೆಹಲಿ, ಚೆನ್ನೈ, ಹೈದರಾಬಾದ್ ಕರ್ನಾಟಕ ಐಟಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ತೆಲಂಗಾಣ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೈದರಾಬಾದ್ ಹಾಗೂ ಚೆನ್ನೈಗೆ ಹಣ ರವಾನೆ ಮಾಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ದೊರೆತಿದೆ. ಮಾಹಿತಿ ಆಧರಿಸಿ ನಗರಕ್ಕೆ ಬಂದ ದೆಹಲಿ, ಚೆನ್ನೈ, ಹೈದರಾಬಾದ್ ಅಧಿಕಾರಿಗಳು ಕಳೆದ ಒಂದು ವಾರದಿಂದ ಸ್ಥಳೀಯ ಪೊಲೀಸರ ಸಹಾಯದಿಂದ ರಿಯಲ್ ಎಸ್ಟೇಟ್, ಚಿನ್ನದ ವ್ಯಾಪಾರಿಗಳು, ಗುತ್ತಿಗೆದಾರರು ಸೇರಿಂದತೆ 20ಕ್ಕೂ ಹೆಚ್ಚು ಜನರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.
ಐಟಿ ಅಧಿಕಾರಿಗಳ ಗುರುವಾರ ಆಂಧ್ರ ಮೂಲದ ಉದ್ಯಮಿಗಳಾದ ಚಂದ್ರಶೇಖರ್, ಯಶಸ್ವಿನಿ, ಸುನೀತಾ, ವೆಂಕಟಶ್ರೀನಿವಾಸ್ ಮತ್ತು ವಿಜಯ್ ಸೇರಿದಂತೆ 10ಕ್ಕೂ ಹೆಚ್ಚು ಜನರ ಮನೆ, ಕಚೇರಿ ಸೇರಿದಂತೆ 75 ಕಡೆ ದಾಳಿ ಮಾಡಿದ್ದಾರೆ. ನಿನ್ನೆ (ಅ.12) ಉದ್ಯಮಿಗಳ ಮನೆಯಲ್ಲಿ 20 ಕೋಟಿ ರೂ. ಜಪ್ತಿ ಮಾಡಿದ್ದರು. ಕಳೆದ ವಾರ ಬಿಲ್ಡರ್ ಕಚೇರಿಯಲ್ಲಿ 20 ಕೋಟಿ ರೂ. ಪತ್ತೆಯಾಗಿತ್ತು. ಇದೀಗ ಗುತ್ತಿಗೆದಾರ ಅಂಬಿಕಾಪತಿಗೆ ಸೇರಿದ ಮನೆಯಲ್ಲಿ 42 ಕೋಟಿ ರೂ. ಪತ್ತೆಯಾಗಿದೆ. ಒಟ್ಟಾರೆಯಾಗಿ ಕಳೆದ ಒಂದು ವಾರದಿಂದ 82 ಕೋಟಿಗೂ ಅಧಿಕ ನಗದು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಹಲವೆಡೆ ದಾಳಿ ಮುಂದುವರೆದಿದೆ.