ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಈ ಬಾರಿಯ ಜಂಬೂಸವಾರಿ ಸಂಪನ್ನವಾಗಿದೆ. 750ಕೆಜಿ ತೂಕದ ಸ್ವರ್ಣಖಚಿತ ಸಿಂಹಾಸನದಲ್ಲಿ ನಾಡದೇವಿ ತಾಯಿ ಚಾಮುಂಡೇಶ್ವರಿ ವಿರಾಜಮಾನಳಾಗಿ ಆಸೀನಳಾಗಿದ್ದಾಳೆ. ಚಿನ್ನದ ಅಂಬಾರಿಯನ್ನ ಹೊತ್ತು ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಗಜಗಾಂಭೀರ್ಯದಲ್ಲಿ ಹೆಜ್ಜೆ ಹಾಕಿದ್ದಾನೆ.
ತಾಯಿ ಚಾಮುಂಡೇಶ್ವರಿಗೆ ಸಿಎಂ ಸಿದ್ದರಾಮಯ್ಯ ಶುಭ ಕುಂಭ ಲಗ್ನದಲ್ಲಿ ಪುಷ್ಪಾರ್ಚನೆ ಸಲ್ಲಿಸಿದ್ದು, ನಂತರ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಗಜಗಾಂಭೀರ್ಯದಲ್ಲಿ ಮೈಸೂರಿನ ರಾಜಬೀದಿಗಳಲ್ಲಿ ಹೆಜ್ಜೆಹಾಕಿದನು. ಈ ವೇಳೆ ಕ್ಯಾಪ್ಟನ್ ಅಭಿಮನ್ಯುವಿಗೆ ಹಿರಣ್ಯಾ ಮತ್ತು ಲಕ್ಷ್ಮೀ ಕುಮ್ಕಿ ಆನೆಗಳಾಗಿ ದಾರಿಯುದ್ದಕ್ಕೂ ಸಾಥ್ ನೀಡಿದವು. ಈ ಬಾರಿಯ ಜಂಬೂ ಸವಾರಿಯಲ್ಲಿ ಒಟ್ಟರೆ 9 ಆನೆಗಳು ಭಾಗವಹಿಸಿದ್ದು, ಅರಮನೆ, ಜಯಚಾಮರಾಜ ವೃತ್ತ, ಕೆ.ಆರ್ ಸರ್ಕಲ್, ಸಯ್ಯಾಜಿರಾವ್ ರಸ್ತೆ,ಆಯುರ್ವೇದಿಕ್ ಸರ್ಕಲ್, ತಿಲಕ್ ನಗರ,ಆರ್ ಎಂ ಸಿ ವೃತ್ತ, ಬಂಬೂ ಬಜಾರ್, ಹೈವೇ ಸರ್ಕಲ್ ಮೂಲಕ ಸಾಗಿದ ಜಂಬೂಸವಾರಿ ಮೆರವಣಿಗೆಯು ಕೊನೆಯದಾಗಿ ಬನ್ನಿಮಂಟಪವನ್ನು ತಲುಪಿತು. ಎಲ್ಲಿಯೂ ಆತಂಕಕ್ಕೊಳಗಾಗದೆ ಗಾಂಬೀರ್ಯ ನಡಿಗೆಯಲ್ಲಿ ಅಭಿಮನ್ಯು ಬನ್ನಿಮಂಟಪವನ್ನು ತಲುಪಿದ್ದು, ಸತತ 5 ನೇ ಬಾರಿಗೆ ಅಂಬಾರಿ ಹೊತ್ತು ತನ್ನ ಜವಾಬ್ದಾರಿಯನ್ನು ಈ ಬಾರಿಯು ಯಶಸ್ವಿಯಾಗಿ ನೆರವೇರಿಸಿದ್ದಾನೆ. ಅಲ್ಲದೆ ಈ ಮೂಲಕ ಜನರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಇನ್ನು ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಎಂದಿನಂತೆ ಬಿಗಿ ಬಂದೋಬಸ್ತ್ ವಹಿಸಲಾಗಿತ್ತು. ದೇಶ-ವಿದೇಶಗಳ ಪ್ರವಾಸಿಗರು, ರಾಜ್ಯ ಹೊರರಾಜ್ಯಗಳಿಂದ ದಸರಾ ನೋಡಲು ಆಗಮಿಸಿದ್ದವರು ಸೇರಿದಂತೆ ಮೈಸೂರಿಗರು ಜಂಬೂಸವಾರಿ ಸಾಗುವ ರಸ್ತೆಯ ಇಕ್ಕೆಲೆಗಳಲ್ಲಿ ಕಿಕ್ಕಿರಿರಿದು ನಿಂತಿದ್ದರು. ಇದರ ನಡುವೆ ಆಗಾಗ ವರುಣ ರಾಯ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದನಾದರೂ, ಯಾವುದಕ್ಕೂ ಜಗ್ಗದ ಸಾರ್ವಜನಿಕರು ಜಂಬೂಸವಾರಿಯ ವೀಕ್ಷಣೆ ಮಾಡಿದರು.