- ಶಾಸಕ ಸಿಮೆಂಟ್ ಮಂಜುನಾಥ್ ಹೇಳಿಕೆ
ಸಕಲೇಶಪುರ: ಬೇರೆಲ್ಲಾ ಭಾಷೆಗಳಿಗಿಂತ ಮಾತೃಭಾಷೆಯ ಶಿಕ್ಷಣ ಅತ್ಯಂತ ಪರಿಣಾಮಕಾರಿಯಾಗಿದೆ. ನಮ್ಮ ಬದುಕನ್ನು ನಿರ್ಧರಿಸುವಲ್ಲಿ ಭಾಷೆ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಾತೃ ಭಾಷೆಯ ಶಿಕ್ಷಣವು ವಿದ್ಯಾರ್ಥಿಯ ಹೃದಯಕ್ಕೆ ಮುಟ್ಟುತ್ತದೆ ಎಂದು ಶಾಸಕ ಸಿಮೆಂಟ್ ಮಂಜುನಾಥ್ ಹೇಳಿದರು.
ಪಟ್ಟಣದ ಲಯನ್ಸ್ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ವತಿಯಿಂದ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದು ಒಂದು ಉತ್ತಮ ಕಾರ್ಯಕ್ರಮವಾಗಿದೆ. ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಹೆಚ್ಚಾಗಿ ದಾಖಲು ಮಾಡುತ್ತಿದ್ದಾರೆ. ಏಕೆಂದರೆ ಆಂಗ್ಲ ಮಾಧ್ಯಮದಲ್ಲಿ ಕಲಿತಲ್ಲಿ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದು ಸಾಧ್ಯ ಎಂಬ ಮನಸ್ಥಿತಿ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿದೆ. ಈ ಹಿಂದೆ ನಮ್ಮ ರಾಜ್ಯದಲ್ಲಿ ಆಂಗ್ಲ ಭಾಷೆಯಲ್ಲಿ ಮಾತನಾಡುವರ ಸಂಖ್ಯೆ ಕಡಿಮೆ ಇತ್ತು ಆದರೆ ಇದೀಗ ಆಂಗ್ಲ ಮಾಧ್ಯಮದಲ್ಲಿ ಮಾತನಾಡುವರು ಎಲ್ಲೆಡೆ ಕಾಣುತ್ತಾರೆ. ಹಲವು ದೇಶಗಳು ತಮ್ಮ ಮಾತೃಭಾಷೆಯನ್ನು ಮರೆತು ಇಂಗ್ಲಿಷ್ ಭಾಷೆಯನ್ನೆ ಅಧಿಕೃತ ಭಾಷೆಯನ್ನಾಗಿ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಕನ್ನಡಿಗರ ಮನಸ್ಥಿತಿ ಬದಲಾಗಿ ಕನ್ನಡವನ್ನೇ ಹೆಚ್ಚು ಬಳಸಲು ಮುಂದಾಗಬೇಕು. ನಾಡು ನುಡಿಯ ಉಳಿವಿಗೆ ಕಸಾಪ ನಿರಂತರವಾಗಿ ಶ್ರಮಿಸುತಿರುವುದು ಶ್ಲಾಘನಿಯ, ಅದರಲ್ಲೂ ತಾಲೂಕು ಕಸಾಪದಲ್ಲಿ ಸಾಹಿತ್ಯದ ಮೇಲೆ ಆಸಕ್ತಿ ಹೊಂದಿರುವರು ಪದಾಧಿಕಾರಿಗಳಾಗಿರುವುದು ಸಂತೋಷದ ವಿಷಯವಾಗಿದೆ ಎಂದರು.
ಕಸಾಪ ನಿಕಟ ಪೂರ್ವ ಅಧ್ಯಕ್ಷ ಜೈಭೀಮ್ ಮಂಜುನಾಥ್ ಮಾತನಾಡಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರತಿ ವರ್ಷ ಸನ್ಮಾನ ಮಾಡಲಾಗುತಿದ್ದೆ. ಇದರಿಂದ ಕನ್ನಡ ಭಾಷೆಯ ಮೇಲೆ ವಿಧಾರ್ಥಿಗಳಿಗೆ ಹೆಚ್ಚಿನ ಆಸಕ್ತಿ ಮೂಡಲು ಸಹಾಯಕರಿಯಾಗುತ್ತದೆ ಮಾತೃ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಜವಾಬ್ದಾರಿ ಎಂದರು.
ಕಸಾಪ ತಾಲೂಕು ಪದಾಧಿಕಾರಿಗಳಾದ ಯೋಗೇಶ್, ನಲ್ಲುಲ್ಲಿ ಸತೀಶ್, ಚನ್ನವೇಣಿ ಎಮ್ ಶೆಟ್ಟಿ, ಜೈಭೀಮ್ ಮಂಜುನಾಥ್, ಚೇತನ್, ದೊರೇಶ್, ಜಗದೀಶ್, ಗಿರೀಶ್, ಮುಂತಾದವರು ಹಾಜರಿದ್ದರು.