ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆ ಮಾಡುವ ಮಾತು ಆಡುತ್ತಿದ್ದಾರೆ. ಇದನ್ನ ತಡೆಯುವ ನಿಟ್ಟಿನಲ್ಲಿ ಅಕ್ಟೋಬರ್ 13 ರಂದು ಚಾಮುಂಡಿ ಬೆಟ್ಟ ಚಲೋ ಜಾಥಾ ನಡೆಸುತ್ತೇವೆ. ಇದರಲ್ಲಿ 5 ಸಾವಿರ ನಾಗರಿಕರು ಪಾಲ್ಗೊಳ್ಳುತ್ತಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಟಿಪ್ಪು ಹೈದರಾಲಿ ಕಾಲ ಬಿಟ್ಟರೇ 414 ವರ್ಷದಿಂದ ನಿರಂತರವಾಗಿ ಮೈಸೂರು ದಸರಾ ನಡೆದುಕೊಂಡು ಬರುತ್ತಿದೆ. ಮೈಸೂರು ಜನರಿಗೆ ದಸರಾ ಅಂದ್ರೆ ಏನು, ನವರಾತ್ರಿ ಅಂದ್ರೆ ಏನು ಅಂತ ಗೊತ್ತು. 2015-16 ರಲ್ಲಿ ಮಹಿಷ ದಸರಾ ಎನ್ನುವ ಅಸಹ್ಯ ಹುಟ್ಟುಹಾಕಿದ್ದಾರೆ. ಆಗ ಇದ್ದವರು ಉದಾಸೀನ ತೋರಿದರು. ಚಾಮುಂಡಿ ಬೆಟ್ಟಕ್ಕೆ ಹೋಗಿ ದೆವ್ವವನ್ನ ದೇವರು ಅಂತ, ದೇವರನ್ನ ದೆವ್ವ ಅಂತ ಹೇಳುವ ಕೆಲಸ ಆಯ್ತು. ನಂತರ ಮೆರವಣಿಗೆ ಮಾಡಲಾಯಿತು. ಆಗಿನ ಸಿದ್ದರಾಮಯ್ಯ ಸರ್ಕಾರ ಅದನ್ನ ನಿಲ್ಲಿಸಲಿಲ್ಲ. ಇಲ್ಲಿ ಭಕ್ತರ ಭಾವನೆಗೆ ನೋವಾಗುವ ಅಸಹ್ಯವನ್ನು ನಿಲ್ಲಿಸುವ ಮನವಿಗೆ ಸಚಿವ ಸೋಮಣ್ಣ ಸ್ಪಂದಿಸಿ ನಿಲ್ಲಿಸಲು ನಾಂದಿ ಹಾಡಿದರು. ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದಲ್ಲಿ ಇಂತಹ ಅಸಹ್ಯವನ್ನು ಮಟ್ಟ ಹಾಕುವ ಕೆಲಸ ಆಗಿದೆ. ಈಗ ಸಿದ್ದರಾಮಯ್ಯ ಸರ್ಕಾರ ಬಂದಾಗ ಅವರು ಮತ್ತೆ ಹೆಚ್ಚಿಕೊಂಡಿದ್ದಾರೆ ಎಂದು ಕಿಡಿಕಾರಿದರು.