ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗಿರುವ ಬಹುಕೋಟಿ ಹಗರಣ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡ್ತಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ತಲೆನೋವಾಗಿ ಪರಿಣಮಿಸಿರುವ ಮುಡಾ ಹಗರಣದ ತನಿಖೆ ಚುರುಕುಗೊಂಡಿದ್ದು, ಇಂದು(ಅ.18) ಮೈಸೂರಿನ ಮುಡಾ ಕಚೇರಿ ಮೇಲೆ ED ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಡಾ ಕಚೇರಿಯ ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿದೆ. RTI ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಆಧಾರದ ಮೇಲೆ ಇಡಿ ಅಧಿಕಾರಿಗಳು ಇಂದು ಮುಡಾ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.
ಸಿ ಆರ್ ಪಿ ಎಫ್ ಯೋಧರ ಭದ್ರತೆಯೊಂದಿಗೆ ಮುಡಾ ಕಚೇರಿಯಲ್ಲಿ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳ ತಂಡ, ಇನ್ನು ಹೆಚ್ಚಿನ ಭದ್ರತೆ ಹಿನ್ನೆಲೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಬಾಗಿಲು ಬಂದ್ ಮಾಡಿರುವ ಪೊಲೀಸರು ಮುಡಾ ಮುಖ್ಯ ದ್ವಾರಕ್ಕೆ ಬೀಗ ಜಡಿದಿದ್ದಾರೆ. ಮುಡಾ ಕಚೇರಿಯ ಒಳ ಭಾಗದಲ್ಲಿ ಇಡಿ ಅಧಿಕಾರಿಗಳು ಮುಡಾ ಅಧಿಕಾರಿಗಳ ಜೊತೆ ಚರ್ಚಿಸುತ್ತಿರುವ ಹಿನ್ನೆಲೆಯಲ್ಲಿ ಮುಡಾದಲ್ಲಿ ಸಾರ್ವಜನಿಕರ ಸೇವಾ ಕಾರ್ಯಗಳು ಸ್ಥಗಿತಗೊಂಡಿದೆ.
ಇನ್ನು ವಿವಿಧ ಕೆಲಸಗಳಿಗೆ ಮುಡಾ ಕಚೇರಿಗೆ ಆಗಮಿಸಿದ್ದ ಜನರಿಗೆ ತೊಂದರೆಯುಂಟಾಗಿದ್ದು, ಮುಡಾದ ಮಾಹಿತಿ ಕೇಂದ್ರವೂ ಬಂದ್ ಆಗಿರುವ ಹಿನ್ನೆಲೆ ಕಾರ್ಯ ನಿಮಿತ್ತ ದೂರದ ಊರುಗಳಿಂದ ಮುಡಾಗೆ ಆಗಮಿಸಿರುವ ಸಾರ್ವಜನಿಕರು ಪರದಾಟ ಪಟ್ಟಿದ್ದಾರೆ. ಯಾವುದೇ ಮಾಹಿತಿ ಲಭ್ಯವಾಗದೇ ಪರಿತಪಿಸುತ್ತಿರುವ ಸಾರ್ವಜನಿಕರು ಮನೆಗೆ ಹಿಂತಿರುಗಿದ್ದಾರೆ.