ಮೈಸೂರು: ಮುಡಾ ಬಹುಕೋಟಿ ಅಕ್ರಮ ಹಗರಣ ಕುರಿತಂತೆ ಇಂದಿನಿಂದ 14 ಸೈಟ್ಗಳ ಸ್ಥಳ ಮಹಜರು ಪ್ರಕ್ರಿಯೆ ಆರಂಭವಾಗಿದೆ. ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದಲ್ಲಿ ಇಂದು ವಿಜಯನಗರ ಮೂರನೇ ಹಂತದ ಸಿ ಬ್ಲಾಕ್ ನ ಸೈಟ್ ನಂಬರ್ 25ರ ಸ್ಥಳ ಮಹಜರು ನಡೆಸಿದ್ದು, ದೂರುದಾರ ಸ್ನೇಹಮಯಿಕೃಷ್ಣ ಅವರೊಂದಿಗೆ ಲೋಕಾಯುಕ್ತ ಅಧಿಕಾರಿಗಳು ಮತ್ತು ಮುಡಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು, ಮಹಜರು ನಡೆಸಿದ್ದಾರೆ.
ಸ್ನೇಹಮಹಿ ಕೃಷ್ಣ ಸ್ಥಳ ಮಹಜರಿಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿ, ಕಳ್ಳರು ಕಳ್ಳರು ಒಂದಾಗಿದ್ದಾರೆ ತಮ್ಮ ರಕ್ಷಣೆಗಾಗಿ ಒಂದು ಕೂಟವನ್ನು ರಚನೆ ಮಾಡಿಕೊಂಡಿದ್ದಾರೆ ಎಂದು ಸಿಎಂ ರಾಜೀನಾಮೆ ಕೊಡಬೇಕಿಲ್ಲ ಎಂಬ ಶಾಸಕ ಜಿ ಟಿ ದೇವೇಗೌಡ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಜಿ ಟಿ ದೇವೇಗೌಡರು 3 ತಿಂಗಳಿನಿಂದ ಏನು ಮಾಡ್ತಿದ್ರು. ದಸರಾದಂತಹ ನಾಡಹಬ್ಬದ ಕಾರ್ಯಕ್ರಮದಲ್ಲಿ ಆ ರೀತಿ ಮಾತನಾಡಿದ್ದು ತಪ್ಪು.
ಮುಡಾದಲ್ಲಿ ಜಿ ಟಿ ದೇವೇಗೌಡರ ಅಕ್ರಮವಿರಬಹುದು. ಆ ಕಾರಣಕ್ಕೆ ಎಲ್ಲರೂ ಒಂದಾಗಿದ್ದಾರೆ. ಸೇಲ್ ಡೀಡ್ ಮೂಲಕ ಮುಡಾದಲ್ಲಿ ಅಕ್ರಮ ಆಗಿದೆ ಆ ಬಗ್ಗೆಯೂ ಮಾಹಿತಿ ನೀಡಿದ್ದೇನೆ. ಹೆಚ್ ಸಿ ಮಹದೇವಪ್ಪ ಸಹೋದರನ ಮಗನಿಗೆ ಸೆಟಲ್ಮೆಂಟ್ ಡೀಡ್ ಮೂಲಕ ಕೊಡಲಾಗಿದೆ ಎಂಬ ಮಾಹಿತಿ ಇದೆ. ಮರಿಗೌಡ ಸಹೋದರ ಶಿವಣ್ಣನಿಗೂ ಸೆಟಲ್ಮೆಂಟ್ ಡೀಡ್ ಮೂಲಕ ಸೈಟು ಕೊಡಲಾಗಿದೆ. ಎಲ್ಲದರ ಬಗ್ಗೆಯೂ ಮಾಹಿತಿ ಕೊಟ್ಟಿದ್ದೇನೆ ಎಂದು ಮೈಸೂರಿನ ಲೋಕಾಯುಕ್ತ ಕಚೇರಿ ಬಳಿ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದ್ದಾರೆ.
ಇಡಿಗೆ 500 ಪುಟಗಳ ದೂರನ್ನು ನೀಡಿದ್ದೇನೆ. ಎಲ್ಲ ದಾಖಲೆಗಳು ಕನ್ನಡಲ್ಲಿ ಇದ್ದವು. ಅಧಿಕಾರಿಗಳು ಅದನ್ನೆಲ್ಲ ನೋಡಿಕೊಳ್ಳುತ್ತಾರೆ. ಅವರಿಗೆ ಬೇಕಾದ ದಾಖಲೆ ಎಲ್ಲಾ ನೀಡಿದ್ದೇನೆ. ವಿಜಯನಗರ ಸೈಟ್ ಸ್ಥಳ ಮಹಜರಿನ ತನಿಖೆ ಹೇಗೆ ಇರತ್ತೋ ಗೊತ್ತಿಲ್ಲ ಎಂದರು. ಮುಡಾದ ಪ್ರಕರಣದಲ್ಲಿ ಆರೋಪಿಗಳಿಗೆ ನೋಟಿಸ್ ಕೊಡುವ ವಿಚಾರವಾಗಿ ಮಾತನಾಡಿ, ಮುಡಾದಲ್ಲಿ ದಾಖಲೆಗಳನ್ನು ಸಂಗ್ರಹಿಸಬೇಕಿದೆ. ಹಲವು ಮೂಲ ದಾಖಲೆಗಳು ಬೇರೆ ಬೇರೆಯವರ ಬಳಿಯಿದೆ. ಅವುಗಳೆಲ್ಲವನ್ನು ಕೂಡ ಸಂಗ್ರಹಿಸಿದ ಬಳಿಕ ನೋಟಿಸ್ ಜಾರಿ ಮಾಡಬಹುದು ಎಂದರು.