ಒಲ್ಲದ ಮನಸ್ಸಿನಿಂದಲೇ ಭರದ ಸಿದ್ಧತೆ । ಎತ್ತಿನಹೊಳೆ ಕುಡಿಯುವ ನೀರಿನ ಚಾಲನೆಗೆ ಕ್ಷಣಗಣನೆ
ಪ್ರತಿನಿಧಿ ವರದಿ ಸಕಲೇಶಪುರ
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭರದ ಸಿದ್ಧತೆ ಕೈಗೊಂಡಿದೆ.
ತಾಲೂಕಿನ ಬೆಳಗೋಡು ಹೋಬಳಿ ಹೆಬ್ಬನಹಳ್ಳಿ ಗ್ರಾಮದಲ್ಲಿ ಬಾಗಿನ ಅರ್ಪಿಸುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದು, ಹೋಬಳಿ ವ್ಯಾಪ್ತಿಯ ಬಹುತೇಕ ಎಲ್ಲ ರಸ್ತೆಬದಿಯನ್ನು ಜೆಸಿಬಿಗಳ ಮೂಲಕ ಸ್ವಚ್ಛಗೊಳಿಸಲಾಗುತ್ತಿದ್ದು, ತ್ಯಾಜ್ಯದಿಂದ ಮುಚ್ಚಿದ ಚರಂಡಿಗಳನ್ನು ಶುಚಿಗೊಳಿಸಲಾಗುತ್ತಿದೆ.
ಕಾರ್ಯಕ್ರಮ ನಡೆಯುವ ಪ್ರದೇಶ ಪೈಪ್ಲೈನ್ ಮೂಲಕ ನೀರು ಹರಿದು ಕಾಲುವೆಗೆ ಸಂಪರ್ಕ ಕಲ್ಪಿಸುವ ವಲಯವಾಗಿದ್ದು, ಭತ್ತದ ಗದ್ದೆಯಂತಾಗಿದೆ. ಈಗಾಗಲೇ ಬೃಹತ್ ಗಾತ್ರದ ಶಾಮಿಯಾನ ಹಾಕಲಾಗಿದೆಯಾದರು ಕಾಲಿಡದಷ್ಟು ಕೆಸರು ತುಂಬಿಕೊಂಡಿದೆ. ಸುಮಾರು ಮೂರು ಎಕರೆ ಪ್ರದೇಶದಲ್ಲಿ ಕಾಲಿಡದಂತ ಸ್ಥಿತಿ ಇದ್ದು, ಇನ್ನೂಳಿದ 24 ಗಂಟೆಯಲ್ಲಿ ಕೆಸರು ಮುಕ್ತಗೊಳಿಸಲಾಗುವುದು ಎಂದು ಯೋಜನೆಯ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ಆದರೆ ಇದನ್ನು ನಂಬುವಂತಿಲ್ಲ. ವಾಹನ ನಿಲುಗಡೆಗೂ ವ್ಯವಸ್ಥೆ ಇಲ್ಲದ ಸ್ಥಳದಲ್ಲಿ ಏಕೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಕಾರ್ಯಕ್ರಮಕ್ಕೆ ಏಳು ಜಿಲ್ಲೆಯಿಂದ 15 ಸಾವಿರದಿಂದ 20 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎನ್ನಲಾಗುತ್ತಿದ್ದು, ಅರಸೀಕೆರೆ ತಾಲೂಕೊಂದರಿಂದಲೇ ಐದು ಸಾವಿರ ಜನರು ಬರಲಿದ್ದಾರೆಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಇಷ್ಟೊಂದು ಜನ ಸೇರುವ ಸಮಾವೇಶಕ್ಕೆ ಈ ಸ್ಥಳ ಸೂಕ್ತವಲ್ಲ ಎಂಬ ಮಾತುಗಳು ಎಲ್ಲೆಡೆಯಿಂದ ಕೇಳಿ ಬರುತ್ತಿದೆ.
ಉಪಮುಖ್ಯಮಂತ್ರಿ ಹಠ ಅಧಿಕಾರಿಗಳಿಗೆ ಪಿಕಲಾಟ:
ಸಾವಿರಾರು ಜನರು ಸೇರುವ ಕಾರ್ಯಕ್ರಮವನ್ನು ಇಲ್ಲಿ ನಡೆಸುವುದು ಸೂಕ್ತವಲ್ಲ ಎಂಬ ಹಿರಿಯ ಅಧಿಕಾರಿಗಳ ಮಾತುಗಳನ್ನು ಲೆಕ್ಕಿಸದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಪೈಪ್ಲೈನ್ನಿಂದ ಕಾಲುವೆಗೆ ಸೇರುವ ಸ್ಥಳದಲ್ಲೇ ಉದ್ಘಾಟನಾ ಕಾರ್ಯಕ್ರಮ ನಡೆಯಬೇಕು ಎಂಬ ಹಠದಿಂದಾಗಿ ಸಮಾವೇಶ ನಡೆಸಲು ಸೂಕ್ತವಲ್ಲದ ಸ್ಥಳದಲ್ಲಿ ಒಲ್ಲದ ಮನಸ್ಸಿನಿಂದ ಕಾರ್ಯಕ್ರಮಕ್ಕೆ ಸಿದ್ದತೆ ನಡೆಸಲಾಗುತ್ತಿದೆ. ಸಾಮಾನ್ಯ ಪ್ರದೇಶದಲ್ಲಿ ನಡೆಸುವ ಕಾರ್ಯಕ್ರಮಕ್ಕಿಂತ ಇಲ್ಲಿ ನಾಲ್ಕುಪಟ್ಟು ಅಧಿಕ ಖರ್ಚು ತಗುಲುತ್ತಿದೆ ಎಂಬುದು ಕಾರ್ಯಕ್ರಮದ ಉಸ್ತುವರಿ ಹೊಣೆಹೊತ್ತಿರುವ ಅಧಿಕಾರಿಯೊಬ್ಬರ ಮಾತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜಕೀಯ:
ಶುಕ್ರವಾರ ಲೋಕಾರ್ಪಣೆಗೊಳ್ಳುತ್ತಿರುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಜಿಲ್ಲಾ ಜೆಡಿಎಸ್ ನಾಯಕರನ್ನು ಉಪೇಕ್ಷಿಸಿರುವುದು ಸ್ವಷ್ಟವಾಗಿ ಗೋಚರಿಸುತ್ತಿದ್ದು, ಜಿಲ್ಲಾ ಜೆಡಿಎಸ್ ಜನಪ್ರತಿನಿಧಿಗಳಾದ ಎ.ಮಂಜು, ಎಚ್.ಡಿ.ರೇವಣ್ಣ, ಸೂರಜ್ ರೇವಣ್ಣ,ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ ಹಾಗೂ 2014ರಲ್ಲಿ ಯೋಜನೆಗೆ ಶಂಕು ಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಕಲೇಶಪುರದ ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರನ್ನು ಕರೆಯೊಲೇಯಿಂದ ಹೊರಗಿಟ್ಟಿದ್ದಾರೆ. ಶಿಷ್ಟಚಾರದ ಪ್ರಕಾರ ಆಹ್ವಾನ ಪತ್ರಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷರ ಭಾವಚಿತ್ರದೊಂದಿಗೆ ಹೆಸರಿರಬೇಕು. ಆದರೆ, ಹೆಸರು ಹಾಕಿ ಪೋಟೋ ಕೈಬಿಟ್ಟಿರುವುದು ಅಧ್ಯಕ್ಷತೆ ವಹಿಸ ಬೇಕಿರುವ ಶಾಸಕ ಸಿಮೆಂಟ್ ಮಂಜು ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಒಟ್ಟಾರೆ ಕಾರ್ಯಕ್ರಮ ರಾಜಕೀಯ ಪ್ರೇರಿತಗೊಂಡಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದರೆ ಕಾರ್ಯಕ್ರಮ ಅಧ್ವಾನವಾಗದಿದ್ದರೆ ಸಾಕು ಎಂಬ ಮನಸ್ಥಿತಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗಿದೆ.
ಭದ್ರತೆ ಪರಿಶೀಲನೆ: ಕಾರ್ಯಕ್ರಮದ ಭದ್ರತೆಯನ್ನು ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕ ಹಿತೇಂದ್ರ ಹಾಗೂ ಮೈಸೂರು ವಲಯದ ಪೋಲಿಸ್ ಉಪಮಹಾನಿರ್ದೇಶಕ ಬೋರಲಿಂಗಯ್ಯ ನೇತೃತ್ವದ ತಂಡ ಪರಿಶೀಲಿಸಿದ್ದು, ಹಿರಿಯ ಪೋಲಿಸ್ ಅಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತ ಹೆಬ್ಬನಹಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿದೆ.
ಅನುದಾನದಲ್ಲಿ ಅನ್ಯಾಯ:
ಬರಪೀಡಿತ ಜಿಲ್ಲೆಗಳಿಗೆ ನೀರುಣಿಸುವ ಮಹತ್ವಕಾಂಕ್ಷಿ ಯೋಜನೆಗೆ ತಾಲೂಕಿನಿಂದ ನೀರು ಹರಿಸಲಾಗುತ್ತಿದ್ದು, 8 ಸಾವಿರ ಕೋಟಿ ರೂ.ಗಳಿಂದ ಆರಂಭವಾಗಿ 23 ಸಾವಿರ ಕೋಟಿ ರೂ. ತಲುಪಿದ್ದರೂ ತಾಲೂಕಿನ ಮೂಲಸೌಕರ್ಯ ಅಭಿವೃದ್ದಿಗೆ ಕವಡೆ ಕಾಸು ನೀಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಯೋಜನೆ ಮುಕ್ತಾಯಗೊಳ್ಳುವವರೆಗೆ ತಾಲೂಕಿನ ಮೂಲಸೌಕರ್ಯ ಅಭಿವೃದ್ಧಿಗೆ ಪ್ರತಿವರ್ಷ 100 ಕೋಟಿ ರೂ. ನೀಡುವುದಾಗಿ ಉದ್ಘಾಟನೆ ವೇಳೆ ಸರ್ಕಾರ ನೀಡಿದ್ದ ಭರವಸೆ ಹುಸಿಯಾಗಿದ್ದು, 10 ವರ್ಷಗಳಲ್ಲಿ 330 ಕೋಟಿ ರೂ. ಅನುದಾನ ನೀಡಲಾಗಿದೆ. ಕನಿಷ್ಠ 500 ಕೋಟಿ ರೂ. ಅನುದಾನ ಅವಶ್ಯಕತೆ ಇದೆ ಎಂಬುದು ಸ್ಥಳೀಯ ಶಾಸಕರ ಆಗ್ರಹವಾಗಿದೆ.
4 ಎಸ್ಕೆಪಿಪಿ 1 ಸಕಲೇಶಪುರದಲ್ಲಿ ಶುಕ್ರವಾರ ನಡೆಯಲಿರುವ ವೇದಿಕೆ ಕಾರ್ಯಕ್ರಮದ ಸ್ಥಳವನ್ನು ಹಿರಿಯ ಪೋಲಿಸ್ ಅಧಿಕಾರಿಗಳು ಪರಿಶೀಲನೆ ನಡೆಸಿದರು.