ಪ್ರತಿನಿಧಿ ವರದಿ ಕೊಳ್ಳೇಗಾಲ
ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಮತದಾನವಾಗಿರುವ ಪಟ್ಟಣದ ವಿವಿದ ಮತಗಟ್ಟೆ ಪ್ರದೇಶದಲ್ಲಿ ಪ್ರಸ್ತುತ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚಿನ ಮತದಾನಕ್ಕೆ ಪ್ರೋತ್ಸಾಹಿಸುವ ಹಿನ್ನೆಲೆ ಗುರುವಾರ ನಗರಸಭಾ ಆಡಳಿತ ಹಾಗೂ ಸ್ವೀಪ್ ಸಮಿತಿ ಪಟ್ಟಣದ ನಾಲ್ಕು ಕಡೆಗಳಲ್ಲಿ ಬೀದಿ ನಾಟಕ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಿತು.
ಪಟ್ಟಣದ ನೂರ್ ಮೊಹಲ್ಲಾ, ಮಂಜುನಾಥನಗರ, ದೇವಾಂಗಪೇಟೆ ಹಾಗೂ ನಗರಸಭಾ ಕಚೇರಿ ಪ್ರದೇಶದಲ್ಲಿ ನಗರಸಭಾ ಪೌರಾಯುಕ್ತ ಎ.ರಮೇಶ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಪ್ರಭಾರ ಯೋಜನಾ ನಿರ್ದೇಶಕ ರಾಮಚಂದ್ರ ಅವರ ಸಮ್ಮುಖದಲ್ಲಿ ಸಮುದಾಯ ಸಂಘಟನಾಧಿಕಾರಿ ಪರಶಿವಯ್ಯ ಅವರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಕಡ್ಡಾಯ ಮತದಾನ ಕುರಿತು ನಿವಾಸಿಗಳಲ್ಲಿ ಜಾಗೃತಿ ಮೂಡಿಸಲಾಯಿತು.
ಈ ನಡುವೆ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಸೇರುವ ನೂರ್ ಮೊಹಲ್ಲಾ ಬಡಾವಣೆ, ಮಂಜುನಾಥನಗರ, ದೇವಾಂಗಪೇಟೆಯ ಸಿಲ್ಕ್ ಎಕ್ಸ್ ಚೇಂಜ್ ಹಾಗೂ ನಗರಸಭೆ ಕಚೇರಿ ಎದುರಿನಲ್ಲಿ ಮೈಸೂರಿನ ಮಡಿಲು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಲಾ ತಂಡದಿAದ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯ ಮತದಾನಕ್ಕಾಗಿ ಏರ್ಪಡಿಸಿದ್ದ ಬೀದಿನಾಟಕ ಎಲ್ಲರ ಗಮನ ಸೆಳೆಯಿತು.
ಇದೇ ವೇಳೆ ಬೀದಿ ನಾಟಕ ವೀಕ್ಷಿಸಿದ ನಗರಸಭಾ ಪೌರಾಯುಕ್ತ ಎ.ರಮೇಶ್ ಮಾತನಾಡಿ, ಕೊಳ್ಳೇಗಾಲ ನಗರಸಭಾ ವ್ಯಾಪ್ತಿಯ 18 ಬೂತ್ ಗಳಲ್ಲಿ ಹಿಂದೆ ನಡೆದ ಚುನಾವಣೆಗಳಲ್ಲಿ ಶೇ.46 ರಿಂದ ಶೇ.67 ರಷ್ಟು ಕಡಿಮೆ ಮತದಾನವಾಗುತ್ತಿದೆ. ಇದರಿಂದ ಭವಿಷ್ಯದ ಪ್ರಜಾಪ್ರಭುತ್ವದ ಚುನಾವಣೆ ಪ್ರಕ್ರಿಯೆಗೆ ಮಾರಕವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಚಲಾಯಿಸಬೇಕು.
ಚುನಾವಣೆ ಪರ್ವ ದೇಶದ ಗರ್ವ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿರುವ ಮತದಾನ ಜಾಗೃತಿ ಕಾರ್ಯಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸುವುದಕ್ಕಾಗಿದೆ. ದೇಶದ ಉಜ್ವಲ ಭವಿಷ್ಯಕ್ಕಾಗಿ 18 ವರ್ಷ ತುಂಬಿದ ಯುವ ಸಮುದಾಯ ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚು ತೊಡಗಬೇಕು. ಹಿರಿಯ ನಾಗರೀಕರು, ವಿಕಲಚೇತನರು, ಲಿಂಗತ್ವ ಅಲ್ಪಸಂಖ್ಯಾತರೆಲ್ಲರೂ ತಪ್ಪದೇ ತಮ್ಮ ಮತಗಟ್ಟೆಗೆ ಏ.26 ರಂದು ತೆರಳಿ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರಲ್ಲದೇ, ಈ ಮೂಲಕ ಜಿಲ್ಲಾಡಳಿತ ಈಗಾಗಲೇ ಎಲ್ಲರಲ್ಲಿ ಮತದಾನದ ಕುರಿತು ಸ್ವೀಪ್ ಸಮಿತಿಯೊಂದಿಗೆ ಉತ್ತೇಜನ ನೀಡುತ್ತಿರುವ ಎಲ್ಲಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಕೊಳ್ಳೇಗಾಲ ಪಟ್ಟಣದಲ್ಲಿ ಗುರುವಾರ ನಗರಸಭಾ ಆಡಳಿತ ಹಾಗೂ ಸ್ವೀಪ್ ಸಮಿತಿ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚಿನ ಮತದಾನಕ್ಕೆ ಪ್ರೋತ್ಸಾಹಿಸಲು ಬೀದಿ ನಾಟಕ ನಡೆಸಿತು.