ಚಿಕ್ಕಮಗಳೂರು ಜ.07: ಏಳು ವರ್ಷಗಳ ಬಳಿಕ ದತ್ತಪೀಠ ಹೋರಾಟಗಾರರಿಗೆ ಸಮನ್ಸ್ ಜಾರಿ ಬೆನ್ನಲೇ, ಪೆಟ್ರೋಲ್ ಬಾಂಬ್ ಕೇಸ್ ಮಾಹಿತಿ ನೀಡುವಂತೆ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ರಾಜ್ಯ ಸರ್ಕಾರಕ್ಕೆ ಚಾಲೆಂಜ್ ಮಾಡಿದ್ದಾರೆ. ಹಾಗೂ ದತ್ತಪೀಠ ಹೋರಾಟಗಾರರು ಸೇರಿದಂತೆ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಮುಸ್ಲಿಂ ಭಯೋತ್ಪಾದಕರ ರಕ್ಷಣೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸಿಕ್ಕ ಪೆಟ್ರೋಲ್ ಬಾಂಬ್ ಕೇಸ್ ಏನಾಯ್ತು? ಸಿಕ್ಕ ಆರೋಪಿಗಳನ್ನ ಒಂದೇ ದಿನದಲ್ಲಿ ಬಿಟ್ಟಿದ್ದು ಯಾಕೆ? ಆ ಕೇಸ್ ಮತ್ತೆ ರೀ ಓಪನ್ ಆಗಿಲ್ಲ ಯಾಕೆ? ಈ ಕೇಸ್ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಬೇಕು ಎಂದು ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರಕ್ಕೆ ಚಾಲೆಂಜ್ ಮಾಡಿದ್ದಾರೆ. ಜೊತೆಗೆ ಪೆಟ್ರೋಲ್ ಬಾಂಬ್ ಕೇಸಿನ ಆರೋಪಿಗಳನ್ನು ಸರ್ಕಾರ ರಕ್ಷಣೆ ಮಾಡಿರುವ ಆರೋಪ ಮಾಡಿದ್ದಾರೆ.
ಏನಿದು ಪೆಟ್ರೋಲ್ ಬಾಂಬ್ ಪ್ರಕರಣ?
2017ರ ಡಿಸೆಂಬರ್ 3ರ ರಾತ್ರಿ ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಪತ್ತೆಯಾಗಿತ್ತು. ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಗೋರಿಗಳ ಧ್ವಂಸದ ಬಳಿಕ ಚಿಕ್ಕಮಗಳೂರು ಉದ್ವಿಗ್ನವಾಗಿತ್ತು. ಪೆಟ್ರೋಲ್ ಬಾಂಬ್ ದಾಳಿಗೆ ಸಂಚು ರೂಪಿಸಿದ್ದ ಯುವಕರ ಬಂಧನವಾಯಿತು. ಪೆಟ್ರೋಲ್ ಬಾಂಬ್ ನೊಂದಿಗೆ ಮಾರ್ಕೆಟ್ ರಸ್ತೆಯಲ್ಲಿ ತಿರುಗುತ್ತಿದ್ದ ಯುವಕರನ್ನು ಚಿಕ್ಕಮಗಳೂರು ನಗರ ಪೋಲಿಸರು ಬಂಧಿಸಿದ್ದರು. ಡಿಸೆಂಬರ್ 4 ರಂದು ಅಂದಿನ ಎಸ್ಪಿ ಅಣ್ಣಾಮಲೈ ಪತ್ರಿಕಾಗೋಷ್ಠಿ ನಡೆಸಿ ಪೆಟ್ರೋಲ್ ಬಾಂಬ್ ಆರೋಪಿಗಳ ಬಂಧಿಸಿರುವುದಾಗಿ ಮಾಹಿತಿ ನೀಡಿದ್ದರು. ಇನ್ನು ಈ ಪ್ರಕರಣದ ಕೇಸ್ ಫೈಲ್ ಮಾಡದಂತೆ ಎಸ್ಪಿಯಾಗಿದ್ದ ಅಣ್ಣಾಮಲೈಗೆ ಕಾಂಗ್ರೆಸ್ ಸರ್ಕಾರ ಒತ್ತಡ ಹಾಕಿತ್ತು ಎಂಬ ಆರೋಪಗಳಿವೆ. ದತ್ತಪೀಠ ಹೋರಾಟಗಾರರಿಗೆ ಸಮನ್ಸ್ ಜಾರಿ ಬೆನ್ನಲೇ ಪೆಟ್ರೋಲ್ ಬಾಂಬ್ ಕೇಸ್ ಬಗ್ಗೆ ಚರ್ಚೆ ಶುರುವಾಗಿದೆ.