ಪ್ರತಿನಿಧಿ ವರದಿ ಮೈಸೂರು
ಯದುವೀರ್ ಅವರನ್ನು ಗೆಲ್ಲಿಸುವುದು ನನ್ನ ಮುಂದಿನ ಗುರಿಯಾಗಿದ್ದು, ನಾನು ಪಕ್ಷದಲ್ಲಿ ಸಿಗುವ ಸ್ಥಾನಮಾನದ ಬಗ್ಗೆ ತಲೆ ಕಡೆಸಿಕೊಂಡಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಚುನಾವಣೆಗೆ ನಿಂತಿದ್ದರೆ 2-3 ಲಕ್ಷ ಮತಗಳಿಂದ ಗೆಲ್ಲುತ್ತಿದ್ದೆ. ಯದುವೀರ್ ಅವರಿಗೆ ಟಿಕೆಟ್ ಕೊಟ್ಟರು ಎಂಬ ಖುಷಿಗಿಂತ ಪ್ರತಾಪ ಸಿಂಹಾಗೆ ಟಿಕೆಟ್ ತಪ್ಪಿದ್ದರ ಬಗ್ಗೆ ಸಂಕಟ ಜಾಸ್ತಿಯಾಗಿದೆ. ಹೀಗಾಗಿ ಜನರ ಬಳಿ ನಾನೇ ಹೋಗಿ ದೇಶಕ್ಕೆ ಮೋದಿ ಬೇಕು, ಯದುವೀರ್ ಪರವಾಗಿ ಕೆಲಸ ಮಾಡಿ ಎಂದು ಪ್ರಚಾರ ಮಾಡುತ್ತಿದ್ದೇನೆ. ಅಭಿವೃದ್ಧಿಗೆ ಮೇಲ್ಪಂಕ್ತಿಯನ್ನು ನಾನು ಹಾಕಿಕೊಟ್ಟಿದ್ದೇನೆ. ನನಗೆ ಟಿಕೆಟ್ ತಪ್ಪಿದ್ದಕ್ಕೆ ಜನರಿಗೆ ಬೇಸರವಾಗಿದೆ. ಈ ಕಾರಣಕ್ಕಾಗಿ ನಮ್ಮ ಅಭ್ಯರ್ಥಿಗೆ ತೊಂದರೆಯಾಗಬಾರದು ಎಂದು ನಾನೇ ಖುದ್ದು ಅಭ್ಯರ್ಥಿಯ ಜತೆ ಪ್ರಚಾರಕ್ಕೆ ಹೋಗುತ್ತಿದ್ದೇನೆ. ನನಗೆ ಜನರು ಕೊಟ್ಟಿರುವ ಸ್ಥಾನಮಾನದ ಮುಂದೆ ಬೇರೆ ಯಾವುದೂ ಮುಖ್ಯವಲ್ಲ ಎಂದರು.
ಸಿಎಂ ಹೇಳಿಕೆಗೆ ಸಮರ್ಥನೆ:
ಸ್ವಾತಂತ್ರ್ಯ ಬಂದ ನಂತರ ಸಂವಿಧಾನ ಜಾರಿಯಾದ ದಿನದಿಂದ ರಾಜ, ಮಹಾರಾಜ ಎಂಬುದಿಲ್ಲ.
ಯದುವೀರ್ ಅವರು ಬಿಜೆಪಿ ಅಭ್ಯರ್ಥಿ, ನಾನು ಕೂಡ ಹೇಳಿಕೆ ಕೊಡುವಾಗ ಅವರು ಪ್ರಜಾ ಪ್ರತಿನಿಧಿಯಾಗಿರಬೇಕು ಎಂದಿದ್ದೆ. ಯದುವೀರ್ ಕೂಡ ಪ್ರಜಾ ಪ್ರತಿನಿಧಿಯಾಗಲು ಬಂದಿದ್ದು, ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ದೇಶದಲ್ಲಿ ರಾಜಾಡಳಿತ ಇಲ್ಲ. ನವರಾತ್ರಿ ಸಂದರ್ಭದಲ್ಲಿ ಖಾಸಗಿ ದರ್ಬಾರ್ ನಡೆಸುವಾಗ ವಿಧಿವಿಧಾನಗಳಿಗೆ ಸೀಮಿತವಾಗಿರುತ್ತಾರೆ. ಸಿದ್ದರಾಮಯ್ಯ ಅವರನ್ನು ನಾನು ಸೈದ್ಧಾಂತಿಕವಾಗಿ ವಿರೋಧಿಸುತ್ತೇನೆ. ನನಗೂ ಅವರಿಗೂ ಬಹಳಷ್ಟು ವಿರೋಧಗಳಿವೆ. ಮೈಸೂರಿನ ಜನ ಯದುವೀರ್ ಅವರನ್ನು ಮಹಾರಾಜ ಎಂದು ಕರೆಯುತ್ತಾರಾ? ಅಥವಾ ಬಿಜೆಪಿ ಅಭ್ಯರ್ಥಿ ಎನ್ನುತ್ತಾರಾ? ರಾಜರು ಅರಮನೆಗೆ ಸೀಮಿತವಾಗಿರದೆ ಜನಪ್ರತಿನಿಧಿಯಾಗಲು ಬಂದಿದ್ದಾರೆ. ಹೀಗಾಗಿ ಸಿಎಂ ಬಿಜೆಪಿ ಅಭ್ಯರ್ಥಿ ಎಂದು ಕರೆದಿರುವುದರಲ್ಲಿ ತಪ್ಪಿಲ್ಲ ಎನ್ನುವ ಮೂಲಕ ಯಾವ ರಾಜ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಪ್ರತಾಪ್ ಸಿಂಹ ಸಮರ್ಥಿಸಿಕೊಂಡರು.
===================
ಬಾಕ್ಸ್
ಲಕ್ಷ್ಮಣ್ ವಿರುದ್ಧ ವ್ಯಂಗ್ಯ
ಕಾಂಗ್ರೆಸ್ನಲ್ಲಿ ಈಗ ಕೇಳಿ ಬರುತ್ತಿರುವ ಹೆಸರು ಫೈನಲ್ ಆದರೆ ಪ್ರಚಾರಕ್ಕೆ ಹೋಗುವುದೇ ಬೇಡ.
ಯದುವೀರ್ ಒಳ್ಳೆಯ ಅಂತರದಿಂದ ಗೆಲ್ಲುತ್ತಾರೆ ಎನ್ನುವ ಮೂಲಕ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂ.ಲಕ್ಷ್ಣಣ್ ವಿರುದ್ಧ ಸಂಸದ ಪ್ರತಾಪ ಸಿಂಹ ವ್ಯಂಗ್ಯವಾಡಿದರು.
================