– ಸರ್ ಎಂ.ವಿಶ್ವೇಶ್ವರಯ್ಯ ಅವರ 163ನೇ ಜಯಂತಿ
– ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅಭಿಮತ
ಪ್ರತಿನಿಧಿ ವರದಿ ಮೈಸೂರು
ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರು ಮಾಡಿರುವ ಶಾಶ್ವತ ಯೋಜನೆಗಳ ಮೂಲಕ ಮೈಸೂರು ಬ್ರಾಂಡ್ ಜನಪ್ರಿಯವಾಯಿತು ಎಂದು ಶಾಸಕ ಟಿ.ಎಸ್. ಶ್ರೀವತ್ಸ ಅಭಿಪ್ರಾಯಪಟ್ಟರು.
ಜೀವದಾರ ರಕ್ತನಿಧಿ ಕೇಂದ್ರ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅಭಿಮಾನಿ ಬಳಗದಿಂದ ಭಾರತ ರತ್ನ ದಿವಾನ್ ಸರ್ ಎಂ.ವಿಶ್ವೇಶ್ವರಯ್ಯ ಅವರ 163ನೇ ಜಯಂತಿಯ ಅಂಗವಾಗಿ ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ವೃತ್ತದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ಮಾತನಾಡಿದರು.
ಮೈಸೂರು ಸಂಸ್ಥಾನದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರು ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಶತಮಾನದ ಹಿಂದೆಯೇ ಶಾಶ್ವತ ಯೋಜನೆಗಳನ್ನು ರೂಪಿಸಿದವರು. ಇಂದು ದೇಶ, ವಿದೇಶಗಳಲ್ಲಿ ಇಂದು ಮೈಸೂರು ಬ್ರಾಂಡ್ ಜನಪ್ರಿಯವಾಗಲು ಸ್ಥಳೀಯ ಮಾರುಕಟ್ಟೆಯ ಮೂಲಕ ಗ್ರಾಮೀಣ ರೈತರುಗಳು, ವ್ಯಾಪಾರಸ್ಥರು, ಉದ್ಯಮಿಗಳನ್ನು ಒಗ್ಗೂಡಿಸಿ ಮೈಸೂರಿನ ವಿಶೇಷತೆಗಳನ್ನು ಪ್ರೋತ್ಸಾಹಿಸಿದರು. ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನಚರಿತ್ರೆ ಕುರಿತಂತೆ ಇಂದಿನ ಯುವಪೀಳಿಗೆ ಅರಿತುಕೊಂಡು ಅವರುಗಳ ಹಾದಿಯಲ್ಲೇ ಸಾಗಬೇಕು ಎಂದು ಹೇಳಿದರು.
ಅಂಣಕಾರ ನಂ. ಶ್ರೀಕಂಠಕುಮಾರ್ ಮಾತನಾಡಿ, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರು ಮೈಸೂರು ವಿಶ್ವವಿದ್ಯಾನಿಲಯ, ಕೆಆರ್ಎಸ್, ಮೈಸೂರು ಸ್ಯಾಂಡಲ್, ಕನ್ನಡ ಸಾಹಿತ್ಯ ಪರಿಷತ್, ಭದ್ರಾವತಿ ಉಕ್ಕಿನ ಕಾರ್ಖಾನೆ ಸೇರಿದಂತೆ ಹಲವು ಯೋಜನೆಗಳು ಕಾರ್ಯರೂಪಕ್ಕೆ ಬರಲು ಪ್ರಮುಖ ಕಾರಣರಾದರು. ಸರ್ ಎಂವಿ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ್, ನಗರ ಪಾಲಿಕೆ ಮಾಜಿ ಸದಸ್ಯ ಮ.ವಿ. ರಾಮ್ ಪ್ರಸಾದ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅರ್ಚಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ನಿರೂಪಕ ಅಜಯ್ ಶಾಸ್ತ್ರಿ, ವಿಜಯ್ ಕುಮಾರ್, ಕೇಬಲ್ ವಿಜಿ, ಪ್ರದೀಪ್ ಕುಮಾರ್, ಸೂರಜ್, ಸದಾಶಿವ್, ಗಣೇಶ್, ವಿಘ್ನೇಶ್ವರ ಭಟ್, ಬ್ರಹ್ಮಚಾರ್, ಶ್ರೀನಿವಾಸ್, ಮಿರ್ಲೆ ಪಣೀಶ್, ರಾಘವೇಂದ್ರ ಇತರರಿದ್ದರು.