ಪ್ರತಿನಿಧಿ ವರದಿ ಬೇಲೂರು
ಭಾವೈಕ್ಯತೆ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಮಹನೀಯರಲ್ಲಿ ನಾ.ಸು.ಹರ್ಡೀಕರ್ ಅವರು ಪ್ರಮುಖರು ಎಂದು ಪುರಸಭಾ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ ಅಭಿಪ್ರಾಯಪಟ್ಟರು.
ಭಾರತ್ ಸೇವಾದಳ ಸಂಸ್ಥಾಪಕ ಅಧ್ಯಕ್ಷ ನಾ.ಸು.ಹರ್ಡಿಕರ್ ಜನ್ಮ ದಿನದ ಅಂಗವಾಗಿ ಪಟ್ಟಣದ ಹೃದಯ ಭಾಗದಲ್ಲಿರುವ ಹರ್ಡಿಕರ್ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಯುವಕರನ್ನು ಶಿಸ್ತುಬದ್ಧ ಸಂಘಟನೆ ಮೂಲಕ ಸಜ್ಜುಗೊಳಿಸಲು ನಾ.ಸು.ಹರ್ಡೀಕರ್ ಹಿಂದೂಸ್ತಾನ್ ಸೇವಾದಳವನ್ನು ಮಹಾತ್ಮ ಗಾಂಧಿಜಿಯವರ ತತ್ವಗಳಡಿ ಸ್ಥಾಪಿಸಿದರು. ಆನಂತರ ಬೇಲೂರು ಮಹಾಸಮಾವೇಶದಲ್ಲಿ ಹರ್ಡೀಕರ್ ಹಿಂದೂಸ್ತಾನ್ ಸೇವಾದಳವನ್ನು ಭಾರತ ಸೇವಾದಳವನ್ನಾಗಿ, ರಾಜಕೀಯ ಪಕ್ಷಾತೀತವಾಗಿ ರೂಪಿಸಿ, ಮಕ್ಕಳಲ್ಲಿ ಶಿಸ್ತು, ಸಂಯಮ, ದೇಶಭಕ್ತಿ, ಸೇವಾಮನೋಭಾವನೆ ಮೂಡಿಸಲು ರೂಪಿಸಿದರು. ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿದಾಗ ಮಾತ್ರವೇ ದೇಶದ ಐಕ್ಯತೆ ಕಾಪಾಡಲು ಸಾಧ್ಯ. ಆದ್ದರಿಂದ ಪ್ರತಿಯೊಂದು ಶಾಲೆಯಲ್ಲಿಯೂ ಸೇವಾದಳ ಘಟಕವನ್ನು ಸ್ಥಾಪಿಸಿ, ಮಕ್ಕಳಲ್ಲಿ ದೇಶಪ್ರೇಮ ತುಂಬಿಸಬೇಕೆಂದರು ಎಂದು ಕರೆ ನೀಡಿದರು.
ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ತಾಲೂಕು ಭಾರತ್ ಸೇವಾದಳದ ಪದಾಧಿಕಾರಿಗಳಾದ ಶಿಕ್ಷಕ ಕೇಶವೇಗೌಡ ಮಾತನಾಡಿದರು.
ತಾಲೂಕು ಭಾರತ್ ಸೇವಾ ಸಮಿತಿ ಉಪಾಧ್ಯಕ್ಷ ಸಿ.ಎಂ.ನಿಂಗರಾಜ್, ಕಾರ್ಯದರ್ಶಿ ಯುವರಾಜ್, ಭಾರತ್ ಸೇವಾದಳ ಹಾಸನ ಜಿಲ್ಲಾ ಸಂಚಾಲಕಿ ರಾಣಿ, ಗೋಪಿನಾಥ್, ಮಂಜುನಾಥ ಇತರರಿದ್ದರು.
ಬೇಲೂರು ಪಟ್ಟಣದ ಹೃದಯ ಭಾಗ ಹರ್ಡಿಕರ್ ವೃತ್ತದಲ್ಲಿ ಭಾರತ್ ಸೇವಾದಲ ಸಂಸ್ಥಾಪಕ ಅಧ್ಯಕ್ಷ ನಾ.ಸು.ಹರ್ಡಿಕರ್ ಜನ್ಮ ದಿನಾಚರಣೆ ನಡೆಸಲಾಯಿತು.