ನಾನು ಮುಡಾದಿಂದ ಅಕ್ರಮವಾಗಿ ಯಾವುದೇ ನಿವೇಶನ ಪಡೆದಿಲ್ಲವೆಂದು ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದೀಶ್ ಹಂಚೆ ಇಂದು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯುದ್ದೇಶಿಸಿ ಮಾತನಾಡಿದ ನಂದೀಶ್ ಹಂಚೆ ನಾನು ಬಸವಲಿಂಗಪ್ಪ ಎಂಬುವರಿಂದ 50×80 ಅಳತೆ ನಿವೇಶನವನ್ನು 87 ಲಕ್ಷ ಕೊಟ್ಟು ಖರೀದಿಸಿದ್ದೇನೆ.
ಆ ನಿವೇಶನದ ಜಾಗ ಸೇರಿದಂತೆ 16 ಎಕರೆ ಜಮೀನಿನ ವಿಚಾರಕ್ಕೆ ಸಂಬಂಧ ನಳಿನಿ ಅರಸ್, ಚಂದ್ರಾಜೆ ಅರಸ್ ಎಂಬುವರು ಹೈಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ಹಾಗಾಗಿ ಮುಡಾದವರು ನನಗೆ ಬದಲಿ ನಿವೇಶನ ನೀಡಿದ್ದಾರೆ. ಬದಲಿ ನಿವೇಶನ ನೀಡುವಂತೆ ನಾನು ಅರ್ಜಿಯನ್ನು ಸಲ್ಲಿಸಿರಲಿಲ್ಲ. ಆದರೆ ಮುಡಾದವರೇ ಬದಲಿ ನಿವೇಶನ ನೀಡಿದ್ದಾರೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ.
ಆದರೆ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಶಿವರಾಮು ನನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದಾರೆ. ಶಿವರಾಮು ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇನೆ. ಅವರು ಕ್ಷಮೆ ಕೇಳಿದರೂ ಬಿಡುವುದಿಲ್ಲ, ಹೋರಾಟ ಮಾಡುತ್ತೇನೆಂದು ಸುದ್ದಿಗೋಷ್ಠಿಯಲ್ಲಿ ನಂದೀಶ್ ಹಂಚೆ ಹೇಳಿಕೆ ನೀಡಿದ್ದಾರೆ.