ಪ್ರತಿನಿಧಿ ವರದಿ ನಾಪೋಕ್ಲು
ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರ್ರ ಜನ್ಮದಿನಾಚರಣೆಯನ್ನು ನಾಪೋಕ್ಲು ವಿಭಾಗದ ವಿವಿಧ ಮಸೀದಿಗಳಲ್ಲಿ ಮುಸಲ್ಮಾನ ಬಾಂಧವರು ಸಂಭ್ರಮದಿಂದ ಆಚರಿಸಿದರು.
ಮಸೀದಿ ಸೇರಿದಂತೆ ವಿಭಾಗದ ವಿವಿಧ ಮಸೀದಿಗಳಲ್ಲಿ ಬೆಳಗ್ಗೆ ಫಜರ್ ನಮಾಜಿನ ಬಳಿಕ ಪ್ರವಾದಿಯವರ ಹೆಸರಿನಲ್ಲಿ ಮೌಲೂದ್ ಪಾರಾಯಣ, ನಾಡಿನ ಸುಭೀಕ್ಷಕ್ಕಾಗಿ ವಿಶೇಷ ಪ್ರಾರ್ಥನೆ ನಡೆಯಿತು.
ಹಳೆ ತಾಲೂಕು, ಚೆರಿಯಪರಂಬು, ಕೊಳಕೇರಿ, ಕುಂಜಿಲ,ಕಲ್ಲುಮೊಟ್ಟೆ, ಕೊಟ್ಟಮುಡಿ, ಎಮ್ಮೆಮಾಡು, ಪಡಿಯಾಣಿ ಸೇರಿದಂತೆ ವಿಭಾಗದ ವಿವಿಧ ಮಸೀದಿ ಮದರಸಗಳ ಆಶ್ರಯದಲ್ಲಿ ವಿಶ್ವ ಪ್ರವಾದಿಯವರ ಸೌಹಾರ್ಧತೆಯ ಸಂದೇಶದ ಘೋಷಣೆಗಳನ್ನು ಸಾರುವ ಜಾಥಾ ನಡೆಯಿತು. ಜಾಥಾದಲ್ಲಿ ವಿದ್ಯಾರ್ಥಿಗಳ, ಯುವಕರ ಹಾಗೂ ಹಿರಿಯರ ದಫ್ ಪ್ರದರ್ಶನ ನಡೆಯಿತು.
ಮದರಸ ಹಾಗೂ ದರ್ಸ್ ವಿದ್ಯಾರ್ಥಿಗಳ ಗಾಯನ ಸ್ಪರ್ಧೆ, ಪ್ರಭಾಷಣ, ಕವಾಲಿ, ಬುರ್ದಾ, ಸೇರಿದಂತೆ ಪ್ರವಾದಿಯವರ ಸಂದೇಶ ಸಾರುವ ಹಲವಾರು ಕಾರ್ಯಕ್ರಮಗಳು ನಡೆಯಿತು. ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಯಿತು.
ಜಮಾಅತ್ ಅಧ್ಯಕ್ಷರು, ಆಡಳಿತ ಮಂಡಳಿ ಪದಾಧಿಕಾರಿಗಳು, ಮಸೀದಿಯ ಧರ್ಮ ಗುರುಗಳು, ಮದರಸ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಜಮಾಅತ್ ನ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ಫೋಟೋ 17 ಎಂಡಿಕೆ 02 ; ನಾಪೋಕ್ಲುವಿನಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ.