ತುಮಕೂರು: ವೆಂಕಟಮ್ಮನಹಳ್ಳಿ ನಕ್ಸಲೀಯ ದಾಳಿ ಪ್ರಕರಣದಲ್ಲಿ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಕ್ಸಲೈಟ್ ಕೊತ್ತಗೆರೆ ಶಂಕರನನ್ನು ಪಾವಗಡ ಪೊಲೀಸರು ಬಂಧಿಸಿದ್ದಾರೆ. 2005ನೇ ಇಸವಿಯ ಫೆಬ್ರವರಿ 10ರಂದು ರಾತ್ರಿ 10.30 ಗಂಟೆಯಲ್ಲಿ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯ ಪೊಲೀಸ್ ಕ್ಯಾಂಪ್ ಮೇಲೆ ಸುಮಾರು 300 ಜನ ಮಾವೋವಾದಿ ನಕ್ಸಲೀಯರು ಬಂದೂಕುಗಳು, ಬಾಂಬ್ಗಳು, ಹ್ಯಾಂಡ್ ಗ್ರೆನೇಡ್ಗಳೊಂದಿಗೆ ದಾಳಿ ನಡೆಸಿ, ಕರ್ತವ್ಯದಲ್ಲಿದ್ದ 7 ಮಂದಿ ಪೊಲೀಸರನ್ನು ಕೊಲೆ ಮಾಡಿ, 5 ಮಂದಿ ಪೊಲೀಸ್ ಸಿಬ್ಬಂದಿಗೆ ಗಾಯ ಮಾಡಿ ಕ್ಯಾಂಪಿನ ಹೊರಗಡೆ ನಿಂತಿದ್ದ ಖಾಸಗಿ ಬಸ್ನ ಕ್ಲೀನರ್ನನ್ನು ಕೊಲೆ ಮಾಡಿ. ಕ್ಯಾಂಪ್ನಲ್ಲಿದ್ದ ಬಂದೂಕುಗಳು ಮತ್ತು ಗುಂಡುಗಳನ್ನು ದೋಚಿಕೊಂಡು ಹೋಗಿದ್ದರು. ಈ ಬಗ್ಗೆ ತಿರುಮಣಿ ಪೊಲೀಸ್ ಠಾಣಾ ಮೊನಂ: 07/2005, ಕಲಂ:143, 144, 147, 148. 307, 302, 396, 353, 120.121(2),109, 332, 333 3/2 149 2ಎ & 0:3.4.5 ನಿಯಂತ್ರಣ ಕಾಯ್ದೆ ಮತ್ತು ಕಲಂ:25 ಶಸ್ತ್ರಾಸ್ತ್ರ ಅಧಿನಿಯಮ ಅಡಿ ಪ್ರಕರಣ ದಾಖಲು ಮಾಡಲಾಗಿತ್ತು. ಸದರಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ 32 ಜನ ಆರೋಪಿಗಳ ಮೇಲೆ ಪಾವಗಡದ ಘನ ಸಿಜೆ[ಜೆಡಿ] ಮತ್ತು ಜೆಎಂಎಫ್ಸಿ ನ್ಯಾಯಾಲಯವು ಜಾಮೀನು ರಹಿತ ವಾರಂಟ್ಗಳನ್ನು ಹೊರಡಿಸಿರುತ್ತೆ. ತುಮಕೂರು ಮತ್ತು ಬೆಂಗಳೂರು ಆಂತರಿಕ ಭದ್ರತಾ ವಿಭಾಗ ಮತ್ತು ಸಿ.ಐ. ತಂಡದವರು ತಲೆಮರೆಸಿಕೊಂಡಿದ್ದ ನಕ್ಸಲೀಯ ಪ್ರಕರಣದ ಆರೋಪಿಯಾದ ಶಂಕರ ಅಲಿಯಾಸ್ ಕೊತ್ತಗೆರೆ ಶಂಕರ ಬಿನ್ ಸುಬ್ಬರಾಯುಡು (38) ಎಂಬಾತನನ್ನು ಬಂಧಿಸಿದ್ದಾರೆ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಆಶೋಕ್ ತಿಳಿಸಿದ್ದಾರೆ. ಆರೋಪಿ ಬಿ.ಬಿ.ಎಂ.ಪಿ.ಯಲ್ಲಿ ಡ್ರೈವರ್ ಆಗಿ ಕೆಲಸ ಮಾಡಿಕೊಂಡು ಗೌರಿಪಾಳ್ಯ, 2ನೇ ಹಂತ, 8ನೇ ಮುಖ್ಯರಸ್ತೆ, ವೆಂಕಟಸ್ವಾಮಿ ಗಾರ್ಡನ್, ಬೆಂಗಳೂರು ನಗರದಲ್ಲಿ ವಾಸವಿದ್ದ ಎನ್ನಲಾಗಿದೆ.