ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾಹಿತಿ । ವಿವಿಧ ಅಧಿಕಾರಿಗಳು ಭಾಗಿ
ಪ್ರಮುಖ ವರದಿ ಮೇಲುಕೋಟೆ
ಮಾ. 21 ರಂದು ನಡೆಯುವ ಚೆಲುವನಾರಾಯಣಸ್ವಾಮಿಯವರ ಪ್ರಖ್ಯಾತ ವೈರಮುಡಿ ಉತ್ಸವವನ್ನು ಹೆಚ್ಚು ಅರ್ಥಪೂರ್ಣ ಹಾಗೂ ಅಚ್ಚುಕಟ್ಟಾಗಿ ಆಚರಿಸಲಾಗುತ್ತಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
ಶನಿವಾರ ಮೇಲುಕೋಟೆಯಲ್ಲಿ ವೈರಮುಡಿ ಜಾತ್ರಾಮಹೋತ್ಸವದ ಸಿದ್ಧತೆಯ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾಹಿತಿನೀಡಿ ಮಾತನಾಡಿದರು.
ವೈರಮುಡಿ ಜಾತ್ರಾಮಹೋತ್ಸವ ಶನಿವಾರದಿಂದಲೇ ಆರಂಭವಾಗಿ ಮಾರ್ಚ 28ರವರೆಗೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಮಾರ್ಗದರ್ಶನದಲ್ಲಿ ಜಾತ್ರಾಮಹೋತ್ಸವದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಿ ಸಿದ್ಧತೆ ಮಾಡಲಾಗಿದೆ.
ಶುದ್ಧಕುಡಿಯುವ ಕುಡಿಯುವ ನೀರು ಹಾಗೂ ಸ್ವಚ್ಛತೆಯ ವೈದ್ಯಕೀಯ ಸೇವೆಗೆ ಹೆಚ್ಚು ಕಾಳಜಿವಹಿಸಲಾಗಿದೆ. ಭಕ್ತಸ್ನೇಹಿಯಾಗಿ ಜಾತ್ರಾಮಹೋತ್ಸವವನ್ನು ಆಚರಿಸಲಾಗುತ್ತಿದೆ. ಕಳೆದ ಸಲಕ್ಕಿಂತ ಹೆಚ್ಚಿನ ಭಕ್ತರು ಬರುವ ನಿರೀಕ್ಷೆಯೊಂದಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದರು.
ಆಕರ್ಷಕ ದೀಪಾಲಂಕಾರ: ಈ ವರ್ಷ ಆಕರ್ಷಕ ಹಾಗೂ ನವೀನ ರೀತಿಯ ದೀಪಾಲಂಕಾರ ಮಾಡಲಾಗಿದೆ. ವೈರಮುಡಿ ಉತ್ಸವದಂದು ದೇವಾಲಯದ ಆವರಣಕ್ಕೆ ಹೆಚ್ಚಿನ ರೀತಿಯಲ್ಲಿ ಪುಷ್ಪಾಲಂಕಾರ ಮಾಡಲಾಗುತ್ತಿದೆ ಎಂದರು.
ಶಾಸಕರು ಕಲ್ಯಾಣೋತ್ಸವ ನಾಗವಲ್ಲಿಯಂದು ದಾರಾಮಂಟಪಕ್ಕೆ ರಥ ಹಾಗೂ ತೆಪ್ಪಮಂಟಪಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಲವು ಸುತ್ತಿನ ಪೂರ್ವಭಾವಿ ಸಭೆ ನಡೆಸಿ ಸಿದ್ಧತೆ ಮಾಡಲಾಗಿದೆ ಎಂದರು.
ವಸತಿಸೌಕರ್ಯ ಪಡೆಯಲು ಸಾಧ್ಯವಾಗದ ಭಕ್ತರಿಗೆ ಮಲಗಲು ವಿಶೇಷ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ ದಿನದ 24 ಗಂಟೆ ವಿದ್ಯುತ್ ಕಡಿತವಾಗದಂತೆ ಎಚ್ಚರವಹಿಸಲಾಗುತ್ತದೆ ಬರಗಾಲ ಇರುವ ಕಾರಣ ಅದ್ಧೂರಿ ಆಚರಣೆಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲಾಗಿದೆ ಎಂದರು
ಮಂಡ್ಯಜಿಲ್ಲಾಧಿಕಾರಿ ಡಾ ಕುಮಾರ್ ಮಾತನಾಡಿ, ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ವಹಿಸಿದ ಕಾರ್ಯಗಳನ್ನು ಲೋಪವಿಲ್ಲದಂತೆ ಮಾಡಬೇಕು. ವೈರಮುಡಿಗೆ ಬಂದ ಭಕ್ತರು ಸಂತೃಪ್ತಿಯಿಂದ ದೇವರದರ್ಶನಪಡೆಯುವ ವ್ಯವಸ್ಥೆ ಮಾಡಬೇಕು. ಕೆಎಸ್.ಆರ್.ಟಿಸಿ ಬಸ್ ನಿಲ್ದಾಣದಿಂದ ದೇವಾಲಯದವರೆಗೆ ವಯೋವೃದ್ಧಭಕ್ತರು ಹೋಗಿಬರಲು ಉಚಿತ ಬಸ್ ಸೌಕರ್ಯಕಲ್ಪಿಸಲಾಗಿದೆ. ದೇವಾಲಯದಲ್ಲಿ ಉತ್ಸವಾದಿಗಳನ್ನು ಹೆಚ್ಚು ಭಕ್ತರು ದರ್ಶನ ಮಾಡುವಂತೆ ನಡೆಸಬೇಕು ವೈರಮುಡಿ ಉತ್ಸವವವನ್ನು ರಾತ್ರಿ 8ಗಂಟೆಯಿಂದ ಬೆಳಗಿನ ನಾಲ್ಕುಗಂಟೆಯವರೆಗೆ ನಡೆಸಲಾಗುತ್ತದೆ. ರಥೋತ್ಸವ ತೆಪ್ಪೋತ್ಸವ ಹಾಗೂ ಇತರ ಉತ್ಸವಗಳನ್ನೂ ಅಚ್ಚಕಟ್ಟಾಗಿ ಭಕ್ತರಿಗೆ ಅನುಕೂಲವಾಗುವಂತೆ ನಡೆಸಲಾಗುತ್ತದೆ ಎಂದರು
ಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಪಾಂಡವಪುರ ಉಪವಿಭಾಗಾಧಿಕಾರಿ ಮಾರುತಿ, ಮುಜರಾಯಿ ತಹಶೀಲ್ದಾರ್ ತಮ್ಮೇಗೌಡ, ತಹಶೀಲ್ದಾರ್ ಶ್ರೇಯಸ್ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್, ಇತರ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಗೂ ಮುನ್ನ ಶಾಸಕರು ಜಿಲ್ಲಾಧಿಕಾರಿಗಳು ಉತ್ಸವ ಬೀದಿ ಪಾರ್ಕಿಂಗ್ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಮುಖ ವ್ಯವಸ್ಥೆಗಳು: ಭಕ್ತರು ವಿವಿದ ಸ್ಥಳಗಳಿಂದ ವೈರಮುಡಿ ಉತ್ಸವಕ್ಕೆ ಬರಲು 150 ವಿಶೇಷ ಬಸ್
ದೇವಾಲಯ ಮತ್ತು ಬೆಟ್ಟ ಹಾಗೂ ಪ್ರಮುಖ ಬೀದಿಗಳಿಗೆ ಆಕರ್ಷಕ ದೀಪಾಲಂಕಾರ
ನಿರಂತರ ಸ್ವಚ್ಛತೆಗೆ ತಾಲ್ಲೂಕು ಕೇಂದ್ರಗಳಿಂದ ಪೌರಕಾರ್ಮಿಕರ ನಿಯೋಜನೆ
ಉತ್ಸವ ಬೀದಿಯಲ್ಲಿ 9 ಕಡೆ ಬೃಹತ್ ಎಲ್.ಇ.ಡಿ ಪರದೆಗಳ ಮೂಲ ವೈರಮುಡಿ ಉತ್ಸವ ಪ್ರಸಾರ
ಚೆಲುವನಾರಾಯಣನ ಉತ್ಸವಗಳಿಗೆ ವಿಶೇಷ ತೋಮಾಲೆ ಸೇವೆ. ವಿಶೇಷ ಮಂಗಳವಾದ್ಯ ತಂಡ
ದೇವಾಲಯದ ಆವರಣಕ್ಕೆ ವೈರಮುಡಿಯಂದು ಕಳೆದೆಲ್ಲಾ ಸಲಕ್ಕಿಂತ ಆಕರ್ಷಕ ಪುಷ್ಪಾಲಂಕಾರ
ಭಕ್ತರಿಗೆ ಪ್ರಸಾದ ವಿನಿಯೋಗದ ವ್ಯವಸ್ಥೆ ವಾಹನಗಳಿಗೆ ವ್ಯವಸ್ಥಿತ ಪಾರ್ಕಿಂಗ್ ಭದ್ರತೆಗೆ 1500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗುವುದು ಎಂದರು.
ಬಾಕ್ಸ್….
ವೈರಮುಡಿ ಉತ್ಸವಕ್ಕೆ 10ಕೋಟಿರೂ ಬಿಡುಗಡೆ:
ಭಾರತದ ಪ್ರಖ್ಯಾತ ವೈರಮುಡಿ ಉತ್ಸವ ಆಚರಣೆಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ 10ಕೋಟಿ ರೂ. ಮಂಜೂರುಮಾಡಿದ್ದಾರೆ ಎಂದ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
1.50 ಕೋಟಿರೂಗಳನ್ನು ಜಾತ್ರಾಮಹೋತ್ಸವದ ವ್ಯವಸ್ಥಿತ ಹಾಗೂ ಅರ್ಥಪೂರ್ಣ ಆಚರಣೆಗೆ ಬಳಸಿಕೊಂಡು ಉಳಿದ 8.50 ಕೋಟಿರೂಗಳನ್ನು ಮೇಲುಕೋಟೆಯಲ್ಲಿ ಶಾಶ್ವತವಾದ ಮೂಲಭೂತಸೌಕರ್ಯಕ್ಕೆ ಬಳಸಿಕೊಳ್ಳಲು ಯೋಜಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿಯವರ ಮಾರ್ಗದಶನದಂತೆ ವೈರಮುಡಿ ಜಾತ್ರಾಮಹೋತ್ಸವಕ್ಕೆ ಅಚ್ಚುಟ್ಟಾದ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾಧಿಕಾರಿ ಡಾ. ಕುಮಾರ್ ಅಪರಜಿಲ್ಲಾಧಿಕಾರಿ, ಡಾ.ಎಚ್.ಎಲ್ ನಾಗರಾಜು ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಪರಿಶ್ರಮದಲ್ಲಿ ಅಧಿಕಾರಿಗಳು ಮತ್ತು ದೇವಾಲಯದ ಸಿಬ್ಬಂದಿ ವೈರಮುಡಿ ಬ್ರಹ್ಮೋತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ ಎಂದರು. ವೈರಮುಡಿ ಉತ್ಸವದಂದು ರಾತ್ರಿ ಭಕ್ತರಿಗಾಗಿ ನಾನೇ ಸ್ವತಃ ಖಚರ್ಿನಿಂದ ಪುಳಿಯೋಗರೆ ಹಾಗೂ ಮೊಸರನ್ನ ಪ್ರಸಾದ ಮಾಡಿಸಿ ಭಕ್ತರಿಗೆ ವಿತರಿಸುವ ವ್ಯವಸ್ಥೆ ಮಾಡಿದ್ದೇನೆ ಜಾತ್ರಾಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವೈರಮುಡಿ ಉತ್ಸವ ದರ್ಶದನಲ್ಲಿ ಭಾಗಿಯಾಗಿ ಎಂದು ಮನವಿಮಾಡಿದರು.
16 ಎಂ.ಎಲ್.ಕೆ 1 ಮೇಲುಕೋಟೆ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವ ಸಿದ್ಧತೆಯ ಸಂಬಂಧ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ್, ಎಸ್.ಪಿ ಯತೀಶ್ ಅಧಿಕಾರಿಗಳೊಂದಿಗೆ ವಿವಿಧ ಸ್ಥಳಗಳನ್ನು ಪರಿಶೀಲಿಸಿದರು.