ಅರಮಣಮಾಡ ಕ್ರಿಕೆಟ್ ನಮ್ಮೆ ; ಅಚ್ಚಪಂಡ, ಮುಕ್ಕಾಟೀರ ರನ್ನರ್ ಅಪ್
ಸಣ್ಣುವಂಡ ಕಿಶೋರ್ ನಾಚಪ್ಪ ಬಾಳೆಲೆ
ವಿಜಯಲಕ್ಷ್ಮಿ ಕಾಲೇಜು ಮೈದಾನದಲ್ಲಿ ಅರಮಣಮಾಡ ಒಕ್ಕ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆದ ಅರಮಣಮಾಡ ಕ್ರಿಕೆಟ್ ನಮ್ಮೆಯ ಭಾನುವಾರ ಸಮಾರೋಪಗೊಂಡಿತು. ಪುರುಷರಲ್ಲಿ ನೆರವಂಡ, ಮಹಿಳೆಯರಲ್ಲಿ ಮಣವಟ್ಟೀರ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಅಚ್ಚಪಂಡ ಪುರುಷರ ತಂಡ ಹಾಗೂ ಹರಿಹರ-ಬೆಳ್ಳೂರು ಮುಕ್ಕಾಟೀರ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಆ ಮೂಲಕ 22ನೇ ವರ್ಷದ ವಿಜೇತರಾಗಿ ಹೊರ ಹೊಮ್ಮಿದರು.
ಚೆಕ್ಕೇರ, ಮಾಳೇಟೀರ ಮೂರನೇ ಸ್ಥಾನ: ಪುರುಷರಲ್ಲಿ ಚೆಕ್ಕೇರಕ್ಕೆ ಮೂರನೇ ಸ್ಥಾನ, ಕಳಕಂಡ ನಾಲ್ಕನೇ ಸ್ಥಾನ ಪಡೆದರೆ, ಮಹಿಳೆಯರಲ್ಲಿ ಕೆದಮುಳ್ಳೂರು ಮಾಳೇಟೀರ ತಂಡಕ್ಕೆ ಮೂರನೇ ಸ್ಥಾನ ಹಾಗೂ ಅತಿಥೇಯ ಅರಮಣಮಾಡ ನಾಲ್ಕನೇ ಸ್ಥಾನ ಅಲಂಕರಿಸಿತು.
9 ವಿಕೆಟ್ಗಳ ಗೆಲುವು: ನೆರವಂಡ ಒಕ್ಕ ತಂಡವು ಅಚ್ಚಪಂಡ ತಂಡವನ್ನು 9 ವಿಕೆಟ್ಗಳಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಚ್ಚಪಂಡ ನಿಗದಿತ 6 ಓವರ್ಗಳಿಗೆ 7 ವಿಕೆಟ್ ಕಳೆದುಕೊಂಡು 36 ರನ್ಗಳಿಗೆ ಕುಸಿಯಿತು. ನೆರವಂಡ ಒಕ್ಕ 3.4 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಗೆದ್ದು ಬೀಗಿತು. ನೆರವಂಡ ಪ್ರಶಾಂತ್ 22 ರನ್, ಪ್ರವೀಣ್ ಪೆಮ್ಮಯ್ಯ 12, ವರುಣ್ 4 ರನ್ ಗಳಿಸಿದರು. ಮಾರಕ ಬೌಲಿಂಗ್ ದಾಳಿಗೆ ಅಚ್ಚಪಂಡ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಮೊದಲ ಚೆಂಡಿನಲ್ಲಿ ಅಚ್ಚಪಂಡ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿತು. ಬೋಪಣ್ಣ ತಲಾ 1 ಬೌಂಡರಿ, ಸಿಕ್ಸರ್ ಮೂಲಕ 10 ರನ್ ಗಳಿಸಿದರು. ಮಂಜು ಮಾಚಯ್ಯ 10 ರನ್ ಪೇರಿಸಿದರು. ಉಳಿದಂತೆ ರನ್ ಗಳಿಸಲಾಗದೆ ಪರದಾಡಿದರು. ನೆರವಂಡ ಪ್ರಶಾಂತ್ 3 ವಿಕೆಟ್ ಕಿತ್ತು ಸಣ್ಣ ಮೊತ್ತಕ್ಕೆ ಕಟ್ಟಿ ಹಾಕಿದರು. ವರುಣ್ 2 ವಿಕೆಟ್ ಪಡೆದು ತಂಡಕ್ಕೆ ನೆರವಾದರು. ಅಚ್ಚಪಂಡ ಮಿಥುನ್ 1 ವಿಕೆಟ್ ಪಡೆದರು.
25 ರನ್ಗಳ ಜಯ: ಮಹಿಳೆಯರ ಫೈನಲ್ನಲ್ಲಿ ಮಣವಟ್ಟೀರ ತಂಡವು ಹರಿಹರ-ಬೆಳ್ಳೂರು ಗ್ರಾಮದ ಮುಕ್ಕಾಟೀರ ತಂಡವನ್ನು 25 ರನ್ಗಳಿಂದ ಸೋಲಿಸಿ ಚಾಂಪಿಯನ್ ಸ್ಥಾನ ಅಲಂಕರಿಸಿತು. ಮಣವಟ್ಟೀರ ನಿಗಧಿತ 6 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 60 ರನ್ ಪೇರಿಸಿತು. ಮುಕ್ಕಾಟೀರ 3 ವಿಕೆಟ್ ಕಳೆದುಕೊಂಡು 34 ರನ್ಗಳಿಗೆ ತೃಪ್ತಿಪಟ್ಟುಕೊಂಡಿತು. ಮಣವಟ್ಟೀರ ಸಂಗೀತಾ 30 ರನ್, ಅರ್ಪಿತಾ 20 ರನ್ ಸಿಡಿಸಿ ಬೃಹತ್ ಮೊತ್ತ ಕಲೆ ಹಾಕಲು ನೆರವಾದರು. ಮುಕ್ಕಾಟೀರ ವಿಕೆಟ್ ಪಡೆಯಲಾಗದೆ ಪರದಾಡಿತು. ಮಣವಟ್ಟೀರ ಬೌಲಿಂಗ್ನಲ್ಲಿ ಮುಕ್ಕಾಟೀರವನ್ನು ಕಟ್ಟಿ ಹಾಕಿತು. ಭಾರತಿ ಶುಭ 11 ರನ್, ಮಿಂತು ಸಂದೀಪ್ 5 ರನ್, ತೀಶ್ಮ 6 ರನ್ ಗಳಿಸಿದರು. ಮಣವಟ್ಟೀರ ಶೃತಿ 2 ವಿಕೆಟ್ ಕಿತ್ತರು.
ಬೆಸ್ಟ್: ನೆರವಂಡ ಪ್ರಶಾಂತ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಪುರುಷರಲ್ಲಿ ಕೊಟ್ಟ್ಕತ್ತೀರ ಲೋಕೇಶ್ ತಿಮ್ಮಯ್ಯ ಭವಿಷ್ಯದ ಆಟಗಾರ, ಜಮ್ಮಡ ತಶಿನ್ ತಮ್ಮಯ್ಯ ಉತ್ತಮ ಕ್ಷೇತ್ರ ರಕ್ಷಕ, 13 ವಿಕೆಟ್ ಪಡೆದ ಅಚ್ಚಪಂಡ ನಿರೋಶ್ ಉತ್ತಮ ಬೌಲರ್, ಅಚ್ಚಪಂಡ ಮಿಥುನ್ ಬೆಸ್ಟ್ ಬ್ಯಾಟರ್, 203 ರನ್ ಹಾಗೂ 12 ವಿಕೆಟ್ ಪಡೆದ ಚೆಕ್ಕೇರ ಆಕರ್ಶ್ ಬೆಸ್ಟ್ ಆಲ್ರೌಂಡರ್, ಕುಂಜಿಲಗೇರಿ ಮುಕ್ಕಾಟೀರ ತಂಡ ಶಿಸ್ತಿನ ತಂಡ ಪಡೆದುಕೊಂಡಿತು. ಮಹಿಳೆಯರಲ್ಲಿ ಮಣವಟ್ಟೀರ ಸಂಗೀತಾ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಓಡಿಯಂಡ ರೋಹಿಣಿ ಭವಿಷ್ಯದ ಅಟಗಾರ್ತಿ, ಅರಮಣಮಾಡ ಟೀನಾ ಬೆಸ್ಟ್ ಆಲ್ರೌಂಡರ್, ಅಜ್ಜಿಕುಟ್ಟೀರ ಉತ್ತಮ ತಂಡ, ಮುಕ್ಕಾಟೀರ ಅಂಜನ ಬೆಸ್ಟ್ ಬ್ಯಾಟರ್, ಮಣವಟ್ಟೀರ ಶೃತಿ ಬೆಸ್ಟ್ ಬೌಲರ್, ಮಾಳೇಟೀರ ಪಲ್ಲವಿ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಸ್ವೀಕರಿಸಿದರು.
ಪಂದ್ಯ ಶ್ರೇಷ್ಠರು: ನೆರವಂಡ ಪ್ರಶಾಂತ್, ಅಚ್ಚಪಂಡ ಬೋಪಣ್ಣ, ಮಣವಟ್ಟೀರ ಸಂಗೀತಾ, ಮುಕ್ಕಾಟೀರ ಭಾರತಿ ಶುಭ.
ಬೆಳ್ಳಿಯ ಪೀಚೆಕತ್ತಿ, ಕೊಕ್ಕೆತಾತಿ ಬಹುಮಾನ: ಪುರುಷರ ಕ್ರಿಕೆಟ್ ವಿಜೇತರಿಗೆ ಒಟ್ಟು 2.5 ಲಕ್ಷ ನಗದು ಬಹುಮಾನ ನೀಡಲಾಯಿತು. ಪ್ರಥಮ ತಂಡಕ್ಕೆ 1 ಲಕ್ಷ, ದ್ವಿತೀಯ ತಂಡಕ್ಕೆ 75 ಸಾವಿರ, 3 ನೇ ಸ್ಥಾನಕ್ಕೆ 50 ಸಾವಿರ, 4 ನೇ ಸ್ಥಾನಕ್ಕೆ 25 ಸಾವಿರ ನಗದು ನೀಡಲಾಯಿತು. ಉತ್ತಮ ಬ್ಯಾಟಿಂಗ್, ಬೌಲರ್, ಕೀಪರ್, ಅಲ್ರೌಂಡರ್, ಅಪ್ ಕಮಿಂಗ್ ಆಟಗಾರ ಪ್ರಶಸ್ತಿ. ಮಹಿಳೆಯರಿಗೆ ನಗದು ರಹಿತವಾಗಿ ಪ್ರಶಸ್ತಿ ನೀಡಲಾಯಿತು. 2.5 ಲಕ್ಷ ಮೌಲ್ಯದ ಬೆಳ್ಳಿಯ ಆಭರಣ ಪ್ರಶಸ್ತಿಯಾಗಿ ಸ್ವೀಕರಿಸಲಾಯಿತು. ವಿಜೇತ ತಂಡದ ಆಟಗಾರರಿಗೆ 82 ಸಾವಿರ ಮೌಲ್ಯದ ಬೆಳ್ಳಿಯ ಕೊಕ್ಕೆತಾತಿ, ದ್ವಿತೀಯ ತಂಡಕ್ಕೆ 48 ಸಾವಿರ ಮೌಲ್ಯದ ಕೊಕ್ಕೆತಾತಿ, 3 ನೇ ತಂಡಕ್ಕೆ ಪೀಚೆಕತ್ತಿಯ ಬ್ರೋಷ್, 4 ನೇ ತಂಡಕ್ಕೆ ಪೀಚೆಕತ್ತಿ ಬ್ರೋಷ್ ನೀಡಲಾಯಿತು.
ಒಂದುವರೆ ಗಂಟೆ ಮಳೆ: ಮಹಿಳೆಯರ ಫೈನಲ್ ಸಂದರ್ಭ ಮಳೆ ಕಾಣಿಸಿಕೊಂಡಿತು. 2ನೇ ಇನ್ನಿಂಗ್ಸ್ ನಡೆಯುತ್ತಿದ್ದ ವೇಳೆ ಧಾರಾಕಾರ ಮಳೆ ಕಾಣಿಸಿಕೊಂಡಿತು. ಸುಮಾರು ಒಂದುವರೆ ಗಂಟೆ ಸುರಿದ ಮಳೆಯಿಂದಾಗಿ ಮೈದಾನದಲ್ಲಿ ನೀರು ತುಂಬಿಕೊಂಡಿತು. ತಾಂತ್ರಿಕ ಸಮಿತಿಯಿಂದ ಮಳೆ ನಿಂತ ಮೇಲೆ ಪಂದ್ಯ ನಡೆಸಲು ಹರಸಾಹಸ ಪಟ್ಟಿತು. ನಿರಂತರ 2 ಗಂಟೆಗಳ ಕಾರ್ಯದಿಂದ ಮೈದಾನವನ್ನು ಪಂದ್ಯ ನಡೆಸಲು ಸಜ್ಜುಗೊಳಿಸಲಾಯಿತು. ಪಿಚ್ ಭಾಗದಲ್ಲಿ ತೇವಾಂಶ ಹೀರಿಕೊಳ್ಳಲು ಬೆಂಕಿ ಮೊರೆ ಹೋಗಲಾಯಿತು. ಪೆಟ್ರೋಲ್ ಬಳಸಿ ಪಿಚ್ ಮೇಲೆ ಬೆಂಕಿ ಕಾಯಿಸಿ ಒಣಗಿಸಲಾಯಿತು. ಮೈದಾನದ ಸುತ್ತಲೂ ತಗ್ಗು ಪ್ರದೇಶ ಮತ್ತು ಮಣ್ಣಿನ ಗುಣದಿಂದ ಮೈದಾನ ಆಟಕ್ಕೆ ನೆರವಾಯಿತು. ಎರಡು ಫೈನಲ್ ಪಂದ್ಯಗಳನ್ನು ಯಾವುದೇ ತೊಂದರೆಯಾಗದಂತೆ ನಡೆಸಲು ಕಾರಣರಾದರು.
313 ತಂಡಗಳು: ಏಪ್ರಿಲ್ 21 ರಿಂದ ಮೇ. 19 ರವರೆಗೆ ನಡೆದ ನಮ್ಮೆಯಲ್ಲಿ 49 ಮಹಿಳಾ ತಂಡಗಳು, ಪುರುಷರ 264 ತಂಡಗಳು ಹೊಸೆಣೆಸಾಟ ನಡೆಸಿದ್ದವು. ಒಟ್ಟು 313 ತಂಡಗಳು ಭಾಗವಹಿಸಿದ ಇತಿಹಾಸ ಹೊಂದಿದೆ.
ಮುಂದಿನ ವರ್ಷ ಚೆಕ್ಕೇರ ಆತಿಥ್ಯ: ಮುಂದಿನ ವರ್ಷ (23 ನೇ ವರ್ಷದ) ಚೆಕ್ಕೇರ ಒಕ್ಕ ಕೊಡವ ಕೌಟುಂಬಿಕ ಕ್ರಿಕೆಟ್ ಆತಿಥ್ಯ ವಹಿಸಲಿದೆ. ಇದರಂತೆ ಸಮಾರೋಪದಲ್ಲಿ ಧ್ವಜ ಸ್ವೀಕರಿಸಿದರು. ಈ ಸಂದರ್ಭ ಚೆಕ್ಕೇರ ಕುಟುಂಬ ಅಧ್ಯಕ್ಷ ಕಾಶಿ ಕಾಳಯ್ಯ, ಹಿರಿಯರಾದ ವಾಸು ಕುಟ್ಟಪ್ಪ, ಸೂರಿ ಅಯ್ಯಪ್ಪ, ಬಿಪಿನ್ ಸೇರಿದಂತೆ ಕುಟುಂಬಸ್ಥರು ಇದ್ದರು. ಧ್ವಜ ಹಸ್ತಾಂತರದ ಮೂಲಕ ಅರಮಣಮಾಡ ಒಕ್ಕ ಕ್ರಿಕೆಟ್ ಆಚರಿಸಿದ ಒಕ್ಕಗಳ ಸಾಲಿನಲ್ಲಿ ಸೇರಿಕೊಂಡಿತು. ಇಲ್ಲಿವರೆಗೆ ಕೀತಿಯಂಡ, ತಾತಂಡ, ಬಲ್ಲಂಡ, ಕಾಂಡೇರ, ಮಣವಟ್ಟೀರ, ಕುಂಡ್ರಂಡ, ಅಮ್ಮುಣಿಚಂಡ, ನಂಬುಡುಮಾಡ, ಕೂತಂಡ, ಕೋಳೇರ, ಬಲ್ಲಿಮಾಡ, ಮಾಚಿಮಂಡ, ಚಾಮೇರ, ಅಡ್ಡೇಂಗಡ, ಕೊಕ್ಕೇಂಗಡ, ಚೌರೀರ, ಮುಕ್ಕಾಟೀರ, ಅಳಮೇಂಗಡ, ಮಡ್ಲಂಡ, ಪೊರುಕೊಂಡ, ಬಾಳೆಯಡ ಆತಿಥ್ಯ ವಹಿಸಿತ್ತು.
ಲೆದರ್ ಬಾಲ್ ಕ್ರಿಕೆಟ್ಗೆ ಒತ್ತಾಯ: ಕೊಡವ ಕೌಟುಂಬಿಕ ಕ್ರಿಕೆಟ್ನಲ್ಲಿ ಲೆದರ್ ಬಾಲ್ ಕ್ರಿಕೆಟ್ ಹೆಚ್ಚು ಸಹಕಾರಿ ಎಂದು ರಿಪಬ್ಲಿಕ್ ಟಿವಿ ನೆಟವರ್ಕ್ ಅಧ್ಯಕ್ಷ ಚೇರಂಡ ಕಿಶನ್ ಮಾದಪ್ಪ ಅಭಿಪ್ರಾಯಪಟ್ಟರು. ಈಗಾಗಲೇ ಕೊಡವ ಜನಾಂಗದ ಸಾಕಷ್ಟು ಟೂರ್ನಿ ಲೆದರ್ ಬಾಲ್ನಲ್ಲಿ ನಡೆಸಲಾಗಿದೆ. ಭವಿಷ್ಯದ ದೃಷ್ಠಿಯಿಂದ ಲೆದರ್ ಬಾಲ್ ಉತ್ತಮ ಎಂದು ಅಂತಿಮ ಪಂದ್ಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದರು.
ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಮಾತನಾಡಿ, ಕ್ರಿಕೆಟ್ ನಮ್ಮೆಯನ್ನು ಅಚ್ಚುಕಟ್ಟಾಗಿ ಶಿಸ್ತು ಬದ್ದವಾಗಿ ಆಯೋಜಿಸಿದ ಅರಮಣಮಡ ಕುಟುಂಬದವರಿಗೆ ಅಭಿನಂದನೆ ಸಲ್ಲಿಸಿದರು. ಕ್ರಿಕೆಟ್ ಕ್ರೀಡೆಯ ಮೇಲೆ ಅಭಿಮಾನ ಹೆಚ್ಚಾಗಿ ಜಿಲ್ಲೆಯಿಂದ ಒಂದು ಟೀಮ್ ಭಾರತ ದೇಶವನ್ನು ಪ್ರತಿನಿದಿಸುವಂತಾಗಲಿ ಎಂದು ಹಾರೈಸಿದರು.
ಒಲಿಂಪಿಯನ್ ಅಶ್ವಿನಿ ನಾಚಪ್ಪ ಮಾತನಾಡಿ, ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯಲ್ಲಿ ಮಹಿಳೆರಿಗೂ ಅವಕಾಶ ನೀಡಿರುವುದು ವಿಶೇಷವಾಗಿದೆ. ಇದರಿಂದ ಮಹಿಳಾ ಕ್ರೀಡಾಪಟುಗಳಿಗೆ ಪ್ರೋತ್ಸಾಹ ದೊರೆಯುತ್ತದೆ ಎಂದರು.
ಸಮಾರೋಪ: ಉದ್ಯಮಿ, ಕೋಣೇರೀರ ಆದಿತ್ಯ ಉತ್ತಪ್ಪ, ಸೈಕಲ್ ಪ್ಯೂರ್ ಅಗರಬತ್ತಿ ಉದ್ಯಮದ ನಿರ್ದೇಶಕ ಅರ್ಜುನ್ ಎಂ. ರಂಗ, ಹಿರಿಯ ವೈದ್ಯ ಮಾಪಂಗಡ ಎಸ್. ಬೆಳ್ಯಪ್ಪ, ಅರಮಣಮಾಡ ಕ್ರಿಕೆಟ್ ಕಮಿಟಿ ಅಧ್ಯಕ್ಷ ಎ.ಕೆ. ಸುರೇಶ್, ಉಪಾಧ್ಯಕ್ಷ ಸುಗುಣ ಗಣಪತಿ, ಕಾರ್ಯದರ್ಶಿ ಅಜಯ್, ಖಜಾಂಚಿ ದಿನು ಬೆಳ್ಯಪ್ಪ, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಇದ್ದರು. ಟೂರ್ನಿ ನಿರ್ದೇಶಕರಾಗಿ ಕೊಕ್ಕೇಂಗಡ ರಂಜನ್, ತೀರ್ಪುಗಾರರಾಗಿ ಅಳಮೇಂಗಡ ಮೋಹನ್ ಚಂಗಪ್ಪ, ಕೊಟ್ಟಂಗಡ ಸೂರಜ್, ಬಾಚೀರ ರಾಜ, ಅಡ್ಡೇಂಗಡ ಆಕಾಶ್ ಕಾರ್ಯನಿರ್ವಹಿಸಿದರು.
ಫೋಟೋ 19 ಎಂಡಿಕೆ 03 ; ಮಳೆಯಿಂದಾಗಿ ಮೈದಾನ ನೀರಿನಿಂದ ತುಂಬಿರುವುದು
04 ; ಮಳೆಯಲ್ಲಿ ಸಿಲುಕಿಕೊಂಡ ಹಿರಿಯರನ್ನು ಮಳೆಯಿಂದ ರಕ್ಷಿಸುತ್ತಿರುವುದು.
05 ; ಮೈದಾನದ ಪಿಚ್ಗೆ ಬೆಂಕಿ ಕಾಯಿಸುತ್ತಿರುವುದು
06 ; ಕ್ರಿಕೆಟ್ ಅಭಿಮಾನಿಗಳು
07 ; ಪುರುಷರ ಚಾಂಪಿಯನ್ ನೆರವಂಡ ತಂಡ
08 ; ರನ್ನರ್ ಅಪ್ ಅಚ್ಚಪಂಡ ತಂಡ
09 ಮಹಿಳೆಯರ ಚಾಂಪಿಯನ್ ಮಣವಟ್ಟೀರ ತಂಡ
10 ರನ್ನರ್ ಅಪ್ ಹರಿಹರ-ಬೆಳ್ಳೂರು ಮುಕ್ಕಾಟೀರ ತಂಡ
11 ; ಮುಂದಿನ ವರ್ಷ ಆತಿಥ್ಯ ವಹಿಸಲಿರುವ ಚೆಕ್ಕೇರಕ್ಕೆ ಧ್ವಜ ಹಸ್ತಾಂತರ