- ಕ್ರೀಡಾಕೂಟ, ಚುನಾವಣೆ, ಫಲಿತಾಂಶ, ಪಟ್ಟಾಭಿಷೇಕದ ನಂತರ ಕೃಷಿಯತ್ತ
ಸಣ್ಣುವಂಡ ಕಿಶೋರ್ ನಾಚಪ್ಪ ಮಡಿಕೇರಿ
ಕ್ರೀಡೆ, ಚುನಾವಣೆ, ಮತದಾನ, ಫಲಿತಾಂಶ, ಪಟ್ಟಾಭಿಷೇಕದ ನಂತರ ಕೊಡಗಿನ ಜನತೆ ಕೃಷಿಯತ್ತ ವಾಲಿದ್ದಾರೆ. ಒತ್ತಡ, ಜಂಜಾಟಗಳ ಕಾವಿಗೆ ಮಳೆ ಸಿಂಚನದೊಂದಿಗೆ ತಂಪೆರೆಯಲಾಗಿದೆ.
ಭಾನುವಾರ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪಟ್ಟಾಭಿಷೇಕದೊಂದಿಗೆ ಹೋರಾಡಿದ ರಾಜಕೀಯ ಪಕ್ಷಗಳ ಪ್ರಮುಖರು ತಣ್ಣಗಾಗಿದ್ದಾರೆ. ಹಬ್ಬಗಳ ಸಂಭ್ರಮದಿಂದ ಹೊರ ಬಂದಿದ್ದಾರೆ.
ಸುಮಾರು ಮೂರು ತಿಂಗಳ ಕಾಲ ಕೊಡಗಿನಲ್ಲಿ ಬಹುತೇಕ ಜನಾಂಗದವರು ಕ್ರೀಡೆ ಮೂಲಕ ಸಂಭ್ರಮದಲ್ಲಿದ್ದರು. ನಂತರ ಎದುರಾದ ಚುನಾವಣೆಗೆ ಸಮಯ ಮೀಸಲಿಟ್ಟಿದ್ದರು. ಇದೀಗ ಮತದಾನದ ನಂತರ ದೇಶಕ್ಕೆ ಪ್ರಧಾನಿ ಪಟ್ಟಾಭಿಷೇಕದ ಮೂಲಕ ಎಲ್ಲ ಒತ್ತಡವನ್ನು ಮರೆಯುವ ಕಾಲಕ್ಕೆ ಬಂದಿದ್ದಾರೆ. ಮುಂಗಾರು ಆರಂಭಗೊಂಡಿದ್ದು, ಕೃಷಿ ಚಟುವಟಿಕೆಗೆ ಮನಸ್ಸು ಮಾಡಿದ್ದಾರೆ.
ಮಕ್ಕಳ ಶಾಲೆ, ಕಾಲೇಜು ಪರೀಕ್ಷೆ ನಂತರ ಜಿಲ್ಲೆಯಲ್ಲಿ ಕ್ರೀಡಾಕೂಟಗಳು ನಡೆದವು. ಸುಮಾರು 20 ಕ್ಕೂ ಜನಾಂಗಗಳು ತಮ್ಮದೇ ಆದ ಸದಸ್ಯರನ್ನು ಸೇರಿಸಿ ಹಾಕಿ, ಕ್ರಿಕೆಟ್, ವಾಲಿಬಾಲ್, ಕಬಡ್ಡಿ, ಫುಟ್ಬಾಲ್, ಬ್ಯಾಡ್ಮಿಂಟನ್, ಹಗ್ಗಜಗ್ಗಾಟ, ಓಟ ಸ್ಪರ್ಧೆ ಮೂಲಕ ಕ್ರೀಡೆಗೆ ಒತ್ತು ನೀಡಿದ್ದರು.
ಮಾರ್ಚ್, ಎಪ್ರಿಲ್, ಮೇ ತಿಂಗಳವರೆಗೆ ಸಾಕಷ್ಟು ಕ್ರೀಡೆಗಳು ನಡೆದು ಬೆವರು ಹರಿಸಿದ್ದರು. ಸೋತವರು, ಗೆದ್ದವರು ಸಂಭ್ರಮಿಸದ ಕಾಲ ಮರೆಯಾಗುತ್ತಿದೆ. ನಾಪೋಕುವಿನಲ್ಲಿ ನಡೆದ ಕುಂಡ್ಯೋಳಂಡ ಹಾಕಿ ನಮ್ಮೆಯಲ್ಲಿ 4834 ಆಟಗಾರರು ಪಾಲ್ಗೊಳ್ಳುವ ಮೂಲಕ ಫೀಲ್ಡ್ ಹಾಕಿ ಟೂರ್ನಿಯಲ್ಲಿ ಪಾಲ್ಗೊಂಡ ಅತೀ ಹೆಚ್ಚು ಆಟಗಾರರು ಎಂಬ ಗೌರವದೊಂದಿಗೆ ಗಿನ್ನಿಸ್ ವಿಶ್ವ ದಾಖಲೆ ದೊರೆತಿರುವುದು ಈ ವರ್ಷದ ಕ್ರೀಡಾಕೂಟದ ವಿಶೇಷತೆಯಾಗಿತ್ತು. ಗಿನ್ನಿಸ್ ದಾಖಲೆಯ ಟೂರ್ನಿಯನ್ನು ಗೆದ್ದಿರುವ ಸಾಧಕ ತಂಡವಾಗಿ ಚೇಂದಂಡ ಕುಟುಂಬ ಸಂಭ್ರಮಿಸಿದೆ. ನೆಲ್ಲಮಕ್ಕಡ ಉತ್ತಮ ಪೈಪೋಟಿಯೊಂದಿಗೆ ಸೋಲನುಭವಿಸಿ ದಾಖಲೆಗೆ ಸಾಕ್ಷಿಯಾಗಿದೆ. ಕೊಡವ, ಅಮ್ಮಕೊಡವ, ಗೌಡ, ಹೆಗ್ಗಡೆ ಸೇರಿದಂತೆ ಜಿಲ್ಲೆಯಲ್ಲಿನ ಬಹುತೇಕ ಜನಾಂಗದ ಸದಸ್ಯರು ಪ್ರತ್ಯೇಕವಾಗಿ ಕ್ರೀಡೆ ನಡೆಸಿ ಸಂಭ್ರಮಿಸಿದ್ದರು.
ನೆಸ್ಟ್ಲೆ ಹಾಕಿ: ಕೊಡಗಿನ ಒಲಿಂಪಿಕ್ಸ್ ಖ್ಯಾತಿಯ ನೆಸ್ಟ್ಲೆ ಕಪ್ ಹಾಕಿಗೆ ಈ ವರ್ಷ ಮರುಜೀವ ಪಡೆದುಕೊಂಡು ಕಾಕೋಟುಪರಂಬಯ ಮೈದಾನದಲ್ಲಿ ನಡೆಯಿತು. ನೆಸ್ಲೆ ಇಂಡಿಯಾ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಹಾಕಿ ಕೂರ್ಗ್ ಸಹಯೋಗದಲ್ಲಿ 8 ತಂಡಗಳು ಪಾಲ್ಗೊಂಡು ವಿಶೇಷತೆ ಮೂಡಿಸಿದವು. ದಶಕಗಳ ಕಾಲ ಸ್ಥಗಿತಗೊಂಡಿದ್ದ ಟೂರ್ನಿ ಮತ್ತೆ ನಡೆದು ಇತಿಹಾಸ ನಿರ್ಮಿಸಿತು. ಮೂರ್ನಾಡು ಬ್ಲೇಜ್ ಚಾಂಪಿಯನ್, ಕೋಣನಕಟ್ಟೆ ಇಲೆವೆನ್ ರನ್ನರ್ ಅಪ್ ಸ್ಥಾನ ಪಡೆದಿದೆ.
ಪಕ್ಷಗಳ ಬಲಾಬಲ ಪ್ರದರ್ಶನ: ಲೋಕಸಭೆಗೆ ನಡೆದ ಚುನಾವಣೆ ರಾಜಕೀಯ ಪಕ್ಷಗಳ ಬಲಾಬಲ ಪ್ರದರ್ಶನಕ್ಕೆ ವೇದಿಕೆಯಾಯಿತು. ಬಿಜೆಪಿ ಮತ್ತು ಕಾಂಗ್ರೆಸ್ ನೇರ ಪೈಪೋಟಿಯೊಂದಿಗೆ ಸ್ಪರ್ಧಿಸಿದ್ದವು. ಎನ್ಡಿಎ ಮೂಲಕ ಬೆಂಬಲ ಸೂಚಿಸಿದ ಜೆಡಿಎಸ್ ಪಕ್ಷ ಕೂಡ ಹೋರಾಟದಲ್ಲಿ ಭಾಗಿಯಾಗಿತ್ತು. ಆರೋಪ, ಪ್ರತ್ಯಾರೋಪಗಳ ನಂತರ ಮತದಾನ ಎದುರಿಸಲಾಯಿತು. ಗೆಲುವಿಗಾಗಿ ಪರಸ್ಪರ ಕಾಲೆಳೆಯುವ ತಂತ್ರಕ್ಕೆ ಮತದಾರನ ಆಟ ವಿಶೇಷತೆ ಪಡೆದುಕೊಂಡಿತು. ಕೊಡಗು-ಮೈಸೂರು ಲೋಕಸಭೆ ಚುನಾವಣೆಯಲ್ಲಿ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪರ್ಧಿಸುವ ಮೂಲಕ ಚುನಾವಣೆಗೆ ವಿಶೇಷ ಮೆರಗು ತಂದರು. ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರನ್ನು 1.39 ಲಕ್ಷ ಮತಗಳ ಅಂತರದಿಂದ ಜಯಿಸಿ ಚುನಾವಣಾ ಕಾವಿಗೆ ತಂಪೆರೆದರು.
ನೈರುತ್ಯ ಕ್ಷೇತ್ರ: ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಕ್ಕೆ ಕೂಡ ಚುನಾವಣೆ ನಡೆಯಿತು. ರಾಜಕೀಯ ಪಕ್ಷದ ನಾಯಕರುಗಳು, ಶಿಕ್ಷಕರು, ಪದವೀಧರರು ಚುನಾವಣೆಯ ಭಾಗವಾದರು. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬೋಜೇಗೌಡ, ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಧನಂಜಯ ಸರ್ಜಿ ಗೆಲುವು ಕಂಡಿದ್ದಾರೆ.
ಬರದ ಬರೆ: ಬರಗಾಲ ಹಿನ್ನೆಲೆ, ಜಿಲ್ಲೆಯಲ್ಲಿ ಬಿಸಿಲಿಗೆ ಬಹು ವಾರ್ಷಿಕ ಬೆಳೆಗಳಾದ ಕಾಫಿ, ಕರಿಮೆಣಸು ಮತ್ತು ಅಡಕೆ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಸರಾಸರಿ 36 ಡಿ.ಸೆ.ದಾಖಲೆಯಿಂದ ಸಂಕಷ್ಟು ಎದುರಿಸಿದ್ದಾರೆ. ಸಾಕಷ್ಟು ಬೆಳೆ ನಷ್ಟ ಎದುರಾಗಿದೆ.
ಚುರುಕು: ಜಿಲ್ಲೆಯಲ್ಲಿ 32,500 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವ ಗುರಿ ಇದ್ದು, ಇದರಲ್ಲಿ 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. 3,500 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲು ಸಿದ್ದತೆ ನಡೆದಿದೆ. ಸುಮಾರು 1871 ಕ್ವಿಂಟಾಲ್ನಷ್ಟು ಭತ್ತ ಬಿತ್ತನೆ ಬೀಜ, 41 ಕ್ವಿಂಟಾಲ್ ಮುಸುಕಿನ ಜೋಳ ಬಿತ್ತನೆ ಬೀಜ ದಾಸ್ತಾನು ಇದ್ದು, 80,946 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದ್ದು, 35,774 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. ಕಾಫಿ, ಕರಿಮೆಣಸು ಕೃಷಿಯತ್ತ ವಾಲಿದ್ದಾರೆ.
ಫೋಟೋ 9 ಎಂಡಿಕೆ 05 ; ಕುಂಡ್ಯೋಳಂಡ ಕುಟುಂಬದ ಸದಸ್ಯರು ಉಳುಮೆ ಮಾಡುತ್ತಿರುವುದು (ಸಂಗ್ರಹಚಿತ್ರ)
06 ; ಕೊಡವ ಹಾಕಿ