ಮಂಡ್ಯ: ದುಡ್ಡಿನಿಂದ ಯಾರೂ ಗೆಲ್ಲಲು ಸಾಧ್ಯವಿಲ್ಲ. ಜನರ ಪ್ರೀತಿ ಪಡೆದವರು ಗೆಲ್ಲಲು ಸಾಧ್ಯ ಎಂದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ದೊಡ್ಡವರು, ಹಿರಿಯರಾಗಿದ್ದಾರೆ. ದೇವರು ಯಾರಿಗೆ ಆಶೀರ್ವಾದ ಮಾಡುತ್ತಾನೋ ಮಾಡಲಿ ಎನ್ನುವ ಮೂಲಕ ಕುಮಾರಸ್ವಾಮಿ ವಿರುದ್ಧ ಸ್ಪರ್ಧೆಗೆ ತಯಾರಾಗಿದ್ದೇವೆ. ನಮ್ಮ ಪಕ್ಷದಿಂದ ಈಗಾಗಲೇ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಅದರಂತೆ ಚುನಾವಣೆ ಮಾಡುತ್ತೇವೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮಂಡ್ಯದಲ್ಲಿಯೇ ಮನೆ ಮಾಡಿ ಜನರ ಸೇವೆ ಮಾಡುತ್ತೇನೆ. ಜನರ ಸೇವೆ ಮಾಡಲು ಬಂದಿದ್ದೇನೆ. ಅವಕಾಶ ಮಾಡಿಕೊಡಬೇಕು. ಜಿಲ್ಲೆಯ ಶಾಸಕರ ಋಣ ತೀರಿಸಲು ಸಾಧ್ಯವಾಗಲ್ಲ. ಎಲ್ಲಾ ಶಾಸಕರು ಸಾಥ್ ಕೊಡುತ್ತಿದ್ದಾರೆ. ನಮ್ಮ ನಾಯಕರ ಜೊತೆ ಸೇರಿ ಕೆಲಸ ಮಾಡುತ್ತೇನೆ. ನಾನು ಗೆದ್ದೆ ಗೆಲ್ಲುತ್ತೇನೆ ಎನ್ನುವ ವಿಶ್ವಾಸವಿದೆ ಎಂದರು.
ಈಗಾಗಲೇ ಜನರು ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಸಂಸದರು ಎಂದು ಹಾಕಿಕೊಂಡಿದ್ದಾರೆ. ನಾನು ದುಡ್ಡು ಮಾಡಲು ಬಂದಿಲ್ಲ. ಜನರ ಸೇವೆ ಮಾಡಲು ಬಂದಿದ್ದೇನೆ. ಒಂದು ಅವಕಾಶ ಕೊಡಿ ಸೇವೆ ಮಾಡಲು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಶಾಸಕ ಪಿ.ರವಿಕುಮಾರ್ಗೌಡ ಗಣಿಗ, ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಎಂ.ಎಸ್.ಚಿದAಬರ್ ಸೇರಿದಂತೆ ಮತ್ತಿತರರಿದ್ದರು.
—-ಬಾಕ್ಸ್—-
ದುಡ್ಡು ಕೊಟ್ಟು ಆಶೀರ್ವದಿಸಿದ ಹಿರಿಯ ಮಹಿಳೆ
ಮಂಗಳವಾರ ಬೆಳಿಗ್ಗೆಯಿಂದಲೇ ಕಾಂಗ್ರೆಸ್ ಹಾಗೂ ಸ್ಥಳೀಯ ಮುಖಂಡರ ಮನೆಗಳಿಗೆ ಭೇಟಿ ನೀಡಿದ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಬೆಂಬಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ರತ್ನಮ್ಮಚನ್ನೇಗೌಡ ಎಂಬ ಹಿರಿಯ ಮಹಿಳೆಯೊಬ್ಬರು ಸ್ಟಾರ್ ಚಂದ್ರು ಅವರಿಗೆ ಹಣ ನೀಡಿ ಗೆದ್ದು ಬರುವಂತೆ ಆಶೀರ್ವಾದ ಮಾಡಿದರು.
Leave a comment