– ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ
– ದಮನಿತರ ಬಂಗಾರದ ದಿನ ವೈಚಾರಿಕ ಸಮೇಳನ
ಪ್ರತಿನಿಧಿ ವರದಿ ಮೈಸೂರು
ಅಂಬೇಡ್ಕರ್ ಅವರ ವಿಚಾರ, ಚಿಂತನೆಗಳನ್ನು ಅರ್ಥ ಮಾಡಿಕೊಳ್ಳದ ಹಾಗೂ ಅವುಗಳನ್ನು ಪಾಲನೆ ಮಾಡದವರು ದೇಶಕ್ಕೆ ಕಂಟಕವಾಗಿದ್ದು, ಅವರುಗಳು ನಿಜವಾದ ದೇಶ ದ್ರೋಹಿಗಳಾಗಿದ್ದಾರೆ ಎಂದು ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ಚಾರ್ವಾಕ ಸಂಸ್ಥೆ ವತಿಯಿಂದ ಶನಿವಾರ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ದಮನಿತರ ಬಂಗಾರದ ದಿನ ವೈಚಾರಿಕ ಸಮೇಳನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಧರ್ಮದ ಅಫೀಮು ಬಿತ್ತುವ ಮೂಲಕ ದೇಶದ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಸಂವಿಧಾನ ಮತ್ತು ಮನುಸ್ಮೃತಿ ನಡುವೆ ಸಂಘರ್ಷ ತೀವ್ರವಾಗಿದ್ದು, ಪರಿಣಾಮ ಪ್ರಜಾಪ್ರಭುತ್ವಕ್ಕೆ ವಿಪತ್ತು ಎದುರಾಗಿದೆ. ದೇಶದಲ್ಲಿರುವ ಶೇ.2ರಷ್ಟು ಜನರಿಗೆ ಮನವಿ, ಹೋರಾಟ, ಆಯೋಗ ರಚನೆ, ಚರ್ಚೆ, ಸಂವಾದವಿಲ್ಲದೆ ಶೇ.10ರಷ್ಟು ಮೀಸಲಾತಿ ನೀಡಲಾಗಿದೆ. ಇದಕ್ಕೆ ದೇಶದ ಸಂವಿಧಾನದಲ್ಲಿ ಅವಕಾಶ ಇದೆಯೇ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ ಎಂದು ಹೇಳಿದರು.
ದೇಶದ ಸಂಕಷ್ಟ ಕಾಲದಲ್ಲೂ ಪ್ರಧಾನಿ ನರೇಂದ್ರ ಮೋದಿ ಜಾಣಮೌನ ಮತ್ತು ಮಹಾಮೌನ ವ್ರತ ಪಾಲನೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬುದ್ಧಿವಂತರು, ಜ್ಞಾನಿಗಳು ಮಾತನಾಡದಿದ್ದರೆ ಪ್ರಕೃತಿಗೆ ದ್ರೋಹ ಮಾಡಿದಂತಾಗಲಿದೆ. ಮಾತನಾಡುವ ಸಂದರ್ಭದಲ್ಲೇ ಮಾತನಾಡಬೇಕಾಗಿದ್ದು, ಸಂವಿಧಾನ, ಪ್ರಜ್ಞಾಪ್ರಭುತ್ವದ ಕತ್ತುಹಿಸುವ ಪರಿಸ್ಥಿತಿಯ ಕುರಿತು ಜನರಿಗೆ ತಿಳಿಸಬೇಕಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಗಿರೀಶ್ ಮಾಚಳ್ಳಿ ರಚನೆ ಹಾಗೂ ನಿರ್ದೇಶನದ ಬುದ್ಧಯಾನ ನಾಟಕ ಪ್ರದರ್ಶನಗೊಂಡಿತು. ವೇದಿಕೆಯಲ್ಲಿ ಚಾಮರಾಜನಗರ ನಳಂದ ಬುದ್ಧ ವಿಹಾರದ ಬೋಧಿದತ್ತ ಭಂತೇಜಿ, ಸಮೇಳನ ಸಂಚಾಲಕ ಅಹಿಂದ ಜವರಪ್ಪ, ಚಿಂತಕರಾದ ವಾಸು, ಜಗದೀಶ್, ಡಾ.ಜಗನ್ನಾಥ ಇತರರಿದ್ದರು.
==================