ಚಾಮರಾಜನಗರ: ಇನ್ನೇನು ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಎಲ್ಲೆಡೆ ಅಬ್ಬರದ ಪ್ರಚಾರಗಳು ಕೂಡ ನಡೆಯುತ್ತಿದೆ. ಇದರ ಮಧ್ಯೆ ಚಾಮರಾಜನಗರ ಜಿಲ್ಲಾಡಳಿತ ಮತದಾರರ ಪ್ರಮಾಣ ಹೆಚ್ಚಿಸಲು ಹೊಸದೊಂದು ಪ್ರಯತ್ನಕ್ಕೆ ಮುನ್ನುಡಿ ಬರೆದಿದೆ. ನೀವು ಮದುವೆಯ ಮಮತೆಯ ಕರೆಯೋಲೆ ನೋಡಿದ್ದೀರಿ, ಆದರೆ, ಮತದಾನದ ಮಮತೆಯ ಕರೆಯೋಲೆ ನೋಡಿದ್ದೀರಾ?,
ಹೌದು, ಮತದಾನ ಪ್ರಮಾಣ ಹೆಚ್ಚಿಸಲು ಚಾಮರಾಜನಗರ ಜಿಲ್ಲಾಡಳಿತದಿಂದ ವಿನೂತನ ರೀತಿಯ ಆಮಂತ್ರಣ ಪತ್ರ ಅನಾವರಣಗೊಂಡಿದೆ. ಜಿಲ್ಲಾ ಸ್ವೀಪ್ ಸಮಿತಿಯಿಂದ ವಿಶಿಷ್ಟ ಆಮಂತ್ರಣ ಪತ್ರಿಕೆ ಹೊರಡಿಸಿದ್ದು, ದಿನಾಂಕ 26.4.24 ರ ಶುಕ್ರವಾರ ಬೆಳಿಗ್ಗೆ 7 ರಿಂದ ಸಂಜೆ 6 ರಂದು ಸಲ್ಲುವ ಶುಭ ಲಗ್ನದಲ್ಲಿ ಲೋಕಸಭಾ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನಲೆ ನಿಮ್ಮ ಆಗಮನವೇ ಆಶೀರ್ವಾದ, ಮತದಾನವೇ ಉಡುಗೊರೆಯಾಗಲಿದೆ. ನಿಮ್ಮ ಹೆಸರು ನಮ್ಮ ಚುನಾವಣಾ ಮತದಾರರ ಪಟ್ಟಿಯಲ್ಲಿದೆ. ಹೀಗೆ ವಿವಾಹ ಆಮಂತ್ರಣ ಪತ್ರವನ್ನೇ ಹೋಲುವ ವಿಶಿಷ್ಟ ಆಮಂತ್ರಣ ಪತ್ರಿಕೆ ಇದಾಗಿದೆ.
ಇಂತಹ ವಿಶಿಷ್ಟ ಬೃಹತ್ ಆಮಂತ್ರಣ ಪತ್ರಿಕೆಯನ್ನು ಚಾಮರಾಜನಗರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಅನಾವರಣಗೊಳಿಸಲಾಯಿತು. ಇನ್ನೊಂದೆಡೆ ಮದುವೆ ಮನೆಯಲ್ಲೂ ಮತದಾನ ಜಾಗೃತಿ ನಡೆದಿದ್ದು, ನೂತನ ವಧು-ವರರಿಂದ ಮತದಾನದ ಮಹತ್ವ ಕುರಿತ ಬಿತ್ತಿ ಚಿತ್ರ ಬಿಡುಗಡೆಗೊಳಿಸಲಾಗಿದೆ. ನಮ್ಮ ಮತ ನಮ್ಮ ಹಕ್ಕು, ಚುನಾವಣಾ ಪರ್ವ ದೇಶದ ಗರ್ವ ಎಂಬ ಒಕ್ಕಣೆಯುಳ್ಳ ಬಿತ್ತಿ ಚಿತ್ರ ಇದಾಗಿದ್ದು, ಈ ಮೂಲಕ ವಿವಾಹಕ್ಕೆ ಆಗಮಿಸಿದ್ದವರಿಗೆ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಲಾಗಿದೆ.