ಪ್ರತಿನಿಧಿ ವರದಿ ಹಾಸನ
ಮೇದಿನಿ ನೃತ್ಯ ನಿಕೇತನ ಕಲಾ ಸಂಘಕ್ಕೆ 25 ವರ್ಷ ತುಂಬಿದ ಹಿನ್ನೆಲೆ ಬೆಳ್ಳಿ ಸಂಭ್ರಮ ಮತ್ತು ಸಿಂಹಾಸನಪುರಿ ವೈಭವ ನೃತ್ಯ ರೂಪಕ ಪ್ರಸ್ತುತಿ ಕಾರ್ಯಕ್ರಮವನ್ನು ಆ.11 ರಂದು ಆಯೋಜಿಸಲಾಗಿದೆ ಎಂದು ನೃತ್ಯ ನಿಕೇತನ ಸಂಸ್ಥೆಯ ಭಾನು ಚಿದಾನಂದ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮೇದಿನಿ ನೃತ್ಯ ನಿಕೇತನ ಸಂಸ್ಥೆಯನ್ನು ಆರಂಭಿಸಿ ಭರತ ನಾಟ್ಯ ಕ್ಷೇತ್ರದಲ್ಲಿ ಆಸಕ್ತರಿಗೆ ನಾಟ್ಯವನ್ನು ಕಲಿಸುತ್ತ ಕಳೆದ ಇಪ್ಪತೈದು ವರ್ಷಗಳಿಂದ ಭರತ ನಾಟ್ಯದಲ್ಲಿ ನೃತ್ಯ ಕ್ಷೇತ್ರದಲ್ಲಿ ತನ್ನದೇ ಆದ ಸೇವೆ ಸಲ್ಲಿಸುತ್ತಿದೆ. ಸಂಸ್ಥೆ ಆರಂಭಗೊಂಡು ಇಪ್ಪತ್ತೈದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಂಹಾಸನ ಪುರಿ ವೈಭವ ನೃತ್ಯ ರೂಪಕ ಪ್ರಸ್ತುತಿ ಕಾರ್ಯಕ್ರಮವನ್ನು ಇದೇ ಆ.11 ಭಾನುವಾರ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಭಾರತೀಯ ಸಂಗೀತ ನೃತ್ಯ ಕಲಾ ಶಾಲೆಯ ಗುರು ವಿದುಷಿ ಕೆ.ಎಸ್. ಅಂಬಳೆ ರಾಜೇಶ್ವರಿ, ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕಸಾಪ ಜಿಲ್ಲಾಧ್ಯಕ್ಷ ಮಲ್ಲೇಶ್ ಗೌಡ, ಹಾಸನ ಆಕಾಶವಾಣಿ ನಿರ್ವಾಹಕ ಡಾ.ವಿಜಯ್ ಅಂಗಡಿ, ಟಿ.ಪಿ.ರಂಗನಾಥ ಗುಪ್ತ ಸೇರಿದಂತೆ ಇತರರು ಆಗಮಿಸಲಿದ್ದಾರೆ.
ಸಂಸ್ಥೆಯು ಆಸಕ್ತರಿಗೆ ಭರತ ನಾಟ್ಯವನ್ನು ಕಲಿಸುತ್ತ ನಮ್ಮ ನೆಲೆದ ನೃತ್ಯವನ್ನು ಕಲಿಸಲಾಗುತ್ತಿದೆ. ಭರತ ನಾಟ್ಯಕ್ಕೆ ದಿನಗಳು ಕಳೆದಂತೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ. ಸರ್ಕಾರ ಇಲಾಖೆ ನಮ್ಮ ಸಂಸ್ಕøತಿಯಾದ ಭರತ ನಾಟ್ಯವನ್ನು ಬೆಂಬಲ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಎಂದು ಮನವಿ ಮಾಡಿದರು ಹಾಗೂ ಜಿಲ್ಲೆಯ ಕಲಾವಿದರು ನಮ್ಮ ಸಂಸ್ಥೆ ಆಯೋಜಿಸಿರುವ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಸ್ವಪ್ನರಂಗಸ್ವಾಮಿ ಜತೆಯಲ್ಲಿದ್ದರು.